ನೋಟು ರದ್ಧತಿಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ: ಕೇಂದ್ರ ಸಚಿವ ಸದಾನಂದಗೌಡ

Update: 2020-02-22 12:04 GMT

ಬೆಂಗಳೂರು, ಫೆ. 22: ಗರಿಷ್ಠ ಮೊತ್ತದ ನೋಟು ರದ್ಧತಿಯ ಬಳಿಕ ದೇಶದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದ್ದು, ಕಪ್ಪು ಹಣದ ವಹಿವಾಟು ನಿಯಂತ್ರಣದಲ್ಲಿದೆ ಎಂದು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ನಗರದ ಎಫ್‌ಕೆಸಿಸಿಐನಲ್ಲಿ ಭಾರತ ವೆಚ್ಚ ಲೆಕ್ಕಿಗರ ಸಂಸ್ಥೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಐದು ಟ್ರಿಲಿಯನ್ ಆರ್ಥಿಕತೆಯ ಗುರಿಯೊಂದಿಗೆ ಮುನ್ನುಗ್ಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕತೆಯ ಶಿಸ್ತು ತಹಬದಿಗೆ ಬರುತ್ತಿದೆ ಎಂದರು.

ನೂರ ಮೂವತ್ತು ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ನೋಟ್ ಬ್ಯಾನ್ ಸುಲಭದ ಮಾತಲ್ಲ. ಅಂತಹ ದಿಟ್ಟ ನಿರ್ಧಾರ ತೆಗೆದುಕೊಂಡ ಮೋದಿ ಅವರು ದೇಶದ ಆರ್ಥಿಕತೆಗೆ ಹೊಸ ಆಯಾಮ ನೀಡಿದರು ಎಂದು ಅವರು ನೋಟು ಅಮಾನ್ಯೀಕರಣವನ್ನು ಸಮರ್ಥಿಸಿದರು.

ಐದೂವರೆ ವರ್ಷದಲ್ಲಿ ನಮ್ಮ ಸರಕಾರದಲ್ಲಿ ಒಂದೇ ಒಂದು ಭ್ರಷ್ಟಾಚಾರ ಪ್ರಕರಣ ನಡೆದಿಲ್ಲ. ಇದಕ್ಕೆ ಕಾರಣ ಮೋದಿಯವರ ದಿಟ್ಟ ನಡವಳಿಕೆ. ಹಲವು ಸವಾಲುಗಳು ಎದುರಿಸಿ ದೇಶದ ಆರ್ಥಿಕತೆಯನ್ನು ಶಿಸ್ತಿನ ಪಥಕ್ಕೆ ತರುವಲ್ಲಿ ನಮ್ಮ ಸರಕಾರ ಯಶಸ್ವಿಯಾಗಿದೆ ಎಂದರು.

ಜಿಎಸ್ಪಿ ಜಾರಿಗೊಳಿಸಿದ ನಂತರವಂತೂ ವ್ಯಾಪಾರಿಗಳಿಗೂ ಅನುಕೂಲವಾಗಿದೆ. ತೆರಿಗೆ ಸಂಗ್ರಹವೂ ಸುಧಾರಣೆಗೊಂಡಿದೆ. ವ್ಯಾಪಾರಿಗಳಿಗೆ ಈ ಮೊದಲು ಇದ್ದ ಅಡೆತಡೆಗಳು ನಿವಾರಣೆಗೊಂಡಿವೆ. ನಿಯಮಾವಳಿಗಳು ಸಡಿಲವಾಗಿವೆ. ಇದರಿಂದ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ವ್ಯಾಪಾರೋದ್ಯಮಕ್ಕೆ ಸಾಕಷ್ಟು ಸಹಕಾರವಾಗಿದೆ ಎಂದರು.

ಡಿಜಿಟಲ್ ಇಂಡಿಯಾ ಭಾರತದ ಅಭಿವೃದ್ಧಿಯ ದಿಕ್ಕನ್ನೇ ಬದಲಾವಣೆ ಮಾಡಿದೆ. ದಿನೇ ದಿನೇ ಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ವಿಶ್ವದಲ್ಲಿಂದು ಭಾರತಕ್ಕೆ ತನ್ನದೇ ಆದ ಸ್ಥಾನಮಾನಗಳಿವೆ. ಐದೂವರೆ ವರ್ಷದಲ್ಲಿ ಸರಕಾರ ತೆಗೆದುಕೊಂಡ ಕ್ರಮಗಳಿಂದಾಗಿ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಹೇಳಿದರು.

ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆ ಅಧ್ಯಕ್ಷ ಎಚ್.ಆರ್.ಶಿವಪಾಲ್, ಮೈಸೂರು ಘಟಕದ ಅಧ್ಯಕ್ಷ ಎಂ.ಅಶೋಕ್ ಕುಮಾರ್, ವಿಶ್ವನಾಥ್ ಆರ್.ಭಟ್, ಎಫ್‌ಕೆಸಿಸಿಐ ಅಧ್ಯಕ್ಷ ಜನಾರ್ಧನ್ ಸೇರಿದಂತೆ ಇನ್ನಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News