ಕಾಶ್ಮೀರ ಚರ್ಚೆ ಉದ್ವಿಗ್ನತೆ ನಿವಾರಣೆಗೆ ಸಹಾಯಕ: ಚೀನಾ
Update: 2020-01-18 17:51 GMT
ಬೀಜಿಂಗ್, ಜ. 18: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರದ ಬಗ್ಗೆ ಚರ್ಚೆ ನಡೆದರೆ ವಲಯದಲ್ಲಿ ನೆಲೆಸಿರುವ ಉದ್ವಿಗ್ನತೆ ನಿವಾರಣೆಗೆ ಸಹಕಾರಿಯಾಗುತ್ತದೆ ಎಂದು ಚೀನಾ ಶುಕ್ರವಾರ ಅಭಿಪ್ರಾಯಪಟ್ಟಿದೆ. ನ್ಯೂಯಾರ್ಕ್ನಲ್ಲಿ ಬುಧವಾರ ನಡೆದ ಭದ್ರತಾ ಮಂಡಳಿಯ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅದು ಹೇಳಿದೆ.
‘‘ಭದ್ರತಾ ಮಂಡಳಿಯ ಸಭೆಯಲ್ಲಿ ಹೆಚ್ಚಿನ ಸದಸ್ಯರು ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು ಹಾಗೂ ಸಂಯಮ ವಹಿಸಲು ಮತ್ತು ಉದ್ವಿಗ್ನತೆ ಶಮನಕ್ಕೆ ಕರೆ ನೀಡಿದರು. ಹಾಗೂ ಈ ವಿವಾದವು ಶಾಂತಿಯುತವಾಗಿ ಹಾಗೂ ರಾಜಕೀಯ ವಿಧಾನದ ಮೂಲಕ ಪರಿಹಾರಗೊಳ್ಳಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಶುಕ್ರವಾರ ಹೇಳಿದರು.