ದರೋಡೆಗೆ ಸಂಚು ಆರೋಪ: ನಾಲ್ವರ ಬಂಧನ
Update: 2020-03-01 13:14 GMT
ಬೆಂಗಳೂರು, ಮಾ.1: ದರೋಡೆಗೆ ಸಂಚು ರೂಪಿಸಿದ್ದ ಆರೋಪದಡಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ನಗರದ ಸುಂಕದಕಟ್ಟೆಯ ರಕ್ಷಿತ್(24), ಮಾರ್ಕಂಡೇಶ್ವರ ನಗರದ ನವೀನ್(28), ರಾಜ ಗೋಪಾಲನಗರದ ಸುನಿಲ್(24) ಮತ್ತು ವಿನಯ್(24)ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಸುಂಕದಕಟ್ಟೆ ಪೈಪ್ಲೈನ್ ರಸ್ತೆಯ ಬೆಗ್ಗರ್ಸ್ ಕಾಲೋನಿ ಕಾಂಪೌಂಡ್ ಸಮೀಪ ಈ ನಾಲ್ವರು ದರೋಡೆಗೆ ಹೊಂಚು ಹಾಕಿ ಚಿನ್ನಾಭರಣ, ಬೆಲೆಬಾಳುವ ವಸ್ತುಗಳನ್ನು ದೋಚಲು ಸಂಚು ರೂಪಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತರ ಪೈಕಿ ಆರೋಪಿ ರಕ್ಷಿತ್ ರೌಡಿಶೀಟರ್ ಪಟ್ಟಿಯಲ್ಲಿದ್ದು, ಈತನ ವಿರುದ್ಧ ಈಗಾಗಲೇ ಪೋಕ್ಸೊ ಕಾಯ್ದೆಯಡಿ ಕೊಲೆಯತ್ನ, ಹಲ್ಲೆ ಪ್ರಕರಣ ಸೇರಿ ನಾಲ್ಕು ಗಂಭೀರ ಪ್ರಕರಣಗಳಿದ್ದು, ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.