ಸಿದ್ಧಗಂಗಾ ಶ್ರೀ ವಿಶ್ವ ಸಂತ: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರ್ ಪಠಾಣ್
ಬೆಳಗಾವಿ, ಜ.19: ತುಮಕೂರಿನ ಸಿದ್ದಗಂಗೆಯ ಡಾ.ಶಿವಕುಮಾರ ಸ್ವಾಮೀಜಿ ಎಲ್ಲ ಸಮುದಾಯದವರಿಗೆ ವಿದ್ಯೆ, ವಸತಿ ಹಾಗೂ ಅನ್ನದಾನ ಮಾಡುವ ಮೂಲಕ ವಿಶ್ವ ಸಂತರಾಗಿ ಹೊರ ಹೊಮ್ಮಿದವರು ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರ್ ಪಠಾಣ್ ತಿಳಿಸಿದರು.
ರವಿವಾರ ನಗರದ ಲಕ್ಷ್ಮಿ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯ ಪ್ರಥಮ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದಾಗ ತುಮಕೂರಿನ ಮುಸ್ಲಿನರು ತಮ್ಮ ಮಸೀದಿಯಲ್ಲಿ ಶಿವಕುಮಾರ ಸ್ವಾಮೀಜಿಯವರ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸುವ ಮೂಲಕ ನಮನ ಸಲ್ಲಿಸಿದ್ದರು ಎಂದು ಅವರು ಹೇಳಿದರು. ಶಿವಕುಮಾರ ಸ್ವಾಮೀಜಿ ಯಾರ ಸಹಾಯವಿಲ್ಲದೆಯೇ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಶ್ರಯ ನೀಡುವುದರ ಮೂಲಕ ಶ್ರೀಮಠದಿಂದ ಸಹಾಯ ಮಾಡಿದ್ದನ್ನು ಅವರು ಸ್ಮರಿಸಿಕೊಂಡರು.
ಬೆಳಗಾವಿ ಗ್ರಾಮೀಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ್ ಪಾಟೀಲ್ ಮಾತನಾಡಿ, ಸಿದ್ಧಗಂಗಾ ಸ್ವಾಮೀಜಿ ನಮಗೆಲ್ಲರಿಗೂ ಸ್ಪೂರ್ತಿ. ಪ್ರಧಾನಿ ನರೇಂದ್ರ ಮೋದಿ, ಶ್ರೀಗಳ ಬಗ್ಗೆ ಅತೀವ ಅಭಿಮಾನದಿಂದ ಗುರುವಿನ ಗದ್ದುಗೆಯ ದರ್ಶನ ಪಡೆದಿದ್ದಾರೆ ಎಂದರು.
ಸಿದ್ದಗಂಗೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ, ಶಿಕ್ಷಣ, ವಸತಿ ನೀಡುವ ಮೂಲಕ ತ್ರಿವಿಧ ದಾಸೋಹಿಯಾಗಿ ನಡೆದಾಡುವ ದೇವರ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯಬೇಕು ಅಂದಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೂಳಪ್ಪ ಹೊಸಮನಿ ಮಾತನಾಡಿ, ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಎಲ್ಲ ಮಹಾತ್ಮರ ಸ್ಮರಣೆ ಮಾಡುತ್ತಾರೆ. ಈಗ ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿಯವರ ಸ್ಮರಣೆ ಮಾಡುವುದರ ಮೂಲಕ ಹುಕ್ಕೇರಿ ಶ್ರೀಗಳು ಶಿವಕುಮಾರ ಸ್ವಾಮೀಜಿಯ ಆದರ್ಶಗಳನ್ನು ಅಳವಡಿಸಿಕೊಳ್ಳಲು ಕರೆ ನೀಡಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ಧ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿ ವಿಶ್ವಕಂಡ ಅಪರೂಪದ ಸಂತ. ತ್ರಿಕಾಲ ಶಿವ ಪೂಜೆಯ ಜತೆಗೆ, ತ್ರಿವಿಧ ದಾಸೋಹ ಮೂರ್ತಿಯಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ, ಶಿಕ್ಷಣದ ದಾನ ಮಾಡಿರುವ ಒಬ್ಬ ಅಪರೂಪದ ಗುರು ಎಂದರು.
ಎಲ್ಲ ಭಾಗದಲ್ಲಿಯೂ ಈ ಮಠದಿಂದ ಆಶ್ರಯ ಪಡೆದು ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆ ಉತ್ತರ ಕರ್ನಾಟಕದ ಅನೇಕ ಮಕ್ಕಳು ಸಿದ್ದಗಂಗಾ ಮಠದಲ್ಲಿ ಅಧ್ಯಯನ ಮಾಡಿರುವುದನ್ನು ಸ್ಮರಿಸಲೇಬೇಕು. ಈ ಭಾಗದ ಜನರ ಪರವಾಗಿ ನಾವು ಗುರುವಿನ ಸ್ಮರಣೆ ಮಾಡಿ ಕೃತಜ್ಞತೆ ಅರ್ಪಿಸುವ ಸಮಾರಂಭ ಇದು ಎಂದರು.
ಕಾರ್ಯಕ್ರಮದಲ್ಲಿ ವಿಜಯ ಶಾಸ್ತ್ರಿ ಹಿರೇಮಠ, ಡಾ.ನಂದೀಶ್, ವೀರುಪಾಕ್ಷಯ್ಯ ಸಾಲಿಮಠ, ಚಂದ್ರಶೇಖರಯ್ಯ ಸವಡಿಸಾಲಿಮಠ, ಅಶೋಕ ತೆರೆಗೌಡರ, ಸುಮಂಗಲಾ ಸಿಂತ್ರಿ, ಉಮಾ, ಸುನೀತಾ, ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.