ನಾದ ಸೃಷ್ಟಿಸುವ ಕೈಗಳು

Update: 2020-03-22 07:20 GMT

ಭಾರತ ಶಾಸ್ತ್ರೀಯ ಸಂಗೀತದಲ್ಲಿ ಕೆಲವು ನೂರು ವಾದ್ಯಪರಿಕರಗಳಿವೆ. ಅದರಲ್ಲಿ ಕೆಲವು ತಂತೀವಾದ್ಯಗಳಾದರೆ, ಕೆಲವು ಚರ್ಮ ವಾದ್ಯಗಳು. ಇವನ್ನು ತಯಾರು ಮಾಡುವುದಕ್ಕೆ ಸ್ವಲ್ಪಮಟ್ಟಿಗೆ ಸಂಗೀತ ಜ್ಞಾನಬೇಕು. ಸ್ವರಸ್ಥಾನಗಳನ್ನು ಗುರುತಿಸಬಲ್ಲ ಶಕ್ತಿ ಇರಬೇಕು. ಇವೆಲ್ಲಾ ಇದ್ದರೇನೇ ಒಂದು ವಾದ್ಯ ಪರಿಕರ ಶ್ರುತಿಬದ್ಧವಾಗಿ ತಯಾರಾಗುತ್ತದೆ. ಮುಖ್ಯವಾಗಿ ತಬಲಾ, ಮೃದಂಗದಂತಹವನ್ನು ತಯಾರು ಮಾಡುವುದು ತುಂಬಾ ಕಷ್ಟ. ಅವುಗಳ ತಯಾರಿಗೆ ಮರದೊಂದಿಗೆ ಜಂತು ಚರ್ಮಗಳನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಇದನ್ನು ಗಂಡಸರೇ ತಯಾರು ಮಾಡುತ್ತಾರೆ. ಆದರೆ ಪುರುಷರಿಗೆ ಯಾವ ಮಾತ್ರವೂ ಕಡಿಮೆ ಇಲ್ಲ ಎಂಬಂತೆ ಇದುವರೆಗೆ 10,000 ವಾದ್ಯಪರಿಕರಗಳನ್ನು ತಯಾರು ಮಾಡಿದ್ದಾರೆ ಬೆಂಗಳೂರಿನ ಶ್ರೀಮತಿ ಅಶ್ವತ್ಥಮ್ಮ.

‘‘ನಮ್ಮವರು ಆರ್.ಎಸ್.ಅನಂತರಾಮಯ್ಯ ಸಂಗೀತಗಾರರು. ಆತ ತಬಲಾ, ಮೃದಂಗ ವಾದ್ಯಗಳಲ್ಲಿ ನಿಪುಣರು. ನನ್ನ ಹದಿನೈದನೇ ವಯಸ್ಸಿನಲ್ಲಿ ನನಗೆ ವಿವಾಹವಾಯಿತು. ನಾನು ಅಡುಗೆಯೊಂದಿಗೆ ನಮ್ಮವರಿಂದ ವಾದ್ಯಪರಿಕರಗಳ ತಯಾರಿ, ಅವನ್ನು ರಿಪೇರಿ ಮಾಡುವುದು ಎರಡನ್ನೂ ಕಲಿತುಕೊಂಡೆ’’ ಎನ್ನುವ ಅಶ್ವತ್ಥಮ್ಮ ಬೆಂಗಳೂರು ಬಳೇಪೇಟ್ ಸರ್ಕಲ್‌ನಲ್ಲಿನ ಶಾಂತಾ ತಬಲಾ ವರ್ಕ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

 ‘‘ಈ ವಾದ್ಯಗಳ ತಯಾರಿಕೆಗೆ ಶಾರೀರಿಕ ಬಲ ಸಹ ತುಂಬಾ ಅಗತ್ಯ. ಬಲವಾದ ಏಟುಗಳನ್ನು ಹೊಡೆಯುತ್ತಾ ವಾದ್ಯಗಳ ತಯಾರು ಮಾಡುವುದು ಗಂಡಸರಿಗೆ ಮಾತ್ರವೇ ಸಾಧ್ಯ ಎಂದು ಭಾವಿಸಲಾಗಿತ್ತು. ಅಂಥದ್ದು ನನ್ನ ಸ್ನಾಯು ಬಲದಿಂದ ಈ ಕಲೆಯಲ್ಲಿ ನೈಪುಣ್ಯ ಸಾಧಿಸಿದ್ದೇನೆ’’ ಎನ್ನುತ್ತಾರೆ 75 ವರ್ಷದ ಅಶ್ವತ್ಥಮ್ಮ.

ಸಂಗೀತಕ್ಕೆ ಸಂಬಂಧಿಸಿ ಎಂತಹ ಕೋರ್ಸ್‌ಗಳನ್ನು ಮಾಡಲಿಲ್ಲ ಅಶ್ವತ್ಥಮ್ಮ. ಆದರೆ, ವಾದ್ಯಗಳ ತಯಾರು ಮಾಡುವಾಗ ಅದರಲ್ಲಿ ನುಡಿಯುವ ಅಪಶ್ರುತಿಗಳನ್ನು ಗುರುತಿಸಬಲ್ಲರು ಅಶ್ವತ್ಥಮ್ಮ. ಅವುಗಳಲ್ಲಿನ ಮಾಧುರ್ಯ ತಿಳಿದುಕೊಳ್ಳಬಲ್ಲರು. ಬೆಂಗಳೂರಿನಲ್ಲಿ ಯಾರಿಗೆ ವಾದ್ಯಗಳು ಬೇಕೆಂದರೂ ಶಾಂತಾ ತಬಲಾ ವರ್ಕ್ಸ್‌ಗೆ ಬರಬೇಕಾದ್ದೆ.

ಅಶ್ವತ್ಥಮ್ಮ ಗಂಡ ಅನಂತರಾಮಯ್ಯನವರು ದೇವಾಲಯಗಳಲ್ಲೂ, ನಾಟಕಗಳಲ್ಲೂ ಮೃದಂಗ ಬಾರಿಸುವವರು. ಆ ದಿನಗಳಲ್ಲಿ ಅಷ್ಟಾಗಿ ಹಣ ಬರುತ್ತಿರಲಿಲ್ಲ. ಅಶ್ವತ್ಥಮ್ಮ ಆ ಕೆಲಸ ಈ ಕೆಲಸ ಬೇಡೆಂದು ಪತಿಯನ್ನು ವಾದ್ಯಗಳ ತಯಾರಿಗೆ ಪ್ರೋತ್ಸಾಹಿಸಿದರು. ತಾವು ಹೆಗಲು ಕೊಟ್ಟು ದುಡಿದರು. ಈ ದಂಪತಿಗಳು ಎಷ್ಟೋ ಟೀಕೆಗಳನ್ನು ಎದುರಿಸಿದರು. ‘‘ವಾದ್ಯಗಳನ್ನು ಜಂತು ಚರ್ಮಗಳಿಂದ ತಯಾರಿಸುತ್ತಾರೆನ್ನುವುದು ಸರ್ವವಿದಿತ. ನಮ್ಮ ಕುಟುಂಬದವರೆಲ್ಲಾ ದೇವಾಲಯಗಳಲ್ಲಿ ಕೆಲಸ ಮಾಡುವವರು. ನಾವು ಜಂತು ಚರ್ಮಗಳಿಂದ ಕೆಲಸ ಮಾಡಿದ್ದಕ್ಕೆ ನಮ್ಮನ್ನು ದೂರ ಇಟ್ಟರು. ಗಂಡಸರು ಮಾಡುವ ಮೃದಂಗದ ಕೆಲಸ ಮಾಡೋದ್ಯಾಕೆ ಎಂದು ನನ್ನನ್ನು ದೂರುತ್ತಿದ್ದರು. ಜಂತು ಚರ್ಮಗಳಿಂದ ತಯಾರಿಸುವ ವಾದ್ಯಗಳಿಗೆ ಶಕ್ತಿಯೂ, ಕೌಶಲವೂ ಇರಬೇಕು’’ ಎಂದರು ಅಶ್ವತ್ಥಮ್ಮ.

‘‘ತಬಲಾ ರಿಪೇರಿ ಮಾಡುವುದಕ್ಕೆ ಸುಮಾರು ಒಂದು ವಾರ, ಮೃದಂಗವಾದರೆ ಸುಮಾರು ಹತ್ತು ದಿನಗಳ ಸಮಯ ಬೀಳುತ್ತದೆ. ಈ ವಾದ್ಯಗಳನ್ನು ಹಲಸಿನ ಮರ, ಮಾವಿನ ಮರಗಳೊಂದಿಗೆ ಇತರ ಮರಗಳಿಂದಲೂ ತಯಾರು ಮಾಡುತ್ತಾರೆ. ದನ, ಎಮ್ಮೆ, ಮೇಕೆ ಚರ್ಮಗಳನ್ನು ವಾದ್ಯಗಳ ಚರ್ಮಕ್ಕೋಸ್ಕರ ಬಳಸುತ್ತಾರೆ. ನಾನು ಸುಮಾರು 100 ರೀತಿಯ ವಾದ್ಯ ಪರಿಕರಗಳನ್ನು ತಯಾರು ಮಾಡ್ತೀನಿ. ಇದುವರೆಗೂ ಕೆಲವು ನೂರು ವಾದ್ಯಗಳ ರಿಪೇರಿ ಮಾಡಿರುತ್ತೇನೆ’’ ಎನ್ನುತ್ತಾರೆ ಆಕೆ. ಪ್ರಮುಖ ಸಂಗೀತ ವಿದ್ವಾಂಸರೆಲ್ಲರೂ ಅಶ್ವತ್ಥಮ್ಮನವರಿಂದಲೇ ವಾದ್ಯ ರಿಪೇರಿ ಮಾಡಿಸಿಕೊಳ್ಳುತ್ತಾರೆ.

ಈ ಅರವತ್ತು ವರ್ಷಗಳಲ್ಲಿ ಅಶ್ವತ್ಥಮ್ಮರ ಕೈನಿಂದ 10,000 ವಾದ್ಯ ಪರಿಕರಗಳು ಕಲಾವಿದರ ಕೈಗಳಿಗೆ ಹೋಗಿವೆ. ತಬಲಾ, ಮೃದಂಗ, ಢೋಲಕ್, ಢೋಲ್ಕಿ, ಢಮರುಗ, ನಗಾರಿ, ಕಂಜರಾ ಇತ್ಯಾದಿ ತಯಾರಾಗುತ್ತಿರುತ್ತವೆ.

‘‘ನಮ್ಮವರಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಬಂದಿದೆ. ಪ್ರಸ್ತುತ ನಮ್ಮ ಮಗ ಶ್ರೀನಿವಾಸ್ ಈ ಸಂಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾನೆ’’ ಎನ್ನುವ ಅಶ್ವತ್ಥಮ್ಮನವರ ಪ್ರತಿಭೆ, ಪರಿಶ್ರಮಗಳು ವಾದ್ಯ ಸಂಗೀತಕ್ಕೆ ಹೆಸರು ಕೊಡದೇ ಉಸಿರು ತುಂಬುತ್ತಿದೆ.

ಪರಿಚಯ-ಸಂದರ್ಶನ: ವೈಜಯಂತಿ

ಕೃಪೆ: Sakshi Family

Writer - ಕನ್ನಡಕ್ಕೆ: ಕಸ್ತೂರಿ

contributor

Editor - ಕನ್ನಡಕ್ಕೆ: ಕಸ್ತೂರಿ

contributor

Similar News