ಸರೋಜಿನಿ ಮಹಿಷಿ ವರದಿ ಜಾರಿಗೆ ಚರ್ಚಿಸಿ ಸೂಕ್ತ ಕ್ರಮ: ಸಿಎಂ ಯಡಿಯೂರಪ್ಪ
Update: 2020-02-13 13:02 GMT
ಬೆಂಗಳೂರು, ಫೆ. 13: ಖಾಸಗಿ ವಲಯದಲ್ಲಿಯೂ ಕನ್ನಡಿಗರಿಗೆ ಶೇ.100ರಷ್ಟು ಉದ್ಯೋಗ ಕಲ್ಪಿಸುವ ಸಂಬಂಧದ ಡಾ.ಸರೋಜಿನಿ ಮಹಿಷಿ ವರದಿ ಜಾರಿ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 1986ರಲ್ಲಿ ಅಂದಿನ ರಾಜ್ಯ ಸರಕಾರಕ್ಕೆ ಡಾ.ಸರೋಜಿನಿ ಮಹಿಷಿ ನೀಡಿದ ವರದಿ ಜಾರಿಗೆ ಆಗ್ರಹಿಸಿ ಬಂದ್ ಕರೆ ನೀಡಿದ್ದವು. ಮಹಿಷಿ ವರದಿಯಲ್ಲಿ 53 ಅಂಶಗಳನ್ನು ಉಲ್ಲೇಖಿಸಲಾಗಿದೆ. ಈ ಪೈಕಿ ನಮ್ಮ ಇತಿಮಿತಿಯಲ್ಲಿ ಏನೇನು ಜಾರಿಗೆ ತರಬಹುದು ಎಂಬ ಬಗ್ಗೆ ವಿಪಕ್ಷಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.
ರಾಜ್ಯದಲ್ಲಿ ಕನ್ನಡಿಗರಿಗೆ ಕಾನೂನು ಚೌಕಟ್ಟಿನಲ್ಲಿ ಉದ್ಯೋಗ ಕಲ್ಪಿಸಲು ಸರಕಾರ ಬದ್ಧ, ಜತೆಗೆ ಸರೋಜಿನಿ ಮಹಿಷಿ ವರದಿ ಅನ್ವಯ ಸಾಧಕ-ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿ, ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.