ಇಂಗ್ಲಿಷ್ ಓದಿದವರೆಲ್ಲರೂ ಕೆಲಸದಲ್ಲಿದ್ದಾರಾ: ಸ್ಪೀಕರ್ ಕಾಗೇರಿ ಪ್ರಶ್ನೆ

Update: 2020-01-09 11:45 GMT

ಬೆಂಗಳೂರು, ಜ.9: ಶಾಲಾ ಮಕ್ಕಳ ಪೋಷಕರಿಗೆ ಇಂಗ್ಲಿಷ್ ಮೇಲೆ ವ್ಯಾಮೋಹ ಹೆಚ್ಚಾಗಿದೆ. ಆದರೆ, ಇಂಗ್ಲಿಷ್ ಓದಿದ ಎಲ್ಲರೂ ಕೆಲಸದಲ್ಲಿದ್ದಾರೆಯೇ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನಿಸಿದರು.

ಗುರುವಾರ ನಗರದ ಕೆಜಿ ರಸ್ತೆಯ ಶಿಕ್ಷಕರ ಸದನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಯೋಜಿಸಿದ್ದ, ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಶಾಲಾ ಪಂಚಾಂಗ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂಗ್ಲಿಷ್‌ನಲ್ಲಿಯೇ ಗುಣಮಟ್ಟ ಶಿಕ್ಷಣ ದೊರೆಯುತ್ತದೆ ಎನ್ನುವ ಭಾವನೆ ಶಾಲಾ ಮಕ್ಕಳ ಪೋಷಕರಲ್ಲಿ ಬೆಳೆದಿದೆ. ಇದರಿಂದಲೇ, ಕನ್ನಡ ಭಾಷೆ ಮತ್ತು ಸರಕಾರಿ ಶಾಲೆಗಳ ಮೇಲೆ ಪರಿಣಾಮ ಬೀರುತ್ತಿದೆ. ಆದರೆ, ಈ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ನುಡಿದರು.

ಶಿಕ್ಷಕರು ಮಕ್ಕಳಿಗೆ ಬರೀ ಪಠ್ಯ ಬೋಧನೆ ಮಾಡುವ ಜೊತೆಯಲ್ಲಿ, ಜೀವನದಲ್ಲಿ ಬೇಕಿರುವ ಆದರ್ಶ, ರಾಷ್ಟ್ರಭಕ್ತಿ, ದೇಶ ಕಟ್ಟುವ ವಿಷಯಗಳ ಬಗ್ಗೆ ಪ್ರಸ್ತುತ ಪಡಿಸಬೇಕು. ಇದರಿಂದ, ವಿದ್ಯಾರ್ಥಿಗಳ ಮನೋ ಶಕ್ತಿ ಹೆಚ್ಚಾಗಲಿದೆ ಎಂದ ಅವರು, ಶಾಲೆಗಳು ಆರಂಭಕ್ಕೂ ಮುನ್ನವೇ, ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಜರುಗಿಸಬೇಕು. ಒಂದು ವೇಳೆ, ಖಾಯಂ ಅಲ್ಲದಿದ್ದರೂ, ಅತಿಥಿ ಶಿಕ್ಷಕರನ್ನು ತೆಗೆದುಕೊಂಡು, ಮಕ್ಕಳ ಪಠ್ಯಕ್ಕೆ ಅಡೆತಡೆಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಕಾಗೇರಿ ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಅ.ದೇವೇಗೌಡ, ವೈ.ಎ. ನಾರಾಯಣಸ್ವಾಮಿ, ಪುಟ್ಟಣ್ಣ, ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ, ಸಂಘದ ಅಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಿ, ಫೆಡರೇಶನ್ ಉಪಾಧ್ಯಕ್ಷ ಬಸವರಾಜ ಗುರಿಕಾರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

‘ಬೇಡಿಕೆ, ಈಡೇರಿಸಿ’

* 7 ತರಗತಿ ಪಬ್ಲಿಕ್ ಪರೀಕ್ಷೆ ಈ ವರ್ಷ ಕೈಬಿಡಬೇಕು

* ಪ್ರಾಥಮಿಕ ಶಾಲೆಗಳ ಹಾಲಿ ಪದವೀಧರರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ (ವೃಂದ ಮತ್ತು ನೇಮಕಾತಿ ನಿಮಯ ಬದಲಾಯಿಸಿ) ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಬೇಕು

* ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು

* ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು

* ಹೆಚ್ಚುವರಿ ಶಿಕ್ಷಕರ ವಿಚಾರದಲ್ಲಿನ ನ್ಯೂನತೆ ಸರಿಪಡಿಸಿ ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು

* ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಸೇವೆಯನ್ನು ಸತತ ಸೇವೆ ಎಂದು ಪರಿಗಣಿಸಿ ಆರ್ಥಿಕ ಹಾಗೂ ಇನ್ನಿತರ ಸೌಲಭ್ಯ ನೀಡಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬೇಡಿಕೆಗಳ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News