ಕೊರೋನ ಸುತ್ತಮುತ್ತ ಜರುಗುತ್ತಿರುವುದೇನು..

Update: 2020-04-28 17:29 GMT

ಚೀನಾ, ಕ್ಯೂಬಾ, ವಿಯಟ್ನಾಮ್, ವೆನೆಝುವೆಲ, ಸಿಂಗಾಪುರದಂತಹ ರಾಷ್ಟ್ರಗಳಲ್ಲಿ ಕೋವಿಡ್-19 ಹರಡುವಿಕೆ ಹಾಗೂ ಸಾವುಗಳನ್ನು ಸಾಕಷ್ಟು ಸಮರ್ಥವಾಗಿ ನಿಯಂತ್ರಿಸಲಾಗಿದೆ. ವಿಯಟ್ನಾಮಿನಲ್ಲಿ 270ರಷ್ಟು ಕೊರೋನ ಪ್ರಕರಣಗಳು ದೃಢಪಟ್ಟಿದ್ದರೂ ಅದರಲ್ಲಿ ಈಗಾಗಲೇ 225 ಜನರು ಗುಣಮುಖರಾಗಿದ್ದಾರೆ. ಇದು ವರೆಗೂ ಅಲ್ಲಿ ಕೊರೋನ ಸಾವಿನ ಪ್ರಕರಣ ದಾಖಲಾಗಿಲ್ಲ. ಅಷ್ಟೇನೂ ಆರ್ಥಿಕವಾಗಿ ಹಾಗೂ ತಾಂತ್ರಿಕವಾಗಿ ಬೆಳವಣಿಗೆ ತಂದುಕೊಂಡಿಲ್ಲವೆಂದು ಹೇಳಲಾಗುತ್ತಿರುವ ಈ ಪುಟ್ಟ ರಾಷ್ಟ್ರ ಈ ಹಿಂದಿನ ಸಾರ್ಸ್ ಸೋಂಕು ಹರಡಿದ್ದ ಸಂದರ್ಭದಲ್ಲೂ ಅದರಿಂದ ಹೊರಬಂದ ಮೊಟ್ಟ ಮೊದಲ ರಾಷ್ಟ್ರವಾಗಿತ್ತು.



ಜಾಗತಿಕವಾಗಿ ಈಗಾಗಲೇ ಮೂರು ದಶಲಕ್ಷದಷ್ಟು ಜನರಿಗೆ ಕೋವಿಡ್-19 ವೈರಸ್ ಬಾಧಿಸಿದೆ ಎಂಬ ಒಂದು ಅಂದಾಜಿದೆ. ಅದರಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಮರಣವನ್ನಪ್ಪಿದ್ದಾರೆ ಎನ್ನಲಾಗಿದೆ. ಮರಣದ ಪ್ರಮಾಣ ಮುಂದುವರಿದವುಗಳೆಂದು ಗುರುಸಿಕೊಂಡ ರಾಷ್ಟ್ರಗಳಲ್ಲಿ ಅತೀ ಹೆಚ್ಚಿ ದಾಗಿದೆ. ಅದರಲ್ಲಿ ಇಟಲಿ, ಸ್ಪೇನ್, ಅಮೆರಿಕ, ಯು.ಕೆ., ಜರ್ಮನಿ, ಚೀನಾ ದೇಶಗಳು ಪ್ರಧಾನವಾಗಿವೆ. ಚೀನಾ ಕೊರೋನದಿಂದಾಗಿ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ಜನರನ್ನು ಕಳೆದುಕೊಂಡು ಹರಡುವಿಕೆಯ ಮೇಲೆ ನಿಯಂತ್ರಣ ಸಾಧಿಸಿ ಈಗ ಕೆಲವು ನಿರ್ಬಂಧಗಳೊಂದಿಗೆ ಸಹಜತೆಗೆ ಮರಳುತ್ತಿರುವ ಸುದ್ದಿಗಳು ಕೇಳಿ ಬರುತ್ತಿವೆ. ಚೀನಾದಲ್ಲಿ ಸಾವಿನ ಪ್ರಮಾಣ ಇನ್ನೂ ಹೆಚ್ಚಾಗಿದೆ, ಅದರ ವಿವರಗಳನ್ನು ಅದು ಮುಚ್ಚಿಟ್ಟಿದೆ ಎಂದು ಅಮೆರಿಕ ಆಪಾದಿಸುತ್ತಿದೆ. ಅಮೆರಿಕ ಕೊರೋನ ವೈರಸ್ ವಿರುದ್ಧ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿ ಅಲ್ಲೀಗ ಅತೀ ಹೆಚ್ಚು ಕೊರೋನ ಸಾವುಗಳು ದಾಖಲಾಗತೊಡಗಿವೆ. ಸೋಮವಾರಕ್ಕೆ ಈ ಸಾವುಗಳ ಸಂಖ್ಯೆ 55,500ವನ್ನು ದಾಟಿದೆ.

ಅದೇ ವೇಳೆಯಲ್ಲೇ ಕೊರೋನದಿಂದ ಗುಣಮುಖ ರಾದವರಲ್ಲೂ ಪುನಃ ರೋಗಲಕ್ಷಣಗಳು ಕಾಣಿಸುತ್ತಿರುವ ವರದಿಗಳೂ ಬರುತ್ತಿವೆ. ಅಲ್ಲದೆ ಯಾವುದೇ ರೋಗಲಕ್ಷಣಗಳಿಲ್ಲದ ಕೊರೋನ ಪೀಡಿತರು ಜಾಗತಿಕವಾಗಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಇಂಡಿಯಾದಲ್ಲಿ ಜನವರಿ 30ಕ್ಕೆ ಮೊದಲ ಕೊರೋನ ಪ್ರಕರಣ ವಿದೇಶದಿಂದ ಬಂದ ಕೇರಳದ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿತ್ತು. ಸೋಮವಾರದ ವರದಿಯಂತೆ 27,892ರಷ್ಟು ಜನರು ಕೊರೋನ ಪೀಡಿತರಾಗಿದ್ದು ಅದರಲ್ಲಿ 884ರಷ್ಟು ಜನರು ಸಾವಿಗೀಡಾಗಿದ್ದಾರೆ. 6,523 ಜನರು ಗುಣಮುಖರಾಗಿದ್ದಾರೆ. ಉತ್ತರ ಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ್ರ, ದಿಲ್ಲಿ, ಗುಜರಾತ್ ಅತೀ ಹೆಚ್ಚು ಬಾಧೆಗೊಳಗಾಗಿ ಸಾವುಗಳ ಪ್ರಮಾಣವನ್ನು ಹೆಚ್ಚಾಗಿ ದಾಖಲಿಸುತ್ತಿವೆ. ಇರುವುದರಲ್ಲಿ ಉತ್ತಮ ನಿರ್ವಹಣೆ ಕೇರಳದಲ್ಲಿ ಕಾಣಿಸುತ್ತಿದೆ. ಅಲ್ಲಿ ಇದುವರೆಗಿನ ಸಾವಿನ ಪ್ರಮಾಣ ಕೇವಲ 4 ಮಾತ್ರ. ಶೇ. 99ರಷ್ಟು ಕೊರೋನ ಪೀಡಿತರು ಗುಣಮುಖರಾಗಿರುವ ಏಕೈಕ ರಾಜ್ಯವಾಗಿದೆ ಇದು. ಒಟ್ಟು ಇಂಡಿಯಾದ ಗುಣಮುಖರಾಗುವ ಪ್ರಮಾಣ ಶೇ.88 ಆಗಿದೆ. ಅತೀ ಕಡಿಮೆ ಗುಣಮುಖರಾಗುವ ಪ್ರಮಾಣದ ರಾಜ್ಯಗಳು ಗುಜರಾತ್ ಹಾಗೂ ಮಹಾರಾಷ್ಟ್ರ ಆಗಿದೆ. ದೇಶದಾದ್ಯಂತ ಕೊರೋನ ಸೋಂಕಿತರು ಎಷ್ಟಿದ್ದಾರೆ ಎನ್ನುವ ಸರಿಯಾದ ಅಂಕಿಅಂಶ ಈಗಲೂ ನಮಗೆ ಸಿಗುವುದು ಕಷ್ಟದಾಯಕವಾದುದು. ಅಲ್ಲದೆ ನಡೆಯುತ್ತಿರುವ ಕೊರೋನ ಪರೀಕ್ಷೆಗಳಲ್ಲಿ ನಮ್ಮ ದೇಶದ್ದು ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ್ದಾಗಿದೆ. ಪರೀಕ್ಷಾ ಸಾಧನಗಳು ಅತ್ಯಂತ ಕಡಿಮೆಯಿವೆ ನಮ್ಮಲ್ಲಿ. ಇತ್ತೀಚೆಗಷ್ಟೇ ಚೀನಾದಿಂದ ವೈಯಕ್ತಿಕ ರಕ್ಷಣಾತ್ಮಕ ಸಲಕರಣೆಗಳನ್ನು (ಪಿಪಿಇ) ಆಮದು ಮಾಡಿಕೊಂಡಿದ್ದರೂ ಅವುಗಳು ಕಳಪೆ ಗುಣಮಟ್ಟದವು ಎಂದು ಸುದ್ದಿ ಹರಿದಾಡುತ್ತಿದೆ. ಇದನ್ನು ಚೀನಾ ಸರಕಾರ ನಿರಾಕರಿಸಿದೆ. ಜೊತೆಗೆ ಚೀನಾ ಸರಕಾರದಿಂದ ದೃಢೀಕರಿಸಲ್ಪಟ್ಟ ಕಂಪೆನಿಗಳಿಂದ ಮಾತ್ರ ಪಿಪಿಇ ಕಿಟ್‌ಗಳನ್ನು ತರಿಸಿಕೊಳ್ಳುವಂತೆ ಹಾಗೂ ಹಾಗೆ ಕಳಪೆ ಪಿಪಿಇ ಸಲಕರಣೆಗಳಿದ್ದಲ್ಲಿ ಅವುಗಳನ್ನು ತಯಾರಿಸಿದ ಕಂಪೆನಿಯ ವಿವರ ನೀಡುವಂತೆ ಸಲಹೆ ನೀಡಿದೆ. ಆದರೆ ಇಂಡಿಯಾದಲ್ಲಿ ಪಿಪಿಇ ಸಾಧನಗಳ ಖರೀದಿಯಲ್ಲೇ ಅಕ್ರಮ ನಡೆದಿರುವುದು ಇದೀಗ ಬೆಳಕಿಗೆ ಬರುತ್ತಿದೆ. ಸದ್ಯಕ್ಕೆ ಜಾಗತಿಕವಾಗಿ ಎಲ್ಲಾ ದೇಶಗಳಿಗೂ ಪಿಪಿಇಗಳನ್ನು ಪ್ರಧಾನ ವಾಗಿ ಪೂರೈಕೆ ಮಾಡುತ್ತಿರುವುದು ಚೀನಾವೇ ಆಗಿದೆ.

   ಪ್ರಧಾನವಾಗಿ ನಾವು ಗಮನಿಸಬೇಕಾದದ್ದು ನಮ್ಮ ದೇಶಕ್ಕೆ ಕೊರೋನ ಸೋಂಕು ಅಂತರ್‌ರಾಷ್ಟ್ರೀಯ ವಿಮಾನ ಪ್ರಯಾಣಿಕರಿಂದ ಬಂದಿತ್ತು. ಆಗಲೇ ಅದನ್ನು ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಸೂಕ್ತ ಬಂದೋಬಸ್ತ್ ಹಾಗೂ ಪರೀಕ್ಷಾ ವ್ಯವಸ್ಥೆಯ ಮೂಲಕ ನಿಯಂತ್ರಣ ಸಾಧಿಸಿ ಚಿಕಿತ್ಸೆ ನೀಡುವ ಕಾರ್ಯ ಮಾಡಲೇ ಇಲ್ಲ. ಬದಲಿಗೆ ಗೋ ಮೂತ್ರ ಕುಡಿದರೆ ಕೊರೋನ ಬಾರದು ಎಂಬಂತಹ ಅಪ್ಪಟ ಅವೈಜ್ಞಾನಿಕ ಹಾಗೂ ಹುಂಬತನದ ಹೇಳಿಕೆಗಳನ್ನು ನೀಡುತ್ತಾ, ಯಜ್ಞಯಾಗಾದಿ, ಪ್ರಾರ್ಥನೆಗಳ ಮೂಲಕ ಕೊರೋನ ತಡೆಯಲಾಗುತ್ತದೆ ಎಂಬಂತಹ ಹುಸಿ ಭ್ರಮೆಗಳಲ್ಲಿ ಜನರನ್ನು ಇರಿಸಲು ಆಳುವವರ ಕಡೆಯಿಂದ ಪ್ರಯತ್ನಿಸಲಾಯಿತು. ನಂತರ ಕೊರೋನ ಹರಡುವವರು ಮುಸ್ಲಿಮ್ ಅಲ್ಪ ಸಂಖ್ಯಾತರೆಂದು ಬಿಂಬಿಸುವ ಕಾರ್ಯವೂ ನಡೆಯಿತು. ಹಲವು ಧರ್ಮಗಳಿಗೆ ಸೇರಿದ ಧಾರ್ಮಿಕ ಸಂಸ್ಥೆಗಳು ತಮ್ಮ ತಮ್ಮ ವಿಶೇಷ ಪೂಜೆ, ನಮಾಝ್, ಪ್ರಾರ್ಥನೆಗಳ ಮೂಲಕ ಕೊರೋನವನ್ನು ತಡೆಯಬಹುದು ಎಂದು ತಮ್ಮ ಹಿಂಬಾಲಕರುಗಳ ಮಧ್ಯೆ ಹುಸಿ ಮೌಢ್ಯವನ್ನು ಬಿತ್ತಿ ಜನರನ್ನು ಕುರುಡು ನಂಬಿಕೆಗಳಲ್ಲಿ ಮುಳುಗಿರುವಂತೆ ನೋಡಿಕೊಳ್ಳಲು ಪ್ರಯತ್ನಿಸಿದವು. ಅದರಿಂದಾಗಿ ಮತ್ತಷ್ಟು ಜನರಿಗೆ ಕೊರೋನ ಸೋಂಕು ಹರಡುವಂತೆ ಮಾಡಿದವು.

ಅಲ್ಲದೆ ಚೀನಾದ ವುಹಾನ್‌ನಿಂದ ಕೊರೋನ ಸೋಂಕು ಅಮೆರಿಕವೂ ಸೇರಿದಂತೆ ಎಲ್ಲೆಡೆಯೂ ಹರಡತೊಡಗಿತ್ತು. ಚೀನಾ ಸಾಕಷ್ಟು ವೈಜ್ಞಾನಿಕವಾಗಿ ವುಹಾನ್ ಪ್ರಾಂತದಲ್ಲಿ ಲಾಕ್‌ಡೌನ್ ಅನ್ನು ಜನವರಿ 23ರಂದೇ ಘೋಷಣೆ ಮಾಡಿತ್ತು. ಅದಕ್ಕೂ ಮೊದಲೇ ಕೋವಿಡ್-19 ರ ತೀವ್ರವಾಗಿ ಹರಡುವ ಗುಣ ಇನ್ನಿತರ ಲಕ್ಷಣಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಗತ್ತಿಗೆ ತಿಳಿಸಿತ್ತು. ಜೊತೆಗೆ ದೈಹಿಕ ಅಂತರ ಕಾಪಾಡಬೇಕಾದ, ಕೈ ಬಾಯಿ ಸ್ವಚ್ಛತೆಯಿಂದ ಇಟ್ಟುಕೊಳ್ಳುವ, ಗುಂಪುಗೂಡ ದಿರುವ ಅಗತ್ಯವನ್ನೂ 2003-2012 ರಲ್ಲಿಕಾಣಿಸಿಕೊಂಡ ಮಾರಕ ಸಾರ್ಸ್ ( ಎಸ್‌ಎಆರ್‌ಎಸ್) ವೈರಸ್, ಮೆರ್ಸ್ (ಎಮ್‌ಇಆರ್‌ಎಸ್) ವೈರಸ್ ಸೋಂಕುಗಳ ಉದಾಹರಣೆಯೂ ಜಗತ್ತಿನೆದುರು ಇತ್ತು. ಚೀನಾ, ಕ್ಯೂಬಾ, ವಿಯಟ್ನಾಮ್, ವೆನೆಝುವೆಲ, ಸಿಂಗಾಪುರದಂತಹ ರಾಷ್ಟ್ರಗಳಲ್ಲಿ ಕೋವಿಡ್-19 ಹರಡುವಿಕೆ ಹಾಗೂ ಸಾವುಗಳನ್ನು ಸಾಕಷ್ಟು ಸಮರ್ಥವಾಗಿ ನಿಯಂತ್ರಿಸಲಾಗಿದೆ. ವಿಯಟ್ನಾಮಿನಲ್ಲಿ 270ರಷ್ಟು ಕೊರೋನ ಪ್ರಕರಣಗಳು ದೃಢಪಟ್ಟಿದ್ದರೂ ಅದರಲ್ಲಿ ಈಗಾಗಲೇ 225 ಜನರು ಗುಣಮುಖರಾಗಿದ್ದಾರೆ. ಇದುವರೆಗೂ ಅಲ್ಲಿ ಕೊರೋನ ಸಾವಿನ ಪ್ರಕರಣ ದಾಖಲಾಗಿಲ್ಲ. ಅಷ್ಟೇನೂ ಆರ್ಥಿಕವಾಗಿ ಹಾಗೂ ತಾಂತ್ರಿಕವಾಗಿ ಬೆಳವಣಿಗೆ ತಂದುಕೊಂಡಿಲ್ಲವೆಂದು ಹೇಳಲಾಗುತ್ತಿರುವ ಈ ಪುಟ್ಟ ರಾಷ್ಟ್ರ ಈ ಹಿಂದಿನ ಸಾರ್ಸ್ ಸೋಂಕು ಹರಡಿದ್ದ ಸಂದರ್ಭದಲ್ಲೂ ಅದರಿಂದ ಹೊರಬಂದ ಮೊಟ್ಟ ಮೊದಲ ರಾಷ್ಟ್ರವಾಗಿತ್ತು. ಚೀನಾ ನೀಡಿದ್ದ ಸಾವುಗಳ ಅಂಕಿ ಅಂಶಗಳು ಸುಳ್ಳೆಂದು, ಅಲ್ಲಿನ ಸಾವುಗಳು ಲಕ್ಷಗಟ್ಟಲೇ ಇವೆಯೆಂದು ಅಮೆರಿಕದ ಅಧ್ಯಕ್ಷ ಟ್ರಂಪ್ ಈಗ ಹೇಳುತ್ತಿದ್ದಾರೆ. ಮೊದಲಿನಿಂದಲೂ ಕೊರೋನ ಬಗ್ಗೆ ಬಹಳ ನಿರ್ಲಕ್ಷದಿಂದ ಮಾತನಾಡುತ್ತಾ, ಮಾಡಬೇಕಾದ ಕಾರ್ಯಗಳನ್ನು ಹಾಗೂ ಆರೋಗ್ಯ ಮುನ್ನೆಚ್ಚರಿಕೆಗಳ ಬಗ್ಗೆ ಗಮನವನ್ನೇ ನೀಡದೆ ಉಡಾಫೆಯ ಹೇಳಿಕೆಗಳಲ್ಲಿಯೇ ಇದ್ದ ಟ್ರಂಪ್ ಈಗ ಅಮೆರಿಕ ಕೊರೋನದಿಂದ ತತ್ತರಿಸುತ್ತಿರುವಾಗ ತನ್ನ ವಿಫಲತೆಯನ್ನು ಮುಚ್ಚಿಕೊಳ್ಳಲು ಹಾಗೂ ತನ್ನ ರಾಜಕೀಯ ಅಧಿಕಾರವನ್ನು ಸಮರ್ಥಿಸಿಕೊಳ್ಳಲು ಹಲವು ಹಾಸ್ಯಾಸ್ಪದ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಲ್ಲದಕ್ಕೂ ಚೀನಾ ಕಾರಣ. ವಿರೋಧ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಅಧ್ಯಕ್ಷರಾದರೆ ಅಮೆರಿಕವನ್ನು ಚೀನಾ ನುಂಗುತ್ತದೆ. ತನ್ನನ್ನು ಆರಿಸಿದರೆ ಚೀನಾಕ್ಕೆ ಪಾಠ ಕಲಿಸುತ್ತೇನೆ. ಹಾಗಾಗಿ ಮುಂಬರಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸಬೇಕೆಂದು ತನ್ನದೇ ಶೈಲಿಯ ರಾಜಕೀಯ ಭಾಷಣ ಹಾಗೂ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಲಾಕ್‌ಡೌನ್ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸವನ್ನೂ ಮಾಡುತ್ತಿದ್ದಾರೆ.

ಲಾಕ್‌ಡೌನ್ ಕೊನೆಗೊಳಿಸಿ ಕಂಪೆನಿಗಳ ಆರ್ಥಿಕ ಚಟುವಟಿಕೆಗಳು ಮುನ್ನಡೆಸಬೇಕೆಂದು ಟ್ರಂಪ್ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಜೊತೆಗೆ ಅಮೆರಿಕದ ಜನರಲ್ಲಿ ಯುದ್ಧೋನ್ಮಾದವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ದಕ್ಷಿಣ ಚೀನಾ ಸಮುದ್ರದಲ್ಲಿ ಸೇನಾ ಹಡಗುಗಳನ್ನು ನುಗ್ಗಿಸುವ, ಇರಾನ್ ವಿರೋಧಿ ಯುದ್ಧ ಹೇಳಿಕೆಗಳನ್ನು ಆಗಾಗ ತೇಲಿಬಿಡುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇವೆಲ್ಲವನ್ನೂ ಒಟ್ಟಾಗಿ ಗ್ರಹಿಸಿದಾಗ ಚೀನಾದ ಕುರಿತಾದ ಅಮೆರಿಕದ ಆರೋಪಗಳಿಗೆ ವಾಸ್ತವತೆಯ ಬಲ ಕಾಣಿಸುವುದಿಲ್ಲ. ಹಾಗಂತ ಚೀನಾ ಎಲ್ಲವನ್ನೂ ಜಗತ್ತಿಗೆ ತಿಳಿಸಿದೆ ಎಂದೂ ಭಾವಿಸಲಾಗದು. ಕೊರೋನವನ್ನು ಬಳಸಿಕೊಂಡು ತಮ್ಮ ತಮ್ಮ ಆರ್ಥಿಕ ಹಾಗೂ ರಾಜಕೀಯ ಹಿಡಿತ ಹೆಚ್ಚಿಸಿಕೊಳ್ಳುವ ದಾವಂತದಲ್ಲಿ ಜಾಗತಿಕವಾಗಿ ಬಲಿಷ್ಠವಾಗಿರುವ ರಾಷ್ಟ್ರಗಳ ಹುನ್ನಾರವಾಗಿದೆ. ಚೀನಾ ಅದರಲ್ಲಿ ಮುಂಚೂಣಿ ದೇಶವಾಗಿದೆ ಎನ್ನುವುದನ್ನು ಗ್ರಹಿಸಬೇಕು. ಚೀನಾ ಸದ್ಯಕ್ಕೆ ಇರುವುದರಲ್ಲಿ ಉಳಿದ ರಾಷ್ಟ್ರಗಳಿಗಿಂತಲೂ ಜಾಗತಿಕವಾಗಿ ಮೇಲುಗೈಯಲ್ಲಿದೆ. ಇಷ್ಟೆಲ್ಲಾ ಕೊರೋನ ವಿದ್ಯಮಾನಗಳು ಬೆಳಕಿಗೆ ಬಂದಿದ್ದರೂ ಇಂಡಿಯಾದಲ್ಲಿ ಗುಜರಾತಿನ ಅಹಮದಾಬಾದಿನಲ್ಲಿ ಜನವರಿ 24 ರಂದು ಸುಮಾರು ಒಂದೂಕಾಲು ಲಕ್ಷ ಜನರನ್ನು ಸೇರಿಸಿ ‘ನಮಸ್ತೆ ಟ್ರಂಪ್’ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಹಲವು ದೇಶಗಳಿಂದಲೂ ಜನರು ಬಂದಿದ್ದರು. ಅಲ್ಲಿ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಲಾಗಿರಲಿಲ್ಲ. ಅದರ ನಂತರವೂ ಅಂತರ್‌ರಾಷ್ಟ್ರೀಯ ಪ್ರದೇಶಗಳಿಂದ ಜನರು ಪಾಲ್ಗೊಂಡಿದ್ದ ಭಾರೀ ಸಭೆಗಳು, ಮದುವೆಗಳು ನಡೆದವು ಹಾಗೂ ರಾಜಕೀಯ ಸಭೆಗಳು ನಡೆದವು.

ಆಗಲೂ ಸರಕಾರಿ ವ್ಯವಸ್ಥೆ ಕೋವಿಡ್-19 ನಿಯಂತ್ರಣದ ಬಗ್ಗೆ ಗಮನದಲ್ಲಿಟ್ಟು ಅವುಗಳ ಬಗ್ಗೆ ಯಾವುದೇ ಗಮನ ನೀಡಿರಲಿಲ್ಲ . ಮಧ್ಯಪ್ರದೇಶದಲ್ಲಿ ರಾಜಕೀಯ ಮೇಲಾಟಕ್ಕಾಗಿ ಶಾಸಕರನ್ನು ಖರೀದಿ ಮಾಡುವ ರೆಸಾರ್ಟ್ ನಲ್ಲಿ ಬಂಧಿಸಿಡುವ ಮೊದಲಾದ ಕಾರ್ಯಗಳಲ್ಲಿ ಸರಕಾರ ಮುಳುಗಿತ್ತು. ಕೊರೋನವನ್ನು ಜಾಗತಿಕ ಪಿಡುಗೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ ನಂತರ ಕೂಡ ಇಂಡಿಯಾ ಅತ್ಯಗತ್ಯ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ವೈದ್ಯಕೀಯ ಚಿಕಿತ್ಸಾ ಸಲಕರಣೆಗಳ ಸಜ್ಜುಗೊಳಿಸಿಕೊಳ್ಳುವ ಕಾರ್ಯವನ್ನು ಮಾಡಲೇ ಇಲ್ಲ. ಬದಲಿಗೆ ಜನತಾ ಕರ್ಫ್ಯೂ , ಚಪ್ಪಾಳೆ, ದೀಪ, ಇತ್ಯಾದಿಗಳಲ್ಲಿ ಜನರನ್ನು ಮುಳುಗಿಸಿಡಲು ಪ್ರಧಾನಿಯೇ ಖುದ್ದಾಗಿ ಪ್ರಯತ್ನ ನಡೆಸುತ್ತಾ ಬಂದರು. ಕೇರಳದಂತಹ ರಾಜ್ಯ ಸರಕಾರಗಳು ಪ್ರಾದೇಶಿಕ ಲಾಕ್‌ಡೌನ್ , ಮುಖ ಕವಚಗಳನ್ನು ಒದಗಿಸುವ, ದೈಹಿಕ ಅಂತರಗಳನ್ನು ಜಾರಿಗೊಳಿಸುವ, ವೈದ್ಯಕೀಯ ಅಗತ್ಯಗಳನ್ನು ಪೂರೈಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಅದಕ್ಕೆ ಕೇಂದ್ರದ ಕೊಡುಗೆಯೇನೂ ಇರಲಿಲ್ಲ. ಪರೀಕ್ಷಾ ಸಲಕರಣೆಗಳನ್ನು ಕೆಲವು ರಾಜ್ಯ ಸರಕಾರಗಳು ಖರೀದಿಸಲು ಹೊರಟರೂ ಅದಕ್ಕೂ ತಡೆ ಹಾಕಲಾಯಿತು. ಹಣಕಾಸಿನ ನೆರವನ್ನೂ ನೀಡಲಿಲ್ಲ. ರಾಜ್ಯಗಳ ಪಾಲಿನ ಜಿಎಸ್‌ಟಿ ತೆರಿಗೆ ಹಣವನ್ನು ಒದಗಿಸಲಿಲ್ಲ. ಅಂದರೆ ರಾಜ್ಯಗಳ ಕೈಕಾಲುಕಟ್ಟಿ ಹಾಕುವ ಕಾರ್ಯಗಳನ್ನು ಮಾತ್ರ ಕೇಂದ್ರ ಸರಕಾರ ಮಾಡಿತು. ಮಾರ್ಚ್ 24ರ ರಾತ್ರಿ 8 ಗಂಟೆಗೆ ಯಾವುದೇ ಪೂರ್ವ ತಯಾರಿಯಿಲ್ಲದೇ ಏಕಾಏಕಿಯಾಗಿ ದೇಶದಾದ್ಯಂತ ಲಾಕ್‌ಡೌನ್ ಜಾರಿಯನ್ನು ಪ್ರಧಾನಿ ನೇರವಾಗಿ ಮಾಧ್ಯಮಗಳ ಮೂಲಕ ಘೋಷಿಸಿದರು. ರಾಜ್ಯಗಳನ್ನಾಗಲಿ, ಸಚಿವ ಸಂಪುಟವನ್ನಾಗಲಿ, ವಿರೋಧ ಪಕ್ಷಗಳನ್ನಾಗಲಿ, ವೈದ್ಯಕೀಯ ಪರಿಣತರನ್ನಾಗಲಿ ಸಂಪರ್ಕಿಸಿ ಸಮಾಲೋಚನೆ ನಡೆಸದೇ ಮಾಡಿದ ಅವೈಜ್ಞಾನಿಕ ಘೋಷಣೆಯಾಗಿತ್ತು ಅದು.

ವಲಸೆ ಕಾರ್ಮಿಕರು ಇನ್ನಿತರ ಜನಸಾಮಾನ್ಯರನ್ನು ಹಿಂದೆಂದೂ ಅನುಭವಿಸಿರದಷ್ಟು ಆತಂಕ ಭಯಾಂದೋಲನಗಳಿಗೆ ದಬ್ಬಲಾಯಿತು. ನೂರಾರು ಜನರು ಅದರಿಂದಲೇ ಪ್ರಾಣ ಕಳೆದುಕೊಳ್ಳುವಂತಾಯಿತು. ಅದಿನ್ನೂ ಮುಂದುವರಿದಿದೆ. ಇಲ್ಲಿ ಒಕ್ಕೂಟ ವ್ಯವಸ್ಥೆಯ ನೀತಿನಿಯಮಗಳನ್ನು, ರಾಷ್ಟ್ರೀಯ ವಿಪತ್ತುಗಳಂತಹ ಸಂದರ್ಭಗಳಲ್ಲಿ ಅನುಸರಿಸಬೇಕಾದ ಸಾಮಾನ್ಯ ಮಾರ್ಗದರ್ಶಿ ಸೂತ್ರಗಳನ್ನು ಗಾಳಿಗೆ ತೂರಲಾಯಿತು. ಜೊತೆಗೆ ಸಂಸತ್ತಿನ ಅಧೀನಕ್ಕೊಳಪಟ್ಟ ಪ್ರಧಾನಮಂತ್ರಿ ಪರಿಹಾರ ನಿಧಿಯ ಬದಲಿಗೆ ಸಂಸತ್ತಿನ ಅಧೀನಕ್ಕೆ ಒಳಪಡದಂತಹ ಪಿಎಮ್ ಕೇರ್ಸ್‌ನಂತಹ ಹೊಸ ನಿಧಿ ಸಂಗ್ರಹ ವ್ಯವಸ್ಥೆಯೊಂದನ್ನು ದಿಢೀರ್ ಎಂದು ಸ್ಥಾಪಿಸಿ ಕೇಂದ್ರ ಸರಕಾರಿ ನೌಕರರು ಇತರರು ಕಡ್ಡಾಯವಾಗಿ ತಮ್ಮ ಸಂಬಳದ ಭಾಗವನ್ನು ಅದಕ್ಕೆ ನೀಡುವಂತಹ ಪ್ರತ್ಯಕ್ಷ ಹಾಗೂ ಪರೋಕ್ಷ ಒತ್ತಡ ಹೇರಲಾಯಿತು. ನ್ಯಾಯಾಲಯಗಳು ಜಾಮೀನು ನೀಡಲು ಪಿಎಮ್ ಕೇರ್ಸ್‌ಗೆ ಇಂತಿಷ್ಟು ದೇಣಿಗೆ ನೀಡಬೇಕೆಂಬ ಶರತ್ತುಗಳನ್ನು ಹಾಕುತ್ತಿರುವ ವಿದ್ಯಮಾನಗಳು ನಡೆಯುತ್ತಿರುವುದನ್ನು ನಾವಿಲ್ಲಿ ಗಮನಿಸಬಹುದು. ಜೊತೆಗೆ ಭಾರೀ ಕಾರ್ಪೊರೇಟುಗಳ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಯಾವುದೇ ಹಿಂಜರಿಕೆಗಳು ಕೂಡ ಸರಕಾರಕ್ಕೆ ಇಲ್ಲವೆಂಬುದು ಸ್ಪಷ್ಟವಾಗಿದೆ. ಅವರು ಬಾಕಿ ಉಳಿಸಿರುವ ತೆರಿಗೆ, ಸಾಲಗಳ ವಸೂಲಿಗಾಗಲಿ, ಅವರ ಕ್ರೋಡೀಕೃತ ಸಂಪತ್ತುಗಳಿಗುಣಗುಣವಾಗಿ ವಿಶೇಷ ತೆರಿಗೆ ಹೇರಿ ಕೊರೋನ ಪೀಡಿತ ಸಂದರ್ಭದಲ್ಲಿ ದೇಶದ ಬಹುಸಂಖ್ಯಾತ ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವ ವಿಚಾರದಲ್ಲಾಗಲಿ ಸರಕಾರಕ್ಕೆ ಆಸಕ್ತಿ ಕಾಣಿಸುತ್ತಿಲ್ಲ. ಅವರು ತಾವೇ ಸ್ಥಾಪಿಸಿಕೊಂಡಿರುವ ಟ್ರಸ್ಟ್ ಹಾಗೂ ಫೌಂಡೇಶನ್‌ಗಳ ಮೂಲಕ ತೆರಿಗೆ ವಂಚನೆಯ ಭಾಗವಾಗಿ ನೀಡುವ ನೂರೋ ಇನ್ನೂರೋ ಕೆಲವು ಸಾವಿರ ಕೋಟಿ ರೂ.ಗಳನೋ ಮಹಾ ಕೊಡುಗೆಯೆಂಬಂತೆ ಬಿಂಬಿಸುವ ಕಾರ್ಯ ಮಾತ್ರ ನಡೆಯುತ್ತಿದೆ. ಅವರು ಇದುವರೆಗೂ ಅನುಭವಿಸಿದ ತೆರಿಗೆ ರಜೆಗಳು, ಕಡಿತಗಳು, ಉಚಿತ ಇಲ್ಲವೇ ಅಗ್ಗದ ಭೂಮಿ, ನೀರು, ವಿದ್ಯುತ್ ಸೌಲಭ್ಯಗಳ ಮೌಲ್ಯಗಳು ಅದಕ್ಕಾಗಿ ಜನಸಾಮಾನ್ಯರು ಮಾಡಿಕೊಂಡು ಬಂದಿರುವ ತ್ಯಾಗಗಳು ಪರಿಗಣನೆಗೇ ಬರುತ್ತಿಲ್ಲ.

ಇದರ ಜೊತೆಯಲ್ಲಿ ಜನರ ಪರವಾದ ದನಿಗಳನ್ನು ಹತ್ತಿಕ್ಕುವ, ಬಂಧಿಸಿ ಕೂಡಿಡುವ ಕಾರ್ಯವನ್ನೂ ಎಗ್ಗಿಲ್ಲದೇ ನಡೆಸಲಾಗುತ್ತಿದೆ. ಈಗಾಗಲೇ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರನ್ನು ಲಾಕ್‌ಡೌನ್ ಸಂದರ್ಭದಲ್ಲೇ ಹುಡುಕಾಡಿ ಬಂಧಿಸುವುದು ಮುಂದುವರಿದಿದೆ. ಗೌತಮ್ ನವ್ಲಾಖಾ, ಆನಂದ್ ತೇಲ್ತುಂಬ್ಡೆಯಂತಹ ಸಾಮಾಜಿಕ ಹಾಗೂ ಮಾನವ ಹಕ್ಕು ಹೋರಾಟಗಾರರನ್ನು ಇದರ ನಡುವೆಯೇ ನ್ಯಾಯಾಲಯಗಳ ಮೂಲಕ ಬಂಧನಕ್ಕೆ ಒಳಪಡಿಸಲಾಗಿದೆ. ಈ ಎಲ್ಲಾ ಕಾರ್ಯಗಳನ್ನು, ವಿದ್ಯಮಾನಗಳನ್ನು ಗಮನಿಸಿದಾಗ ಸಂಸತ್ತು ಹಾಗೂ ವಿರೋಧಪಕ್ಷಗಳಿಲ್ಲದ ಏಕ ವ್ಯಕ್ತಿ ಫ್ಯಾಶಿಸ್ಟ್ ಆಡಳಿತವೊಂದಕ್ಕೆ ತಯಾರಿ ನಡೆಯುತ್ತಿರುವ ಲಕ್ಷಣಗಳು ಗೋಚರಿಸುತ್ತವೆ. ಇಂತಹ ಲಕ್ಷಣಗಳು ಜಾಗತಿಕವಾಗಿಯೂ ಹಲವಾರು ರಾಷ್ಟ್ರಗಳಲ್ಲಿ ಕಾಣಿಸಲಾರಂಭಿಸಿವೆ. ನೋಮ್ ಚೋಮ್‌ಸ್ಕಿಯಂತಹ ಸಾಮಾಜಿಕ ಚಿಂತಕರು ಜಾಗತಿಕ ಅಣು ಯುದ್ಧದ ಭೀತಿ ಈಗ ಹೆಚ್ಚಾಗಿದೆಯೆಂದು ಆತಂಕ ವ್ಯಕ್ತಪಡಿಸಿದ್ದಾರೆ.

Writer - ನಂದಕುಮಾರ್ ಕೆ.ಎನ್.

contributor

Editor - ನಂದಕುಮಾರ್ ಕೆ.ಎನ್.

contributor

Similar News