ಕೇರಳದಲ್ಲಿ ಕೊರೋನಾ ವೈರಸ್ ಭೀತಿ : 430 ಜನರ ಮೇಲೆ ನಿಗಾ

Update: 2020-01-28 09:27 GMT

ಹೊಸದಿಲ್ಲಿ: ಚೀನಾದಲ್ಲಿ ಕೊರೋನಾ ವೈರಸ್ ಈಗಾಗಲೇ 106 ಜನರನ್ನು ಬಲಿ ಪಡೆದು  4,000ಕ್ಕೂ ಅಧಿಕ ಮಂದಿಗೆ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ, ಮುಖ್ಯವಾಗಿ ಚೀನಾದಿಂದ  ಹಿಂದಿರುಗಿದವರ ತಪಾಸಣೆ ನಡೆಸಲಾಗುತ್ತಿದೆ. ಇಲ್ಲಿಯ ತನಕ 30,000 ಪ್ರಯಾಣಿಕರ ಆರೋಗ್ಯ ಸ್ಕ್ರೀನಿಂಗ್ ನಡೆಸಲಾಗಿದೆ.

ಕೇರಳದಲ್ಲಿ 430ಕ್ಕೂ ಅಧಿಕ ಮಂದಿಯನ್ನು ಅವರ ಮನೆಗಳಲ್ಲಿಯೇ  ನಿಗಾದಲ್ಲಿರಿಸಲಾಗಿದೆ. ಕೇರಳದ ಮೂರು ನಗರಗಳಲ್ಲಿ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್‍ ಗಳಲ್ಲಿ ವೈದ್ಯಕೀಯ ನಿಗಾದ ಮೇಲಿದ್ದ ಏಳು ಮಂದಿಯ ಪೈಕಿ ಆರು ಮಂದಿಯ ವರದಿ ನೆಗೆಟಿವ್ ಆಗಿದ್ದು ಇನ್ನುಳಿದವರೊಬ್ಬರ ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ. ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕೂಡ ಇಂದು ಹೊಸ ತಪಾಸಣೆ ಸೌಲಭ್ಯ ಆರಂಭಗೊಳ್ಳಲಿದೆ.

ದಿಲ್ಲಿಯ ಸರಕಾರಿ ಆರ್ ಎಂಎಲ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಲಕ್ಷಣಗಳನ್ನು ಹೊಂದಿರುವ ಮೂವರನ್ನು ವೈದ್ಯರ ನಿಗಾದಲ್ಲಿರಿಸಲಾಗಿದೆ. ಮುಂಬೈಯಲ್ಲಿ ನಾಲ್ಕು  ಮಂದಿಯನ್ನು ಆಸ್ಪತ್ರೆಗಳ ಪ್ರತ್ಯೇಕ ವಾರ್ಡಿನಲ್ಲಿ ನಿಗಾದಲ್ಲಿರಿಸಲಾಗಿದೆ.  ಇತ್ತೀಚೆಗೆ ಚೀನಾದಿಂದ ವಾಪಸಾದ 28 ವರ್ಷದ ಯುವಕನನ್ನು ಚಂಡೀಗಢ ಆಸ್ಪತ್ರೆಯ ಪ್ರತ್ಯೇಕ ವಾರ್ಡಿನಲ್ಲಿರಿಸಲಾಗಿದೆ.

ಜನವರಿ 1ರಿಂದೀಚೆಗೆ ಚೀನಾಗೆ ಪ್ರಯಾಣಿಸಿರುವವರು ಜ್ವರ, ಕೆಮ್ಮು, ಶ್ವಾಸಕೋಶ ಸಮಸ್ಯೆಗಳೇನಾದರೂ ಇದ್ದರೆ ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಇತ್ತೀಚೆಗೆ ಚೀನಾದ ವುಹಾನ್‍ ನಿಂದ ವಾಪಸಾದ ಒಬ್ಬರು ಮಹಿಳೆ ಮತ್ತಾಕೆಯ ಪುತ್ರನನ್ನು ಮಧ್ಯ ಪ್ರದೇಶದ ಉಜ್ಜಯನಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ ವುಹಾನ್‍ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News