ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಅಗತ್ಯವಿದೆ: ಎಂ.ವೆಂಕಯ್ಯ ನಾಯ್ಡು

Update: 2020-01-07 16:52 GMT

ಬೆಂಗಳೂರು, ಜ.7: ನಮ್ಮ ದೇಶದ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಉಚಿತ ವಿದ್ಯುತ್, ಸಾಲ ಮನ್ನಾದಂತಹ ತಾತ್ಕಾಲಿಕ ಪರಿಹಾರದ ಅಗತ್ಯವಿಲ್ಲ. ರೈತರ ಬದುಕಿಗೆ ಭದ್ರತೆ ಒದಗಿಸುವಂತಹ ಶಾಶ್ವತವಾದ ಪರಿಹಾರವನ್ನು ಒದಗಿಸುವ ಅಗತ್ಯವಿದೆ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪ್ರತಿಪಾದಿಸಿದರು.

ಮಂಗಳವಾರ ನಗರದ ಜಿ.ಕೆ.ವಿ.ಕೆ.ಯ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರ್‌ರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಆಯೋಜಿಸಲಾಗಿದ್ದ 107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ರೈತ ಸ್ವಾವಲಂಬಿಯಾಗಿ ಬದುಕುವಂತಹ ವಾತಾವರಣ ನಿರ್ಮಿಸಬೇಕು. ಕೃಷಿ ಕ್ಷೇತ್ರದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಸದ್ಭಳಕೆಯಾಗಬೇಕು. ಆಗ ಮಾತ್ರ ರೈತರ ಆದಾಯ ಮುಂದಿನ ದಿನಗಳಲ್ಲಿ ದ್ವಿಗುಣಗೊಳ್ಳಲು ಸಾಧ್ಯ. ಸರಕಾರಗಳು ಈ ವಿಚಾರವನ್ನು ತಮ್ಮ ಆದ್ಯತೆಯನ್ನಾಗಿಸಿಕೊಳ್ಳಲಿ ಎಂದು ವೆಂಕಯ್ಯ ನಾಯ್ಡು ಸಲಹೆ ನೀಡಿದರು.

ದೇಶದ ವಿವಿಧ ಭಾಗದಿಂದ ವಿಜ್ಞಾನಿಗಳು, ಯುವ ವಿಜ್ಞಾನಿಗಳು, ಆಸಕ್ತರು ಕಳೆದ ಐದು ದಿನಗಳಿಂದ ಉತ್ತಮ ಜ್ಞಾನವನ್ನು ವಿಜ್ಞಾನದ ಮೂಲಕ ನೀಡಿದ್ದಾರೆ. ಕೃಷಿ ನಮ್ಮ ದೇಶದ ಮೂಲ ಸಂಸ್ಕೃತಿಯಾಗಿದೆ. ಇದನ್ನು ಬಳಸಿಕೊಂಡು ನಾವು ಮುಂದೆ ಸಾಗಬೇಕಿದೆ ಎಂದು ಅವರು ಕರೆ ನೀಡಿದರು.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಜ್ಞಾನಿಗಳು ಹೆಚ್ಚಿನ ಸಂಶೋಧನೆಯನ್ನು ಮಾಡಬೇಕಿದೆ. ಗ್ರಾಮೀಣ ಭಾಗದ ರೈತರು ಹಲವು ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಪರಿಹಾರ ಕಲ್ಪಿಸಿ ಅವರ ಬದುಕು ಹಸನಾಗಿಸಬೇಕು. ಸರಕಾರ ಕೂಡ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ರೈತರಿಗೆ ಉತ್ತಮ ತಂತ್ರಜ್ಞಾನ ಪರಿಚಯಿಸಿ. ಆಹಾರ ಭದ್ರತೆಗಾಗಿ ಆಮದನ್ನು ಅನುಸರಿಸಬೇಡಿ. ಸ್ಥಳೀಯವಾಗಿ ಉತ್ಪಾದಿಸಲು ಪ್ರೋತ್ಸಾಹ ನೀಡಿದಾಗ ಮಾತ್ರ ರೈತರ ಭವಿಷ್ಯ ಬೆಳಗುವ ಜೊತೆಗೆ ದೇಶದ ಪ್ರಗತಿಯು ಆಗಲಿದೆ. ಇಂತಹ ಸಮಾವೇಶಗಳು ಕೃಷಿ ಬೆಳವಣಿಗೆಗೆ ವಿಶೇಷ ಒತ್ತು ನೀಡಬೇಕು ಎಂದು ಅವರು ಹೇಳಿದರು.

ಹೊಸ ಕೃಷಿ ವಿಧಾನ ಅಳವಡಿಸುವ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬೇಕು. ಮಣ್ಣು ಗುಣಮಟ್ಟ, ನೀರು ಸಂಸ್ಕರಣೆ, ಉತ್ತಮ ಉತ್ತೇಜನ ನೀಡಬೇಕು. ಇ- ಮಾರುಕಟ್ಟೆ ಸ್ಪರ್ಧೆ ಎದುರಿಸಲು ರೈತರಿಗೆ ಅನುಕೂಲ ಕಲ್ಪಿಸಬೇಕು. ತರಕಾರಿ ಬೆಳೆ ಸಂಗ್ರಹಕ್ಕೆ, ರಫ್ತಿಗೆ ಉತ್ತಮ ಅವಕಾಶ ಕೊಡಬೇಕು ಎಂದು ಉಪ ರಾಷ್ಟ್ರಪತಿ ಹೇಳಿದರು.

ನಮ್ಮ ದೇಶದಲ್ಲಿ ಪ್ರಶ್ನೆ ಮಾಡುವವರ ಸಂಖ್ಯೆ ಹೆಚ್ಚಿದೆ. ಆದರೆ, ಉತ್ತರ ಕೊಡುವವರು ಇಲ್ಲ. ಬದುಕಿನಲ್ಲಿ ವೌಲ್ಯಗಳು ಕುಸಿಯುತ್ತಿವೆ. ಇವತ್ತು ಮಕ್ಕಳಿಗೆ ತಮ್ಮ ಜೀವನದಲ್ಲಿ ಯಾವ ರೀತಿ ವೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಹೇಳಿಕೊಡುವ ಅಗತ್ಯವಿದೆ ಎಂದು ಉಪ ರಾಷ್ಟ್ರಪತಿ ಹೇಳಿದರು.

ಶಾಲೆಗಳು ಮಕ್ಕಳಿಗೆ ಉತ್ತಮ ತಂತ್ರಜ್ಞಾನ ಸಹಿತ ಕಲಿಕೆಗೆ ಅವಕಾಶ ಮಾಡಿಕೊಡಬೇಕು. ಇದು ವೈಜ್ಞಾನಿಕ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಕರ್ತವ್ಯವಾಗಿದೆ. ಇಲ್ಲವಾದರೆ ನಾವು ಸ್ಪರ್ಧಾ ಕ್ಷೇತ್ರದಲ್ಲಿ ಹಿಂದುಳಿಯುತ್ತೇವೆ. ಸಂಶೋಧನೆ ಕಾರ್ಯ ಹೆಚ್ಚಾಗಬೇಕು. ಇದಕ್ಕೆ ಸರಕಾರದ ಜೊತೆ ಖಾಸಗಿ ಸಂಸ್ಥೆಗಳು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಐದು ದಿನಗಳ ಕಾಲ ನಡೆದ ಈ ಸಮ್ಮೇಳನದಲ್ಲಿ ಮೊದಲ ದಿನದಿಂದಲೂ ಉತ್ತಮ ಆಸಕ್ತಿ ಕಂಡಿದ್ದೇನೆ. ವಿಜ್ಞಾನ, ತಂತ್ರಜ್ಞಾನದ ವಿಚಾರದಲ್ಲಿ ಕಾಣಿಸಿದ ಆಸಕ್ತಿ ಗಮನಿಸಿದ್ದೇನೆ. ಈ ಐದು ದಿನ ಸಾವಿರಾರು ವಿಜ್ಞಾನಿಗಳು, ಯುವಕರು ಪಾಲ್ಗೊಂಡು ಬೌದ್ಧಿಕ ಜ್ಞಾನ ಹೆಚ್ಚಿಸಿಕೊಂಡಿದ್ದಾರೆ ಎಂದರು.

ಜ್ಞಾನ ನಿಂತ ನೀರಾಗಬಾರದು. ವಿಜ್ಞಾನ, ತಂತ್ರಜ್ಞಾನ ಬೇರೆ ಬೇರೆ ಅಲ್ಲ. ಇವು ಒಂದಾಗಿ ಜನೋಪಕಾರಿಯಾಗಲು ಶ್ರಮಿಸಬೇಕು. ಈ ಕಾರ್ಯಕ್ರಮ ಅದಕ್ಕೆ ಉತ್ತಮ ವೇದಿಕೆಯಾಗಿದೆ. ಉತ್ತಮ ಗುರಿ ಸಾಧಿಸಲು ಇದು ಸಹಕಾರಿಯಾಗಿದೆ. ವಿಜ್ಞಾನಿಗಳು ಇಲ್ಲಿ ತಮ್ಮ ಜ್ಞಾನವನ್ನು ಸಾಮಾನ್ಯ ನಾಗರಿಕರಿಗೆ ಅರಿವು ಮೂಡಿಸಲು ಅವಕಾಶವಾಗಿದೆ ಎಂದು ಅವರು ಹೇಳಿದರು. ದೇಶವನ್ನು ಕಾಡುತ್ತಿರುವ ಹಲವು ಸಮಸ್ಯೆಗೆ ಪರಿಹಾರ ಹುಡುಕುವ ಕಾರ್ಯ ಮಾಡಿ. ಅದಕ್ಕೆ ಉತ್ತಮ ಅವಕಾಶ ಇದೆ. ಕೃಷಿ ವಿಶ್ವವಿದ್ಯಾಲಯವು ಈ ಸಮ್ಮೇಳನದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದೆ. ಪ್ರತಿಯೊಬ್ಬರ ಶ್ರಮಕ್ಕೆ ಫಲ ಸಿಕ್ಕಿದೆ ಎಂದು ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕೋಲ್ಕತ್ತಾ ಐಎಸ್‌ಸಿಎ ಪ್ರಧಾನ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ, ಕೋಲ್ಕತಾ ಐಎಸ್‌ಸಿಎ 2021ರ ಚುನಾಯಿತ ಅಧ್ಯಕ್ಷೆ ಪ್ರೊ.ವಿಜಯಲಕ್ಷ್ಮಿ ಸಕ್ಸೆನಾ, ಜಿಕೆವಿಕೆ ಉಪ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News