'ರಾಷ್ಟ್ರೀಯ ವಿಪತ್ತು' ಘೋಷಿಸಲು ಕೇಂದ್ರವನ್ನು ಒತ್ತಾಯಿಸಿ: ಬಿಎಸ್‌ವೈ ಭೇಟಿಯಾದ ಕಾಂಗ್ರೆಸ್ ನಿಯೋಗ

Update: 2020-04-19 15:16 GMT

ಬೆಂಗಳೂರು, ಎ. 19: ವಿಶ್ವವ್ಯಾಪಿಯಾಗಿ ಹರಡಿರುವ ಕೊರೋನ ವೈರಸ್ ರೋಗವನ್ನು 'ರಾಷ್ಟ್ರೀಯ ವಿಪತ್ತು' ಎಂದು ಕೇಂದ್ರ ಸರಕಾರ ಘೋಷಣೆ ಮಾಡಲು ಮತ್ತು ಕೊರೋನ ರೋಗ ನಿವಾರಣೆ ಹಾಗೂ ಲಾಕ್ ಡೌನ್ ಅವಧಿಯಲ್ಲಿ ಜನರ ಸಂಕಷ್ಟಕ್ಕೆ ಎಲ್ಲ ರೀತಿಯ ಆರ್ಥಿಕ ಹಾಗೂ ಇನ್ನಿತರ ಸಹಾಯ ನೀಡಲು ರಾಜ್ಯ ಸರಕಾರವು ಕೇಂದ್ರವನ್ನು ಒತ್ತಾಯಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದೆ.

ರವಿವಾರ ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರಕಾರ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಪಕ್ಷದ ಕಾರ್ಯಪಡೆ ಸಿದ್ದಪಡಿಸಿದ್ದ ವರದಿಯನ್ನು ಸಲ್ಲಿಕೆ ಮಾಡಲಾಯಿತು.

ಡಬ್ಲ್ಯೂಎಚ್‍ಓ ಮಾರ್ಗಸೂಚಿ ಪ್ರಕಾರ ಕೊರೋನ ರೋಗ ನಿಯಂತ್ರಣಕ್ಕೆ ಪ್ರಾಥಮಿಕವಾಗಿ 10 ಲಕ್ಷ ಜನಸಂಖ್ಯೆಗೆ 10 ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಬೇಕಾಗಿರುತ್ತದೆ. ಆದರೆ, ಇಲ್ಲಿಯವರೆಗೂ ನಮ್ಮ ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಪ್ರತಿ 10 ಲಕ್ಷಕ್ಕೆ ಕೇವಲ 153 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದರೂ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಒಟ್ಟು 12 ಲಕ್ಷ ಕಿಟ್‍ಗಳ ಅಗತ್ಯವಿದ್ದು, ಈಗ ಕೇವಲ 2.27 ಲಕ್ಷ ಕಿಟ್‍ಗಳಿವೆ. 5,46,721 ಎನ್-95 ಮಾಸ್ಕ್ ಗಳು ಮತ್ತು 2,79,999 ಹೈಡ್ರಾಕ್ಸಿಕ್ಲೋರಾಕ್ವಿನ್ ಮಾತ್ರೆಗಳಿವೆ. ಇವು ಯಾವುದಕ್ಕೂ ಸಾಲುವುದಿಲ್ಲ ಎಂಬಂತಾಗಿದೆ. ರಾಜ್ಯದಲ್ಲಿರುವ 18 ಕೊರೋನ ಪರೀಕ್ಷೆ ಲ್ಯಾಬ್‍ಗಳಲ್ಲಿ 9 ಲ್ಯಾಬ್‍ಗಳು ಬೆಂಗಳೂರಿನಲ್ಲಿಯೇ ಇವೆ ಎಂದು ಸಿದ್ದರಾಮಯ್ಯ ಗಮನ ಸೆಳೆದರು.

ಲಾಕ್‍ಡೌನ್ ಅವಧಿಯಲ್ಲಿ ಎಲ್ಲ ಅಸಂಘಟಿತ ವಲಯದ ಕಾರ್ಮಿಕರು, ಕೂಲಿ ಕೆಲಸಗಾರರು ಹಾಗೂ ಬಡವರಿಗೆ ಪ್ರತಿ ತಿಂಗಳು ಕನಿಷ್ಟ 10 ಕೆಜಿ ಅಕ್ಕಿ, ಹಾಲು, 2 ಲೀಟರ್ ಅಡುಗೆ ಎಣ್ಣೆ, ತರಕಾರಿ ಮುಂತಾದ ಪದಾರ್ಥಗಳನ್ನು ಪ್ರತಿ ತಿಂಗಳ ಮೊದಲ ವಾರ ಒದಗಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಲಾಕ್‍ಡೌನ್ ಅವಧಿಯಲ್ಲಿ ನರೇಗಾ ಯೋಜನೆಯನ್ನು ಸ್ಥಗಿತಗೊಳಿಸಿದ ಕಾರಣ ನೋಂದಾಯಿತ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಹೀಗಾಗಿ ಇವರಿಗೆ ಲಾಕ್‍ಡೌನ್ ಅವಧಿಯ ದಿನಗೂಲಿಯನ್ನು ಬ್ಯಾಂಕ್ ಖಾತೆಗಳಿಗೆ ಸರಕಾರ ಜಮಾ ಮಾಡಬೇಕು ಮತ್ತು ಕೂಡಲೇ ನರೇಗಾ ಯೋಜನೆಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಕೆಲಸಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಲಾಕ್‍ಡೌನ್ ಅವಧಿಯಲ್ಲಿ ಸರಕಾರದಿಂದ ಹಂಚಿಕೆ ಮಾಡುತ್ತಿರುವ ಆಹಾರ ಪದಾರ್ಥಗಳ ಕಿಟ್ ಮೇಲೆ ಆಡಳಿತ ಪಕ್ಷದ ನಾಯಕರು ತಮ್ಮ ಪಕ್ಷದ ಚಿಹ್ನೆ ಹೊಂದಿರುವ ಲೇಬಲ್‍ಗಳನ್ನು ಅಂಟಿಸಿ ಮತದಾರರನ್ನು ಓಲೈಸಿಕೊಳ್ಳುವ ಹೀನ ರಾಜಕೀಯ ಪ್ರವೃತ್ತಿಯನ್ನು ತೋರುತ್ತಿದ್ದಾರೆ. ಇಂತಹ ಸರಕಾರಿ ಸೌಲಭ್ಯಗಳ ದುರುಪಯೋಗವನ್ನು ತಡೆಯಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಜೀವ ಮತ್ತು ಜೀವನವನ್ನು ಉಳಿಸಿ, ಬೆಳೆಸಲು ಹದಗೆಟ್ಟಿರುವ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕೂಡಲೇ ರಾಜಕೀಯ ತಜ್ಞರು, ಆರ್ಥಿಕ ತಜ್ಞರು, ಉದ್ಯಮಿಗಳು, ಕಾರ್ಮಿಕ ಸಂಘಟನೆಗಳ ನಾಯಕರನ್ನು ಒಳಗೊಂಡಿರುವ ಕಾರ್ಯಪಡೆಯನ್ನು ರಚಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಕೋರಿದರು.

ಕೊರೋನ ರೋಗದ ಕಾರಣದಿಂದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದಾರೆ. ಈ ಆತಂಕವನ್ನು ದೂರ ಮಾಡಲು ಸರಕಾರ ಕೂಡಲೇ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳ ಹಾಗೂ ಪರೀಕ್ಷೆ ದಿನಾಂಕಕ್ಕೆ ಸಂಬಂಧಪಟ್ಟ ಸೂಕ್ತ ಮಾಹಿತಿ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಹಿರಿಯ ನಾಯಕರಾದ ಡಾ.ಜಿ.ಪರಮೇಶ್ವರ್, ವಿ.ಎಸ್. ಉಗ್ರಪ್ಪ, ಕೆ.ಆರ್. ರಮೇಶ್ ಕುಮಾರ್, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ, ಸಂಸದ ಡಿ.ಕೆ.ಸುರೇಶ್, ವಿಪಕ್ಷದ ಮುಖ್ಯ ಸಚೇತಕ ಅಜಯ್ ಸಿಂಗ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಕೋಮು ಪ್ರಚೋದನೆ; ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹ

ಕೊರೋನ ರೋಗ ಹರಡುವಿಕೆಯಲ್ಲಿ ಧರ್ಮವನ್ನು ಎಳೆದುಕೊಂಡು, ಒಂದು ಕೋಮಿನ ಜನರನ್ನು ಗುರಿಯನ್ನಾಗಿಸಿ ಅವರ ವಿರುದ್ಧ ಅಪಪ್ರಚಾರ ಮಾಡುವವರ ಮೇಲೆ ಕ್ರಮ ಜರುಗಿಸಿದ ಪೊಲೀಸ್ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿರುವುದು ಖಂಡನೀಯ. ತಕ್ಷಣ ಸರಕಾರ ತನ್ನ ನಿರ್ಧಾರ ಬದಲಿಸಿ, ಕೋಮು ಪ್ರಚೋದನೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು'

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News