ಮುಸ್ಲಿಮ್ ಚಿಂತಕರ ಚಾವಡಿ ಮನವಿ

Update: 2020-04-04 17:39 GMT

ಮಾನ್ಯರೇ,

ಕೊರೋನ ವೈರಸ್ ಕಾರಣದಿಂದ ಇಡೀ ದೇಶ ನಲುಗುತ್ತಿದೆ. ಅದರಿಂದ ಪಾರಾಗಲು ಈ ದೇಶದ ಜನ ತಮ್ಮ ಜಾತಿ, ಧರ್ಮ, ಭಾಷೆ, ಪ್ರಾಂತದ ಭೇದವನ್ನು ಬದಿಗಿಟ್ಟು ವೈದ್ಯರು ಮತ್ತು ಸರಕಾರದ ಅಗತ್ಯ ಕ್ರಮಗಳಿಗೆ ಸಹಕರಿಸಬೇಕಿದೆ. ಈ ಹೊತ್ತಿನಲ್ಲಿ ಕೆಲವು ಅತಿಯಾದ ಧಾರ್ಮಿಕ ಶ್ರದ್ಧೆಯುಳ್ಳ ಜನ ಮತ್ತು ಮೂಲಭೂತವಾದಿಗಳು ಹುಂಬತನದಿಂದ ವರ್ತಿಸುತ್ತಾ ಕೊರೋನ ವಿರುದ್ಧದ ಹೋರಾಟದಲ್ಲಿ ತೊಡಕನ್ನು ಉಂಟು ಮಾಡುತ್ತಿದ್ದಾರೆ. ಈ ಬಗೆಯ ಹುಂಬತನ, ಉಡಾಫೆ ಮಾಡುವವರು ಎಲ್ಲ ಧಾರ್ಮಿಕ ಸಮುದಾಯಗಳಲ್ಲೂ ಇದ್ದಾರೆ. ಇದಕ್ಕೆ ಕಳೆದ 25 ದಿನಗಳಿಂದ ದೇಶದಲ್ಲಿ ನಡೆದಿರುವ ಘಟನೆಗಳು ಸಾಕ್ಷಿ. ಇದನ್ನು ಎಲ್ಲ ಪ್ರಜ್ಞಾವಂತರೂ ಖಂಡಿಸಬೇಕಿದೆ.

ಇದೇ ಹೊತ್ತಿನಲ್ಲಿ ಕೆಲವು ಹುಂಬರ ಮತ್ತು ಮೂಲಭೂತವಾದಿಗಳ ಮಾತು ಮತ್ತು ಕ್ರಿಯೆಗಳನ್ನು ಇಡಿಯಾಗಿ ಒಂದು ಸಮುದಾಯದ ತಲೆಗೆ ಕಟ್ಟುವ, ಅದರ ವಿರುದ್ಧ ದ್ವೇಷವನ್ನು ವ್ಯವಸ್ಥಿತವಾಗಿ ಹಬ್ಬಿಸುವ ಕೆಲಸದಲ್ಲಿ ಕೆಲವರು ತೊಡಗಿದ್ದಾರೆ. ಕೆಲವು ಮಾಧ್ಯಮಗಳು ಸಹ ಈ ಕೆಲಸವನ್ನು ಮಾಡುತ್ತಿವೆ. ಇದು ತಪ್ಪು ಮತ್ತು ಅಪಾಯಕರ. ವ್ಯಕ್ತಿ ಮತ್ತು ಗುಂಪಿನವರು ಯಾವುದೇ ಧಾರ್ಮಿಕ ಸಮುದಾಯಕ್ಕೆ ಸೇರಿರಲಿ, ಅವರು ಮಾಡುವ ತಪ್ಪುಗಳನ್ನು ಎಲ್ಲರೂ ಖಂಡಿಸಬೇಕಿದೆ. ಜಾತಿ, ಮತಾತೀತವಾಗಿ ಈ ಬಿಕ್ಕಟ್ಟಿನ ಸನ್ನಿವೇಶವನ್ನು ಒಗ್ಗಟ್ಟಾಗಿ ಎದುರಿಸಬೇಕಿದೆ. ಭಾರತವು ಕಷ್ಟಕರವಾದ ಈ ಯುದ್ಧದಲ್ಲಿ ಗೆಲುವನ್ನು ಸಾಧಿಸುತ್ತದೆ ಎಂದು ನಾವು ನಂಬಿದ್ದೇವೆ. ಈ ವಿಷಯದಲ್ಲಿ ಮುಸ್ಲಿಮ್ ಚಿಂತಕರ ಚಾವಡಿಯು ಸರಕಾರವು ಕೈಗೊಳ್ಳುವ ಎಲ್ಲ ಉಪಯುಕ್ತ ಕ್ರಮಗಳನ್ನು ಬೆಂಬಲಿಸುತ್ತದೆ. ಸಹನೆಯಿಂದ ವಿವೇಕದಿಂದ ಈ ಸನ್ನಿವೇಶವನ್ನು ಎದುರಿಸಬೇಕೆಂದು ಮುಸ್ಲಿಮ್ ಸಮುದಾಯಕ್ಕೆ ವಿನಂತಿಸುತ್ತದೆ. ಕೊರೋನ ವೈರಸ್‌ನ ಹಿನ್ನೆಲೆಯಲ್ಲಿ, ಮುಸ್ಲಿಮ್ ಧರ್ಮದ ವಿಚಾರಗಳನ್ನು ತಿರುಚಿ ಬಹು ಮಾಧ್ಯಮಗಳಲ್ಲಿ ಅಪಪ್ರಚಾರವನ್ನು ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸರಕಾರವನ್ನು ಆಗ್ರಹಿಸುತ್ತದೆ.

ರಂಝಾನ್ ದರ್ಗಾ, ಬಾನು ಮುಷ್ತಾಕ್, ಬಿ.ಪೀರ್ ಬಾಷಾ, ಅಬ್ದುಸ್ಸಲಾಂ ಪುತ್ತಿಗೆ, ಮುನೀರ್ ಕಾಟಿಪಳ್ಳ, ಅನೀಸ್ ಪಾಶಾ, ಡಾ.ರಹಮತ್ ತರೀಕೆರೆ, ಡಾ.ಮುಝಾಫರ್ ಅಸಾದಿ, ಜೆ.ಕಲೀಂಬಾಷಾ, ಡಾ.ಸಿರಾಜ್ ಅಹಮದ್, ಡಾ.ರಝಾಕ್ ಉಸ್ತಾದ್, ಇಮಾಮ್ ಗೋಡೆಕಾರ, ಡಾ.ಶಾಕಿರ ಖಾನಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News