ಸಾಮಾಜಿಕ ಜಾಲತಾಣಗಳು ವರವೋ, ಶಾಪವೋ?

Update: 2020-03-22 07:37 GMT

ಸಾಮಾಜಿಕ ಜಾಲತಾಣ ಎಂಬುದು ಪ್ರತಿಭೆ ಅನಾವರಣಕ್ಕೆ ಪ್ರಬುದ್ಧ ವೇದಿಕೆ ಆದರೆ ಅಸಂಬದ್ಧ ತಾಳಮೇಳ ರಾಗವಿಲ್ಲದ ಪುಂಡು ಪೋಕರಿಗಳಿಗೆ ಹುಚ್ಚುಗಟ್ಟುವ ವೇದಿಕೆಯು ಹೌದು. ಜಾಲತಾಣಗಳು ತಮ್ಮ ಒಳ್ಳೆಯ ವಿಚಾರ ಮತ್ತು ಕೆಟ್ಟ ವಿಚಾರ ಅಡಗಿಸಿಕೊಂಡಿದೆ, ಆದರೆ ಅದು ಬಳಸುವವರ ಮೇಲೆ ನಿರ್ಧರಿತವಾಗಿದೆ. ಶೇ.75ರಷ್ಟು ಯುವಜನಾಂಗ ಸಾಮಾಜಿಕ ಜಾಲತಾಣದ ದಾಸರಾಗಿದ್ದಾರೆ. ಪ್ರಕೃತಿ ವಿಕೋಪ ಆದಾಗ ಜಿಲ್ಲಾ ಆಡಳಿತದೊಂದಿಗೆ ನೆರವು ನೀಡಿ ಕೈ ಜೋಡಿಸಿದ ಕಾರ್ಯ ಮಾಡಿರುವುದು ಹೆಮ್ಮೆಯ ವಿಷಯ. ಹಲವಾರು ಪ್ರತಿಭೆಗಳಿಗೆ ವೇದಿಕೆ ಕೂಡ ಕಲ್ಪಿಸಿ ಅವರಿಗೆ ಯಶಸ್ಸನ್ನು ನೀಡಿದೆ. ಸಮಾಜಕ್ಕೆ ಬೇಕಾದ ಸುದ್ದಿಯನ್ನು ನೀಡಿ ಬೆಳಕನ್ನು ಚೆಲ್ಲಿದೆ. ನಾವು ಒಳ್ಳೆಯ ದೃಷ್ಟಿಯಿಂದ ಉಪಯೋಗಿಸಿದರೆ ಒಳಿತು ಆಗುವುದು, ಕೆಟ್ಟ ದೃಷ್ಟಿಯಿಂದ ಉಪಯೋಗಿಸಿದರೆ ಕೆಡುಕು ಆಗುವುದು. ಒಟ್ಟಾಗಿ ನಮ್ಮ ಹತೋಟಿ ನಮ್ಮ ಕೈಯಲ್ಲಿದೆ ನಮ್ಮ ಕೆಲಸ ಕಾರ್ಯವನ್ನು ಬಿಟ್ಟು ಅದರಲ್ಲಿಯೇ ಮುಳುಗಿ ಸಮಯವನ್ನು ವ್ಯರ್ಥ ಮಾಡದೆ ಕ್ರಿಯಾತ್ಮಕ ಚಿಂತನೆಗಳನ್ನು ಆಲೋಚಿಸೋಣ. ಜಾತಿ ಧರ್ಮದ ಬಗ್ಗೆ ಅವಹೇಳನಕಾರಿ ವಿಷಯಗಳನ್ನು ಹಾಕಿ ಯಾತಕ್ಕಾಗಿ ಸಮಾಜವನ್ನು ಕೆಡಿಸುವುದು?

ಕೆಲವರು ಮಾನಸಿಕ ಅಸ್ವಸ್ಥರಲ್ಲಿ ಹಾಡು ಹೇಳಿಸುವುದು, ಕುಡುಕರಲ್ಲಿ ನೃತ್ಯ ಮಾಡಿಸೋದು ಇದನ್ನೆಲ್ಲ ಸಾಮಾಜಿಕ ಜಾಲತಾಣಕ್ಕೆ ಹಾಕಿ ಮನರಂಜನೆ ಪಡೆಯುವುದು, ಕೆಲವರು ಪ್ರಚಾರ ಸಿಗಬೇಕೆಂಬ ಆಸೆಗಾಗಿ ಸಾಹಸ ಮಾಡಲು ಹೋಗಿ ಸತ್ತಿರುವ ಘಟನೆಗಳ ಹಲವಾರು ಉದಾಹರಣೆಗಳು ಇವೆ. ಕಲಿಯುವ ಸಮಯದಲ್ಲಿ ಕಲಿತು ಸಾಧಿಸುವ ದುಡಿಯುವ ಸಮಯದಲ್ಲಿ ದುಡಿದು ಸಾಧಿಸುವ, ನಮ್ಮ ಹೆತ್ತವರಿಗೆ ಆಸರೆಯಾಗುವ, ಸಮಾಜಕ್ಕೆ ಮಾದರಿಯಾಗುವ. ವಿದ್ಯಾವಂತ ಯುವ ಜನಾಂಗವೇ ತಪ್ಪು ದಾರಿಯಲ್ಲಿ ನಡೆದರೆ ಅವರು ಕಲಿತ ವಿದ್ಯೆಗೆ ಏನು ಅರ್ಥವಿದೆ? ಮುಂದಿನ ಜೀವನಕ್ಕೆ ಬೇಕಾದ ನೆಮ್ಮದಿ ಸಿಗುವ ಬಗ್ಗೆ ಅರಿವು ಮೂಡಿಸುವ ವಿಚಾರಗಳನ್ನು ಪ್ರಚಾರ ಮಾಡುವ. ಸಮಯ ಎಂಬುದು ನಮಗೆ ಸಿಕ್ಕಿರುವ ದೊಡ್ಡ ಆಸ್ತಿ. ಕಳೆದು ಹೋದ ಆಸ್ತಿ, ಹಣ ಸಂಪತ್ತನ್ನಾದರೂ ಮತ್ತೆ ಪಡೆಯಬಹುದು. ಕಳೆದು ಹೋದ ಸಮಯವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ನಾವು ಬದಲಾದರೆ ನಮ್ಮವರು ಬದಲಾಗುತ್ತಾರೆ. ಇಡೀ ಸಮಾಜವೇ ಬದಲಾಗುತ್ತದೆ. ಒಳ್ಳೆಯ ವಿಚಾರಗಳನ್ನು ಯೋಚಿಸೋಣ ಕೆಟ್ಟ ವಿಚಾರಗಳನ್ನು ತ್ಯಜಿಸೋಣ ನಾವೆಲ್ಲರು ಮಾನವರೆಂಬುದನ್ನು ಮನದಲ್ಲಿಟ್ಟು ಬದುಕಿ ಮುಂದೆ ನಡೆದರೆ ಸಾಕು. ಸಾಮಾಜಿಕ ಜಾಲತಾಣದಿಂದ ಸಮಾಜಕ್ಕೆ ಮಾದರಿಯಾಗೋಣ.

Writer - ಸುರೇಂದ್ರ ಜೈನ್ ನಾರಾವಿ

contributor

Editor - ಸುರೇಂದ್ರ ಜೈನ್ ನಾರಾವಿ

contributor

Similar News