ಸಿಎಎ, ಎನ್‌ಆರ್‌ಸಿ ವಿರುದ್ಧದ ಹೋರಾಟ ಭಾರತೀಯರು-ಆರೆಸ್ಸೆಸ್ ನಡುವಿನ ಸಂಘರ್ಷ: ದೇವನೂರ ಮಹಾದೇವ

Update: 2020-01-08 14:40 GMT

ಬೆಂಗಳೂರು, ಜ.8: ಸಿಎಎ, ಎನ್‌ಪಿಆರ್‌ ಹಾಗೂ ಎನ್‌ಆರ್‌ಸಿ ಕಾಯ್ದೆಗಳ ವಿರುದ್ಧದ ಹೋರಾಟವು 99% ಭಾರತೀಯರು ಹಾಗೂ ಶೇ.1ರಷ್ಟಿರುವ ಕೋಮುವಾದಿ ಆರೆಸ್ಸೆಸ್ ನಡುವಿನ ಸಂಘರ್ಷವಾಗಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ವಿಶ್ಲೇಷಿಸಿದ್ದಾರೆ.

ಬುಧವಾರ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ದೇಶವಿರೋಧಿ ಸಿಎಎ, ಎನ್‌ಪಿಆರ್ ಹಾಗೂ ಎನ್‌ಆರ್‌ಸಿ ಕಾಯ್ದೆಗಳ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಾತ್ಯತೀತ, ಸಮಾನತೆಯ ಮೂಲ ಆಶಯಗಳನ್ನು ಪ್ರತಿಪಾದಿಸುವ ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿರುವ ಸಂವಿಧಾನಕ್ಕೆ ಇಲಿಗಳ ರೀತಿಯಲ್ಲಿ ಬಿಲ ತೋಡುತ್ತಿರುವ ಆರೆಸ್ಸೆಸ್, ಬಿಜೆಪಿಗೆ ದೇಶದ ವಿದ್ಯಾರ್ಥಿ ಸಮುದಾಯ ತಕ್ಕ ಉತ್ತರ ನೀಡುತ್ತಿದ್ದಾರೆ. ಈ ವಿದ್ಯಾರ್ಥಿಗಳ ಜೊತೆಗೆ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ಭವ್ಯ ನರಸಿಂಹಮೂರ್ತಿ ಸೇರಿದಂತೆ ಹಲವಾರು ನಾಯಕರು ದೇಶಾದ್ಯಂತ ತಿರುಗಾಡಿ ಹೋರಾಟವನ್ನು ಸಂಘಟಿಸುತ್ತಿರುವುದು ಹೊಸ ಭರವಸೆ ಮೂಡಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನನ್ನ ಜನ್ಮ ದಿನಾಂಕವೇ ಗೊತ್ತಿಲ್ಲ: ನಾನು ಹುಟ್ಟಿದ ದಿನಾಂಕವೇ ನನಗೆ ಗೊತ್ತಿಲ್ಲ. ಇನ್ನು ನನ್ನ ತಂದೆಯ ಹುಟ್ಟಿದ ದಿನಾಂಕವನ್ನು ಎಲ್ಲಿಂದ ತರಲಿ. ನನ್ನ ತಂದೆ ಹುಟ್ಟಿದ್ದು, ಮೋದಿ ಹುಟ್ಟಿದ 5 ವರ್ಷದ ಹಿಂದೆ, ಅಮಿತ್ ಶಾ ಹುಟ್ಟಿದ 10 ವರ್ಷದ ಹಿಂದೆ ಎಂದು ಉತ್ತರಿಸಲೇ. ನನ್ನ ಮೂಲ ಹರಪ್ಪ, ಮೆಹೆಂಜದಾರೋದಲ್ಲಿದೆ. ಈಗ ಅದು ಪಾಕಿಸ್ತಾನದಲ್ಲಿದೆ. ಇಂತಿರುವಾಗ ನನ್ನ ಜನ್ಮ ದಿನಾಂಕವನ್ನು ಹೇಗೆ ಸಾಬೀತು ಪಡಿಸಲಿ ಎಂದು ಅವರು ಪ್ರಶ್ನಿಸಿದರು.

ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ನಡೆಯುತ್ತಿರುವ ದೇಶವ್ಯಾಪಿ ಹೋರಾಟಕ್ಕೆ ಯಾವುದೇ ಪಕ್ಷ, ನಾಯಕರ ನೇತೃತ್ವ ಇಲ್ಲವೆಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಇವರ ಹೋರಾಟಕ್ಕೆ ಸಂವಿಧಾನವೇ ನೇತೃತ್ವ ವಹಿಸಿದೆ. ಸಂವಿಧಾನದ ಮೂಲ ಆಶಯಗಳನ್ನು ಉಳಿಸಬೇಕೆಂಬ ಏಕೈಕ ಉದ್ದೇಶದಿಂದ ದೇಶಾದ್ಯಂತ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಬ್ರಿಟಿಷರ ವಿರುದ್ದವೂ ಇದೇ ಮಾದರಿಯಲ್ಲಿ ಹೋರಾಟ ಮಾಡಲಾಗಿತ್ತು. ಈಗ ನಡೆಯುತ್ತಿರುವುದು ಎರಡನೇ ಸ್ವಾತಂತ್ರ ಹೋರಾಟವೆಂದು ಎಂದು ತಿಳಿಸಿದರು.

ಸಂವಿಧಾನದ ಫಲದಿಂದಾಗಿ ಸ್ವಾಭಿಮಾನದ ಬದುಕನ್ನು ಸಾಗಿಸುತ್ತಿರುವ ದಲಿತ ಹಾಗೂ ಹಿಂದುಳಿದ ಸಮುದಾಯ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರಬೇಕಿತ್ತು. ಆದರೆ, ಮುಸ್ಲಿಮ್ ಸಮುದಾಯ ಎದೆಕೊಟ್ಟು ನಿಂತಿದೆ. ಈಗಲಾದರು ದಲಿತ ಸಮುದಾಯ ಹೋರಾಟದ ನೇತೃತ್ವವನ್ನು ವಹಿಸಲಿ ಎಂದು ಅವರು ಆಶಿಸಿದರು.

ಸಮಾವೇಶದಲ್ಲಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ದಿನೇಶ್ ಅಮಿನ್ ಮಟ್ಟು, ದಸಂಸ ನಾಯಕರಾದ ಗುರುಪ್ರಸಾದ್ ಕೆರಗೋಡು, ಮಾವಳ್ಳಿ ಶಂಕರ್, ಕೆ.ಎಂ.ರಾಮಚಂದ್ರಪ್ಪ, ಲಕ್ಷ್ಮಿನಾರಾಯಣ ನಾಗವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ ಶಾ ಚಿಂತನೆಗಳು ಬಿಜೆಪಿಯನ್ನೇ ಧ್ವಂಸ ಮಾಡುತ್ತಿವೆ. ಈಗಿರುವ ಬಿಜೆಪಿಗೆ ರಾಜಕೀಯ ಪಕ್ಷಕ್ಕಿರುವ ಯಾವುದೇ ಚಹರೆಗಳಿಲ್ಲ. ಇವರಿಬ್ಬರು ಸೇರಿಕೊಂಡು ಪೌರತ್ವದ ಹೆಸರಿನಲ್ಲಿ ದೇಶದ ನಾಗರಿಕರಿಗೆ ಬೆಂಕಿ ಇಡುತ್ತಿದ್ದಾರೆ.
-ದೇವನೂರ ಮಹಾದೇವ, ಹಿರಿಯ ಸಾಹಿತಿ

ಎನ್‌ಆರ್‌ಪಿ ಮೊಟ್ಟೆಯಾದರೆ, ಎನ್‌ಆರ್‌ಸಿ ಕೋಳಿ
ನಾವು ಸಂವಿಧಾನ ವಿರೋಧಿಯಾದ ಎನ್‌ಆರ್‌ಪಿ, ಸಿಎಎ ಹಾಗೂ ಎನ್‌ಆರ್‌ಸಿ ಹೆಸರಿನಲ್ಲಿ ಅಧಿಕಾರಿಗಳಿಗೆ ದಾಖಲೆ ಸಲ್ಲಿಸಿದರೆ ನಮ್ಮ ಮಾನ ಮರ್ಯಾದೆಯನ್ನು ಅವರಿಗೆ ಅಡವಿಟ್ಟಂತೆ ಆಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸುಳ್ಳಿನ ಸರಮಾಲೆಯನ್ನೇ ಹೆಣೆಯುತ್ತಿದ್ದಾರೆ. ಎನ್‌ಆರ್‌ಪಿಗೂ ಎನ್‌ಆರ್‌ಸಿಗೂ ಸಂಬಂಧವೇ ಇಲ್ಲವೆನ್ನುತ್ತಾರೆ. ಆದರೆ, ಎನ್‌ಆರ್‌ಪಿ ಮೊಟ್ಟೆಯಾದರೆ, ಅದರ ಮುಂದುವರೆದ ಭಾಗ ಎನ್‌ಆರ್‌ಸಿ ಕೋಳಿಯಾಗಿದೆ.

-ಸಸಿಕಾಂತ್ ಸೆಂಥಿಲ್, ನಿವೃತ್ತ ಐಎಎಸ್ ಅಧಿಕಾರಿ

ಪೌರತ್ವ ತಿದ್ದುಪಡಿ ಕುರಿತ ವಿಚಾರ ಸಂಕಿರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಎಚ್.ಆಂಜನೇಯ, ಝಮೀರ್ ಅಹ್ಮದ್ ಖಾನ್ ಸಾಮಾನ್ಯ ಕಾರ್ಯಕರ್ತರಂತೆ ವೇದಿಕೆಯ ಮುಂಭಾಗ ಆಸೀನರಾಗಿ ದೇವನೂರ ಮಹಾದೇವ, ಸಸಿಕಾಂತ್ ಸೆಂಥಿಲ್, ಬರಗೂರು ರಾಮಚಂದ್ರಪ್ಪ ಹಾಗೂ ದಿನೇಶ್‌ಅಮಿನ್ ಮಟ್ಟು ಮಾತುಗಳನ್ನು ಗಂಭೀರವಾಗಿ ಆಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News