ಮದ್ಯದ ಅಮಲಿನಲ್ಲಿ ತೆಪ್ಪದಲ್ಲಿ ಮೋಜು: ಕೆರೆಯಲ್ಲಿ ಮುಳುಗಿ ಟೆಕ್ಕಿ ಮೃತ್ಯು

Update: 2020-02-08 15:20 GMT

ಬೆಂಗಳೂರು, ಫೆ.8: ಮದ್ಯದ ಅಮಲಿನಲ್ಲಿ ಕೆರೆಯಲ್ಲಿ ತೆಪ್ಪ ತೆಗೆದುಕೊಂಡು ಮೋಜು ಮಾಡಲು ಹೋದ ಸಾಫ್ಟ್‌ವೇರ್ ಇಂಜಿನಿಯರ್ ಓರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಸಚಿನ್ ಮೃತ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಇಲ್ಲಿನ ಕಲ್ಕೆರೆಯಲ್ಲಿ ಮದ್ಯ ಸೇವಿಸಿದ್ದ ಸಚಿನ್ ಮತ್ತು ಆತನ ಸ್ನೇಹಿತ ಕಲ್ಕೆರೆ ಕೆರೆ ಹಿಂಭಾಗದ ಬಾಗಿಲು ಮೂಲಕ ಒಳ ನುಗ್ಗಿ ತೆಪ್ಪ ತೆಗೆದುಕೊಂಡು ನೀರಿನಲ್ಲಿ ತೆರಳುವಾಗ ನಿಯಂತ್ರಣ ತಪ್ಪಿ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಸಚಿನ್ ನೀರಿನಲ್ಲಿಯೇ ಮೃತಪಟ್ಟರೆ, ಆತನ ಸ್ನೇಹಿತ ಉಲ್ಲಾಸ್ ಎಂಬಾತ ಈಜಿಕೊಂಡು ದಡ ಸೇರಿದ್ದಾರೆ. ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಈ ಇಬ್ಬರು ಕೆರೆಯೊಳಗೆ ಹೋಗಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News