ಬಂಗಾಳ ರಣಜಿ ತಂಡಕ್ಕೆ ಸಹಾ

Update: 2020-03-03 18:23 GMT

ಕೋಲ್ಕತಾ,ಮಾ.3: ಭಾರತದ ಟೆಸ್ಟ್ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಮಾ.9ರಂದು ಆರಂಭವಾಗಲಿರುವ ರಣಜಿ ಟ್ರೋಫಿ ಫೈನಲ್ ಪಂದ್ಯಕ್ಕೆ ಬಂಗಾಳ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಸಹಾ ಅವರು ಆರಂಭಿಕ ದಾಂಡಿಗ ಅಭಿಷೇಕ್ ರಾಮನ್ ಬದಲಿಗೆ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಭಾರತದ ಪ್ರಮುಖ ವಿಕೆಟ್ ಕೀಪರ್ ಸಹಾ ಅವರು ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಡೇ ನೈಟ್ ಟೆಸ್ಟ್ ವೇಳೆ ಗಾಯಗೊಂಡಿದ್ದರು. ಅವರ ಕೈ ಬೆರಳಿಗೆ ಗಾಯವಾಗಿತ್ತು. ಇದೀಗ ಗಾಯಕ್ಕೆ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ. ಇತ್ತೀಚೆಗೆ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಡೇ ನೈಟ್ ಟೆಸ್ಟ್‌ಗೆ ಅವರನ್ನು ಸೇರಿಸಲಾಗಿಲ್ಲ. ಸಹಾ 2017-18ನೇ ಸಾಲಿನಲ್ಲಿ ರಣಜಿ ಟ್ರೋಫಿಯಲ್ಲಿ ಬಂಗಾಳದ ಪರ ಆಡಿದ್ದರು. 4 ಪಂದ್ಯಗಳಲ್ಲಿ 38.33 ಸರಾಸರಿಯಂತೆ ರನ್ ದಾಖಲಿಸಿದ್ದರು. ಕೌಶಿಕ್ ಘೋಷ್ ಮತ್ತು ಗುಲಾಮ್ ಮುಸ್ತಫ ಗಾಯಗೊಂಡಿದ್ದಾರೆ. ಈ ಪೈಕಿ ಘೋಷ್ ಬದಲಿಗೆ ಇನ್ನೂ ರಣಜಿ ಕ್ಯಾಪ್ ಧರಿಸದ ಸುದೀಪ್ ಘರಾಮಿ ಅವರನ್ನು ಸೇರಿಸಿಕೊಳ್ಳಲಾಗಿದೆ.

ಬಂಗಾಳ ತಂಡ ಸೆಮಿಫೈನಲ್‌ನಲ್ಲಿ ಕರ್ನಾಟಕ ವಿರುದ್ಧ 174 ರನ್‌ಗಳ ಅಂತರದಲ್ಲಿ ಜಯ ಗಳಿಸಿ ಫೈನಲ್ ತಲುಪಿತ್ತು. ಅನುಸ್ತುಪ್ ಮಜುಂದಾರ್ ಔಟಾಗದೆ 149 ರನ್ ಗಳಿಸಿದ್ದರು. ಬಂಗಾಳ 13 ವರ್ಷಗಳಲ್ಲಿ ಮೊದಲ ಬಾರಿ ಫೈನಲ್ ತಲುಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News