ತನ್ನನ್ನು ಕಾಪಾಡಿದ ಇನ್ಸ್ಪೆಕ್ಟರ್ ಮೊಹಮ್ಮದ್ ರಫಿಯನ್ನು ಬಿಟ್ಟಗಲುತ್ತಿಲ್ಲ ಈ ಕರು!
ಬೆಂಗಳೂರು: ನಗರದ ಬೈಯ್ಯಪ್ಪನ ಹಳ್ಳಿ ಪೊಲೀಸ್ ಸ್ಟೇಶನ್ನಲ್ಲಿ ಕರುವೊಂದು ಪೊಲೀಸ್ ಅಧಿಕಾರಿಯನ್ನು ಹಿಂಬಾಲಿಸುವುದು ಇದೀಗ ಒಂದು ಸಾಮಾನ್ಯ ದೃಶ್ಯವಾಗಿದೆ.
ನಗರದ ಬೈಯ್ಯಪ್ಪನ ಹಳ್ಳಿ ಪೊಲೀಸ್ ಸ್ಟೇಶನ್ನ ಅಧಿಕಾರಿಗಳು 15 ದಿನಗಳ ಹಿಂದೆ ಬಿಳಿ ಕಂದುಬಣ್ಣದ ಕರುವನ್ನು ರಕ್ಷಿಸಿದ್ದರು. ಇದೀಗ ಈ ಕರು ಇನ್ಸ್ಪೆಕ್ಟರ್ ಮೊಹಮ್ಮದ್ ರಫಿ ಅವರನ್ನು ಬಿಟ್ಟಗಲುತ್ತಿಲ್ಲ. ಮಾರ್ಚ್ 30 ಮಧ್ಯರಾತ್ರಿ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ತಮ್ಮ ಸಮೀಪದ ಚೆಕ್ ಪೋಸ್ಟ್ನ್ನು ವೇಗವಾಗಿ ದಾಟಿ ಹೋಗಲು ಯತ್ನಿಸುತ್ತಿದ್ದ ವಾಹನವನ್ನು ತಡೆದಿದ್ದರು. ಕಾರಿನ ಹಿಂದಿನ ಸೀಟಿನಲ್ಲಿ ಕರುವೊಂದು ಪತ್ತೆಯಾಗಿದ್ದು ಅದರ ಮುಖಕ್ಕೆ ಪ್ಲಾಸ್ಟಿಕ್ ಕವರನ್ನು ಸುತ್ತಲಾಗಿತ್ತು. ನಾವು ಮನೆಗೆ ಹೋಗುವ ದಾರಿಯಲ್ಲಿ ಈ ಅನಾಥ ಕರು ಪತ್ತೆಯಾಗಿತ್ತೆಂದು ಕಾರಿನಲ್ಲಿದ್ದವರು ಹೇಳಿದರು. ಪೊಲೀಸ್ ತನಿಖೆಯ ಬಳಿಕ ಇದು ಸತ್ಯವೆಂದು ಗೊತ್ತಾಯಿತು.
ಹುಟ್ಟಿ 7 ದಿನವಾಗಿದ್ದ ಕರುವನ್ನು ಅದೇ ದಿನ ರಾತ್ರಿ ಪೊಲೀಸ್ ಸ್ಟೇಶನ್ಗೆ ಕರೆತಂದಿದ್ದ ಇನ್ಸ್ಪೆಕ್ಟರ್ ಮೊಹಮ್ಮದ್ ರಫಿ ಕರುವಿಗೆ 'ಭೀಮ' ಎಂದು ಹೆಸರಿಟ್ಟಿದ್ದರು. ಇನ್ಸ್ಪೆಕ್ಟರ್ ರಫಿ ಪಶುವೈದ್ಯರ ಶಿಫಾರಸಿನ ಮೇರೆಗೆ ಪ್ರತಿದಿನ ಕರುವಿಗೆ 20 ಲೀಟರ್ ಹಾಲು, ದ್ವಿದಳ ಧಾನ್ಯ ಹಾಗೂ ಇತರ ಸಿರಿಧಾನ್ಯಗಳನ್ನು ತಿನ್ನಿಸಿದರು.
"ನಾನು ಇಲ್ಲಿಂದ ವರ್ಗಾವಣೆಯಾಗುವ ವೇಳೆಯೂ ನನ್ನ ಭೀಮನನ್ನು ಕರೆದುಕೊಂಡು ಹೋಗುತ್ತೇನೆ'' ಎಂದು ನನ್ನ ಮನೆಯ ಸದಸ್ಯನಂತೆ ಕರುವಿನ ಆರೈಕೆಯಲ್ಲಿ ತೊಡಗಿರುವ ಇನ್ಸ್ಪೆಕ್ಟರ್ ರಫಿ ಭಾವುಕರಾಗಿ ಹೇಳಿದ್ದಾರೆ