×
Ad

ರಾಮನಗರ: ವಿವಿಧ ಇಲಾಖೆಗಳ 68 ಸಿಬ್ಬಂದಿಯ ಕೊರೋನ ಟೆಸ್ಟ್ ನೆಗೆಟಿವ್

Update: 2020-04-28 10:16 IST

ಬೆಂಗಳೂರು, ಎ.28: ಪಾದರಾಯನಪುರ ಗಲಭೆಯ ಆರೋಪಿಗಳನ್ನು ರಾಮನಗರ ಆಸ್ಪತ್ರೆಯಲ್ಲಿ ನೋಡಿಕೊಂಡ ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿ ಒಟ್ಟು 68 ಮಂದಿಯನ್ನು ಕೊರೋನ ತಪಾಸಣೆಗೆ ಒಳಪಡಿಸಲಾಗಿದ್ದು, ಎಲ್ಲರ ಫಲಿತಾಂಶವು ನೆಗೆಟಿವ್ ಬಂದಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿಯೂ ಆಗಿರುವ ಉಪ  ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ರಾಮನಗರ ಆಸ್ಪತ್ರೆಯಲ್ಲಿ ಪಾದರಾಯನಪುರ ಆರೋಪಿಗಳ ನೇರ ಸಂಪರ್ಕಕ್ಕೆ ಬಂದಿದ್ದ ಜೈಲು ಸಿಬ್ಬಂದಿ,  ಪೊಲೀಸರು, ಅಧಿಕಾರಿಗಳು, ನಗರಸಭೆ ಸಿಬ್ಬಂದಿ, ಚಾಲಕರು ಸೇರಿದಂತೆ ಒಟ್ಟು 68 ಮಂದಿಗೆ ಹಾಗೂ ಅವರ ಮೊದಲ ಸಂಪರ್ಕಕ್ಕೆ ಬಂದ್ದಿದ್ದ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಎಲ್ಲರ ವರದಿಯೂ ನೆಗೆಟಿವ್ ಫಲಿತಾಂಶ ಬಂದಿರುವುದು ತುಂಬಾ ಸಮಾಧಾನ ತಂದಿದೆ. ಅಷ್ಟೇ ಅಲ್ಲದೆ ಇವರ ಕುಟುಂಬ ಸದಸ್ಯರೂ ತಪಾಸಣೆಗೊಳಪಟ್ಟಿದ್ದು, ಅವರಿಗೂ ಯಾವುದೇ ಸೋಂಕು ತಗುಲಿರುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. 

ಆರೋಪಿಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡಿದ ನಂತರ ಸರಕಾರವೂ ಎಳ್ಳಷ್ಟು ಎಚ್ಚರ ತಪ್ಪದೆ ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ಗಂಟಲು ದ್ರವವನ್ನು ಪರೀಕ್ಷೆ ಮಾಡಲಾಗಿದ್ದು, ಫಲಿತಾಂಶವೂ ನೆಗೆಟಿವ್ ಬಂದಿದೆ. ಆದರೂ ಅವರನ್ನು ಇನ್ನು 12 ದಿನ ರಾಮನಗರದ ಹಾಸ್ಟೆಲ್ ವೊಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲೇ ಇಡಲಾಗುವುದು ಎಂದು ವಿವರಿಸಿದರು.

ಕ್ವಾರಂಟೈನ್ ಮುಗಿದ ಮೇಲೆ ಮತ್ತೊಮ್ಮೆ ಇವರೆಲ್ಲರನ್ನು ತಪಾಸಣೆಗೆ ಒಳಪಡಿಸಲಾಗುವುದು.

ಈ ಮೂಲಕ ಹಸಿರು ವಲಯ ಆಗಿದ್ದ ರಾಮನಗರ ಜಿಲ್ಲೆಯನ್ನು ಕೊರೋನ ಅಪಾಯಕ್ಕೆ ತಳ್ಳಾಯಿತು ಎಂಬ ಆತಂಕ ನಿವಾರಣೆ ಆದಂತೆ ಆಗಿದೆ. ಆದರೂ ಜಿಲ್ಲೆಯಲ್ಲಿ ಸರಕಾರ ಸೋಂಕು ಹರಡದಂತೆ  ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News