ಸರಕಾರಿ ಜಮೀನುಗಳಲ್ಲಿನ ಅನಧಿಕೃತ ಮನೆಗಳ ಸಕ್ರಮ: ಸಚಿವ ಆರ್.ಅಶೋಕ್

Update: 2020-01-23 15:33 GMT

ಬೆಂಗಳೂರು, ಜ.22: ಸರಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಬಡವರ ಮನೆಗಳನ್ನು ಸಕ್ರಮಗೊಳಿಸಲಾಗುವುದು. 20x30 ಮತ್ತು 30x40 ಅಡಿ ಅಳತೆಯ ಮನೆಗಳಿಗೆ ಮಾತ್ರ ಇದು ಅನ್ವಯವಾಗಲಿದ್ದು, ರಾಜ್ಯಾದ್ಯಂತ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜ.28ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾರಂಭ ಏರ್ಪಡಿಸಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ 10 ಸಾವಿರ ಫಲಾನುಭವಿಗಳಿಗೆ ಕ್ರಯಪತ್ರ ನೀಡಲಾಗುವುದು ಎಂದರು.

ಮತದಾರರ ಗುರುತಿನ ಚೀಟಿ, ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್, ಮನೆಗಳಿಗೆ ಪಡೆದಿರುವ ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಮುಂತಾದವುಗಳ ದಾಖಲೆಗಳನ್ನು ಕಂದಾಯ ಇಲಾಖೆಯು ಈಗಾಗಾಲೇ ಪರಿಶೀಲಿಸಿದ್ದು ಅರ್ಹರನ್ನು ಮಾತ್ರ ಪರಿಗಣಿಸಲಾಗಿದೆ. ಹಲವು ಬಾರಿ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಅವರು ಹೇಳಿದರು.

2012ರ ಜ.1ರವರೆಗೆ ಸರಕಾರಿ ಜಮೀನಿನಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ಮಾತ್ರ ಇದು ಅನ್ವಯಿಸಲಿದೆ. ಯಾವುದೇ ಒತ್ತಡಕ್ಕೆ ಮಣಿಯದೆ ಅರ್ಹರನ್ನು ಮಾತ್ರ ಆಯ್ಕೆ ಮಾಡಲಾಗುವುದು. ಇಲ್ಲಿಯವರೆಗೆ ರಾಜ್ಯಾದ್ಯಂತ 2,53,072 ಅರ್ಜಿಗಳು ಸಲ್ಲಿಕೆಯಾಗಿವೆ. ಇರದಲ್ಲಿ 60,061 ಅರ್ಜಿಗಳಿಗೆ ಮಂಜೂರಾತಿ ಸಿಕ್ಕಿದ್ದು, 1,47,465 ಅರ್ಜಿ ತಿರಸ್ಕರಿಸಲಾಗಿದೆ. 45,546 ಅರ್ಜಿ ವಿಲೇವಾರಿಗೆ ಬಾಕಿ ಇವೆ ಎಂದು ವಿವರಣೆ ನೀಡಿದರು.

ಕಲಂ 94 ಸಿ ಮತ್ತು 94 ಸಿಸಿ ಅಡಿ ಅಳತೆಗೆ ಅನುಗುಣವಾಗಿ ದರ ನಿಗದಿಪಡಿಸಲಾಗಿದೆ. ಈ ಶುಲ್ಕವನ್ನು ಫಲಾನುಭವಿ ಪಾವತಿಸಬೇಕು. ಬೆಂಗಳೂರು ನಗರದಲ್ಲಿ 20x30 ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿಕೊಂಡಿರುವ ಸಾಮಾನ್ಯ ವರ್ಗದ ಬಡವರಿಗೆ 5 ಸಾವಿರ ರೂ., ಎಸ್ಸಿ-ಎಸ್ಟಿ ಮತ್ತು ಅಂಗವಿಕಲರಿಗೆ 2500 ರೂ.ದರ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

30x40 ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿಕೊಂಡಿರುವ ಸಾಮಾನ್ಯ ವರ್ಗದವರಿಗೆ 10 ಸಾವಿರ ರೂ., ಎಸ್ಸಿ-ಎಸ್ಟಿ ಮತ್ತು ಅಂಗವಿಕಲರಿಗೆ 5 ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ವರ್ಗದವರಿಗೆ 1 ಸಾವಿರ ರೂ., ಎಸ್ಸಿ-ಎಸ್ಟಿ ಮತ್ತು ಅಂಗವಿಕಲರಿಗೆ 500 ರೂ. ಶುಲ್ಕ ನಿಗದಿ ಮಾಡಲಾಗಿದ್ದು, ನೋಂದಣಿ ಶುಲ್ಕವನ್ನು ಸರಕಾರವೇ ಭರಿಸಲಿದೆ ಎಂದು ಅಶೋಕ್ ಹೇಳಿದರು.

ಪ್ರತಿ ಹಳ್ಳಿಯಲ್ಲೂ ಇರುವ ಸರಕಾರಿ ಭೂಮಿಯನ್ನು ಗುರುತಿಸಿ ಸ್ಮಶಾನ, ಶಾಲೆ, ಅಂಗನವಾಡಿ, ಆಸ್ಪತ್ರೆ, ವಿದ್ಯಾರ್ಥಿ ನಿಲಯ ಮತ್ತಿತರ ಸಾರ್ವಜನಿಕ ಕಾರ್ಯಗಳಿಗೆ ಉಪಯೋಗಿಸಲು ಸೂಚಿಸಲಾಗಿದೆ. ಕಂದಾಯ ಸಚಿವನಾದ ನಂತರ 1190.15 ಎಕರೆ ಸರಕಾರಿ ಜಮೀನನ್ನು ಸಾರ್ವಜನಿಕ ಕಾರ್ಯಗಳಿಗೆ ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.

ಹೊಸ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲಾಧಿಕಾರಿಗಳಿಂದ ಮಾತ್ರ ಪ್ರಸ್ತಾವನೆ ಬಂದಿದೆ. ಮುಖ್ಯಮಂತ್ರಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಸರಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸುವಿಕೆ ಮತ್ತು ಸಂರಕ್ಷಿಸುವ ಸಲುವಾಗಿ ರಚಿಸಲಾಗಿದ್ದ ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿ ವರದಿ ನೀಡಿದ್ದು, ಇದನ್ನು ಕಾರ್ಯರೂಪಕ್ಕೆ ತರಲು ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದು ಅವರು ಹೇಳಿದರು.

ರಾಮನಗರ ಜಿಲ್ಲೆ ಕಪಾಲ ಬೆಟ್ಟಕ್ಕೆ ಸಂಬಂಧಿಸಿದಂತೆ ಸವಿಸ್ತಾರ ವರದಿ ನೀಡುವಂತೆ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. 2 ವರ್ಷದ ಹಿಂದೆ ಅಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಸಂಗ್ರಹಿಸಿದ್ದಾರೆ. ಟ್ರಸ್ಟ್ ಡೀಡ್‌ನಲ್ಲಿ ಅಲ್ಲಿ ಪ್ರತಿಮೆ ಸ್ಥಾಪಿಸುತ್ತೇವೆ ಎಂಬ ಬಗ್ಗೆ ಉಲ್ಲೇಖವಿಲ್ಲ. ಅಕ್ರಮವಾಗಿ ಬೋರ್ವೆಲ್ ಕೊರೆದಿದ್ದಾರೆ. ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ರಸ್ತೆ ನಿರ್ಮಿಸಲಾಗಿದೆ ಎಂದು ಅವರು ಆರೋಪಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಜ್ ಭವನ ನಿರ್ಮಾಣಕ್ಕೆ 50 ಕೋಟಿ ರೂ.ಅನುದಾನ ನೀಡಿದ್ದರು. ಅಲ್ಲಿಯವರೆಗೂ ಕಾಂಗ್ರೆಸ್‌ನವರಾಗಲಿ, ಜೆಡಿಎಸ್‌ನವರಾಗಲಿ ಈ ಮಟ್ಟಿನ ಅನುದಾನ ನೀಡಿರಲಿಲ್ಲ. ಮೊದಲಿಗೆ ಕ್ರಿಶ್ಚಿಯನ್ ಬೋರ್ಡ್ ರಚನೆ ಮಾಡಿದ್ದು ನಾವೇ ಎಂದು ಅಶೋಕ್ ಹೇಳಿದರು.

ಕನಕಪುರದಲ್ಲಿ ಮೂರ್ನಾಲ್ಕು ಲಕ್ಷ ಜನರಿದ್ದಾರೆ, ಅವರು ಮುನೇಶ್ವರ ಬೇಕು ಎನ್ನುತ್ತಾರೋ, ಏಸು ಅನ್ನುತ್ತಾರೋ ನೋಡೋಣ. ಕಾಂಗ್ರೆಸ್‌ನವರಿಗೆ ಅಧಿಕಾರ ಬಿಟ್ಟು ಇರಲಾಗುತ್ತಿಲ್ಲ. ಅಧಿಕಾರಕ್ಕಾಗಿ ಸುಖಾಸುಮ್ಮನೆ ಕಿಡಿಕಾರುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಮುಖ್ಯಮಂತ್ರಿ ವಿದೇಶದಿಂದ ಹಿಂದಿರುಗಿದ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಸಹಾಯ ಮಾಡಿದವರಿಗೆ ಮೋಸ ಮಾಡುವ ಪ್ರಶ್ನೆಯೇ ಇಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳಲಾಗುವುದು ಎಂದ ಅವರು, ಚಿಕ್ಕಮಗಳೂರು ಜಿಲ್ಲಾಧಿಕಾರಿ, ಕಂದಾಯ ಅಧಿಕಾರಿಗೆ ಕಪಾಳ ಮೋಕ್ಷ ಮಾಡಿಲ್ಲ. ಪ್ರವಾಹ ಸ್ಥಿತಿ ಬಗ್ಗೆ ವರದಿ ಮಾಡಿರದಿರುವುದನ್ನು ಪ್ರಶ್ನಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಮೇಯರ್ ಗೌತಮ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News