ಇಂದಿನಿಂದ ವಲಸೆ ಕಾರ್ಮಿಕರು ರಸ್ತೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ: ಸುಪ್ರೀಂಗೆ ಕೇಂದ್ರ ಭರವಸೆ

Update: 2020-03-31 18:51 GMT

ಹೊಸದಿಲ್ಲಿ, ಮಾ.31:ತಮ್ಮ ಗ್ರಾಮಗಳಿಗೆ ನಗರಗಳಿಗೆ ಪಲಾಯನ ಮಾಡುತ್ತಿದ್ದ ವಲಸೆ ಕಾರ್ಮಿಕರು ಸೇರಿದಂತೆ ಸಾವಿರಾರು ಜನರಿಗೆ ತಾತ್ಕಾಲಿಕವಾಗಿ ಕಲ್ಪಿಸಲಾಗಿರುವ ಮನೆಗಳಲ್ಲಿ ಆಹಾರ, ನೀರು ಮತ್ತು ಔಷಧಿಗಳಂತಹ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರಕಾರಕ್ಕೆ ಆದೇಶ ನೀಡಿದೆ.

 ವಲಸೆ ಕಾರ್ಮಿಕರ ದೊಡ್ಡ ಪ್ರಮಾಣದ ವಲಸೆ ನಿಯಂತ್ರಣಕ್ಕೆ ತರಲಾಗಿದೆ ಮತ್ತು ಅವರೆಲ್ಲರನ್ನೂ ತಾತ್ಕಾಲಿಕ ನೆಲೆ ಕಲ್ಪಿಸಲಾಗಿದೆ ಎಂದು ಕೇಂದ್ರ ಸರಕಾರ ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದೆ.

 “ಈಗ ಯಾರೂ ರಸ್ತೆಯಲ್ಲಿಲ್ಲ ಎಂದು ಹೇಳಲು ನನಗೆ ಸೂಚನೆಗಳಿವೆ. ಅಂತವರು ಯಾರಾದರೂ ಕಂಡು ಬಂದರೆ ಅವರನ್ನು ಲಭ್ಯವಿರುವ ಆಶ್ರಯ ತಾಣಗಳಿಗೆ ಕರೆದೊಯ್ಯಲಾಗಿದೆ” ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.

ಸುಪ್ರೀಂ ಕೋರ್ಟ್ ಎರಡು ಅರ್ಜಿಗಳನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಒಂದು ಅರ್ಜಿದಾರರ ಪರ ವಕೀಲರಾದ ರಶ್ಮಿ ಬನ್ಸಾಲ್ ಮತ್ತು ಅನುಜ್ ಗುಪ್ತಾ ಹಾಗೂ ಇನ್ನೊಂದು ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರು ವಲಸೆ ಕಾರ್ಮಿಕರ ದುಃಸ್ಥಿತಿಯನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಮಾರ್ಚ್ 25 ರಂದು ಪ್ರಾರಂಭವಾದ ಲಾಕ್‌ಡೌನ್ ದೇಶದ ದೊಡ್ಡ ನಗರಗಳಿಂದ ಕಾರ್ಮಿಕರನ್ನು ತಮ್ಮ ದೂರದ ಸ್ಥಳೀಯ ಪಟ್ಟಣಗಳು ಮತ್ತು ಗ್ರಾಮಗಳಿಗೆ ಸ್ಥಳಾಂತರಿಸಲು ಕಾರಣವಾಯಿತು. ಪೂರ್ವ ದಿಲ್ಲಿಯ ಆನಂದ್ ವಿಹಾರ್ ಬಸ್ ನಿಲ್ದಾಣದಲ್ಲಿ ಸಾವಿರಾರು ಜನರು ಉತ್ತರ ಪ್ರದೇಶಕ್ಕೆ ಪ್ರಯಾಣಿಸಲು ದಿಲ್ಲಿಗೆ ಬಂದಾಗ ಪರಿಸ್ಥಿತಿ ಹದಗೆಟ್ಟಿತು. ಇದಲ್ಲದೆ, ಸಾರ್ವಜನಿಕ ಸಾರಿಗೆ ಲಭ್ಯವಿಲ್ಲದ ಕಾರಣ ಅವರಲ್ಲಿ ಅನೇಕರು ತಮ್ಮ ಕುಟುಂಬಗಳೊಂದಿಗೆ ಕಾಲ್ನಡಿಗೆಯಲ್ಲಿ ಹೊರಟರು.

ಈ ಸಂಬಂಧ ಉನ್ನತ ನ್ಯಾಯಾಲಯ ಸೋಮವಾರ ಕೇಂದ್ರ ಸರಕಾರದಿಂದ ವಸ್ತುಸ್ಥಿತಿ ಬಗ್ಗೆ ವರದಿ ಕೇಳಿತ್ತು.

ಮಂಗಳವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕೊರೋನ ವೈರಸ್ ಹರಡುವುದನ್ನು ತಪ್ಪಿಸಲು ಕೇಂದ್ರವು ಕೈಗೊಂಡ ವಿವಿಧ ಕ್ರಮಗಳನ್ನು ವಿವರಿಸಿದೆ.

ಕೇಂದ್ರದಿಂದ ಸಾಂಸ್ಥಿಕ ಪ್ರತಿಕ್ರಿಯೆ ಇದೆ ಮತ್ತು ಪರಿಸ್ಥಿತಿಯನ್ನು ಪ್ರಧಾನಮಂತ್ರಿಗಳು ನಿಭಾಯಿಸುತ್ತಿದ್ದಾರೆ. ಚೀನಾ, ಹಾಂಗ್‌ಕಾಂಗ್‌ನಿಂದ ಆಗಮಿಸಿ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಜನವರಿ 18ರಂದು ಮೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಾರಂಭವಾಯಿತು ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಜನವರಿ 30ರ ಮೊದಲು ಮತ್ತು ಮಾರ್ಚ್ 4ರ ಹೊತ್ತಿಗೆ ಎಲ್ಲಾ ಅಂತರ್‌ರಾಷ್ಟ್ರೀಯ ವಿಮಾನಗಳಿಗೆ ಥರ್ಮಲ್ ಸ್ಕ್ರೀನಿಂಗ್‌ನ್ನು ಪ್ರಾರಂಭಿಸಲಾಯಿತು . ರೋಗ ಲಕ್ಷಣ ಹೊಂದಿರುವ ಎಲ್ಲ ರೋಗಿಗಳನ್ನು ನೇರವಾಗಿ ವಿಮಾನ ನಿಲ್ದಾಣ ಪಕ್ಕದ ಐಸೋಲೇಶನ್ ಕೇಂದ್ರಗಳಿಗೆ ಕರೆದೊಯ್ಯಲಾಯಿತು.

ಕೊರೋನ ವೈರಸ್ ಹರಡುವಿಕೆ ಸಂಬಂಧಿಸಿ ಸುಳ್ಳು ಸುದ್ದಿ ಹರಡಿರುವ ಬಗ್ಗೆ ಕೇಂದ್ರವು ನ್ಯಾಯಾಲಯದ ಗಮನವನ್ನು ಸೆಳೆಯಿತು. ಅಂತಹ ಸುದ್ದಿಗಳು ಇಡೀ ದೇಶಕ್ಕೆ ಭೀತಿ ಮತ್ತು ಗಂಭೀರ ಹಾನಿಯನ್ನುಂಟುಮಾಡುತ್ತವೆ ಎಂದು ಕೇಂದ್ರ ಸರಾಕರ ಮಾಹಿತಿ ನೀಡಿದೆ.

ಆದ್ದರಿಂದ ವಸ್ತುಸ್ಥಿತಿಯನ್ನು ಅರಿಯದೆ ಯಾವುದನ್ನೂ ಪ್ರಕಟಿಸದಂತೆ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ನಿರ್ದೇಶನ ನೀಡಬೇಕು ಎಂದು ಕೇಂದ್ರ ಸರಕಾರ ಸುಪ್ರೀಂಗೆ ಮನವಿ ಮಾಡಿತು.

ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಮತ್ತು ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಅವರನ್ನೊಳಗೊಂಡ ನ್ಯಾಯಪೀಠವು ಕೊರೋನ ವೈರಸ್ ಬೆದರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲವನ್ನು ಪರಿಹರಿಸಲು ತಜ್ಞರ ಸಮಿತಿಯನ್ನು ರಚಿಸುವಂತೆ ಕೇಂದ್ರವನ್ನು ಕೇಳಿದೆ.

ಸೋಶಿಯಲ್ ಮೀಡಿಯಾ ಮೂಲಕ ಸುಳ್ಳು ಮತ್ತು ತಪ್ಪಾದ ಮಾಹಿತಿಯನ್ನು ಹರಡುವುದನ್ನು ತಡೆಯುವ ಅಗತ್ಯವನ್ನು ಇದು ಒತ್ತಿಹೇಳುತ್ತದೆ ಮತ್ತು ನಕಲಿ ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಹಸಿರು ನಿಶಾನೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News