ಅಂಗನವಾಡಿ, ಮಾಂಟೆಸ್ಸರಿ ಮತ್ತು ಅವ್ಯವಸ್ಥೆ?..

Update: 2020-05-09 17:38 GMT

ನಗರ ಅಥವಾ ಪಟ್ಟಣ ಪ್ರದೇಶಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರಗಳು ಹಲವಾರು ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಡೇ ಕೇರ್ ಸೆಂಟರ್, ಆರ್ಲಿ ಲರ್ನಿಂಗ್ ಸೆಂಟರ್, ಪ್ಲೇಹೋಮ್, ಶಿಶುವಿಹಾರ, ಅಂಗನವಾಡಿ ಇತ್ಯಾದಿ. ಇವುಗಳ ಗುಣಮಟ್ಟ ಮಾತ್ರ ಕೇಳುವುದಕ್ಕೆ ಅಸಾಧ್ಯ. ಇಂತಹ ಖಾಸಗಿ ಕೇಂದ್ರಗಳಲ್ಲಿ ಮಕ್ಕಳನ್ನು ದನದ ದೊಡ್ಡಿಯಂತೆ ಕೂಡಿ ಹಾಕಿರುತ್ತಾರೆ. ಕೆಲವೊಂದು ಕೇಂದ್ರಗಳಲ್ಲಿ ಗಾಳಿ ಮತ್ತು ಬೆಳಕಿಗೂ ಸಹ ಕೊರತೆ. ವಿದ್ಯಾವಂತ ನಿರುದ್ಯೋಗಿಗಳು, ಗೃಹಿಣಿಯರು, ಮುಂತಾದವರು ಇದನ್ನು ಹೆಚ್ಚಾಗಿ ನಡೆಸುತ್ತಿದ್ದಾರೆ. ಇಲ್ಲಿ ಶೇ.95ರಷ್ಟು ಯಾರಿಗೂ ಸಹ ತರಬೇತಿ ಎಂಬುದು ಇರುವುದಿಲ್ಲ. ಹಣ ಮಾಡುವುದೇ ಹೆಚ್ಚಿನ ಕೇಂದ್ರಗಳ ಮುಖ್ಯ ಉದ್ದೇಶ ಎಂದರೆ ತಪ್ಪಲ್ಲ. ಇಂದು ಇಂತಹ ಕೇಂದ್ರಗಳು ಅಣಬೆಯಂತೆ ಪ್ರತಿ ರೋಡಿನಲ್ಲಿ ಸಹ ಹುಟ್ಟುಕೊಂಡಿವೆ.


ಒ ಂದು ಮಗುವಿನ ಉತ್ತಮ ಶಿಕ್ಷಣದ ಪ್ರಗತಿಗೆ ಭದ್ರಬುನಾದಿ ಹಾಕುವುದು ಪೂರ್ವ ಪ್ರಾಥಮಿಕ ಶಿಕ್ಷಣ (ಪ್ರಿ. ಪ್ರೈಮರಿ ಎಜುಕೇಶನ್). ಭವಿಷ್ಯದ ಉತ್ತಮ ವ್ಯಕ್ತಿತ್ವ ನಿರ್ಮಾಣದಲ್ಲಿ ಮಗುವಿನ ಆರಂಭಿಕ ಶಿಕ್ಷಣ ಬಹು ಅವಶ್ಯಕ ಮತ್ತು ನಿರ್ಣಾಯಕ. ಇದು ಮಗುವಿನ ಕೌಶಲ ಕಲಿಕೆ, ಉತ್ತಮ ನಡವಳಿಕೆ, ಅಭಿಕ್ಷಮತೆ, ಭಾಷೆ, ಸಂವೇಗಾತ್ಮಕ ಬೆಳವಣಿಗೆ, ಚಿಂತನ ಸಾಮರ್ಥ್ಯದಂತಹ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಗುಣಾತ್ಮಕ ಪೂರ್ವ ಪ್ರಾಥಮಿಕ ಶಿಕ್ಷಣವು ಸಾಮಾಜಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಸುಲಭವಾಗಿ ಸಿಗುವಂತಾಗಬೇಕು ಎಂಬುದು ‘ಪ್ರತಿಯೊಬ್ಬರಿಗೂ ಶಿಕ್ಷಣದ ನೀತಿಯ’ ಗುರಿಗಳಲ್ಲಿ ಒಂದು. ಇದಕ್ಕೆ ಯಾವುದೇ ಅಂಕಿ ಅಂಶಗಳ ಗುರಿಯನ್ನು ಸದ್ಯ ನಿಗದಿಪಡಿಸಿಲ್ಲ. ಸಮಾನತೆ ಮತ್ತು ಗುಣಾತ್ಮಕ ಪೂರ್ವ ಶಿಕ್ಷಣದ ಅಗತ್ಯವನ್ನು ಇದುವರೆಗಿನ ಹಲವಾರು ತಜ್ಞರ ಆಯೋಗಗಳು ದೃಢಪಡಿಸಿವೆ.

ರಾಷ್ಟ್ರೀಯ ಶಿಕ್ಷಣ ನೀತಿ (1980), 1964-66ರ ಕೊಟಾರಿ ಆಯೋಗ, 1968ರ ಗಂಗಾಸರಣ ಸಿನ್ಹಾ ಆಯೋಗ, 1972 ರ ಪೂರ್ವ ಪ್ರಾಥಮಿಕ ಶಿಕ್ಷಣ ಅಧ್ಯಯನ ಆಯೋಗ, 1974 ರ ರಾಷ್ಟ್ರೀಯ ಮಕ್ಕಳ ನೀತಿ ಮತ್ತು 1990ರ ರಾಮಮೂರ್ತಿ ಆಯೋಗವು ಸಹ ತಮ್ಮ ತಮ್ಮ ವರದಿಗಳಲ್ಲಿ ಗುಣಾತ್ಮಕ ಪೂರ್ವ ಪ್ರಾಥಮಿಕ ಶಿಕ್ಷಣದ ಅವಶ್ಯಕತೆ, ಪಠ್ಯಕ್ರಮ, ತರಬೇತಿ, ಬೋಧನ ವಿಧಾನ ಮೌಲ್ಯಮಾಪನ ಮುಂತಾದವುಗಳ ಬಗ್ಗೆ ಸುದೀರ್ಘವಾದ ವರದಿ ನೀಡಿವೆ. ಆದರೆ ಈ ಎಲ್ಲಾ ವರದಿಗಳು ವಿವಿಧ ಸರಕಾರದ ಕಚೇರಿಗಳಲ್ಲಿ ಗೆದ್ದಲು ಹಿಡಿದಿವೆ. ಆಯೋಗಗಳು ರಚಿಸುವಾಗ ಸರಕಾರಗಳಲ್ಲಿ ಇರುವ ಆಸಕ್ತಿ ಅವುಗಳನ್ನು ಅನುಷ್ಠಾನ ತರುವುದರಲ್ಲಿ ಇರದಿರುವುದು ದುರದೃಷ್ಟಕರ. 1996ರಲ್ಲಿ ಅಂದಿನ ಕೇಂದ್ರ ಸರಕಾರ ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರಗಳ ನಿಯಂತ್ರಣ ಎಂಬ ವಿವಾದಿತ ಕಾಯ್ದೆಯನ್ನು ಜಾರಿಗೆ ತಂದು ಒಮ್ಮೆ ಕೈಸುಟ್ಟುಕೊಂಡಿತ್ತು. 1998ರಲ್ಲಿ ಆ ಕಾಯ್ದೆಯನ್ನು ಕೊನೆಗೆ ಸರಕಾರವೇ ಕೈ ಬಿಡಬೇಕಾಯಿತು. ಇಂದು ಉನ್ನತ ಶಿಕ್ಷಣಕ್ಕೆ ಮಾತ್ರ ಪ್ರಮುಖವಾಗಿ ಆದ್ಯತೆ ನೀಡುತ್ತಾ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಕೇಳುವವರೇ ಇಲ್ಲದಂತಾಗಿದೆ.

2005ರ ಶಿಕ್ಷಣ ವರದಿ ಅಧ್ಯಯನ ಪ್ರಕಾರ ಭಾರತದಲ್ಲಿ 4,93,700 ಪೂರ್ವ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಿದ್ದು 4,56,994 ಗ್ರಾಮೀಣ ಪ್ರದೇಶದಲ್ಲಿ ಇದೆ. ಇಂತಹ ಶಾಲೆಗಳಲ್ಲಿ 26,453 ಮಿಲಿಯನ್ ಮಕ್ಕಳು ಕಲಿಯುತ್ತಿದ್ದಾರೆ. ಇಂದು ದೇಶದ ಹಳ್ಳಿ ಹಳ್ಳಿಗಳಲ್ಲಿ ಅಂಗನವಾಡಿ ಕೇಂದ್ರಗಳು ಇದ್ದರೂ ಸಹ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಾಗಿ ಕಂಡುಬರುತ್ತಿಲ್ಲ ಎಂಬುದು ಚಿಂತಿಸಬೇಕಾದ ವಿಚಾರ. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸರ್ವೇಯ (2007) ವರದಿಯ ಪ್ರಕಾರ ದೇಶದಾದ್ಯಂತ ಶೇ.57 ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ದಾಖಲಾಗಿದ್ದು, ಕೇವಲ ಶೇ.32ದಷ್ಟು ಮಕ್ಕಳು ಮಾತ್ರ ಕ್ರಮಬದ್ಧವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈ ಹಂತದಲ್ಲೇ ಶಾಲೆಯನ್ನು ಅರ್ಧಕ್ಕೆ ಬಿಡುವ ಪ್ರವೃತ್ತಿ ಕಂಡುಬರುತ್ತಿದೆ. ಇದು ನಿಜವಾಗಲೂ ತೀರಾ ಆತಂಕಕಾರಿ ವಿಚಾರ. ಬುಡಕಟ್ಟು ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳ ಸ್ಥಿತಿಗತಿ ತೀರಾ ಶೋಚನೀಯವಾಗಿದೆ. ಇಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯಿಂದ ಮಾತ್ರ ಬುಡಕಟ್ಟು ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಬರುತ್ತಿದ್ದಾರೆ ಅದು ಅತಿಶಯೋಕ್ತಿ ಅಲ್ಲ. ನಗರ ಪ್ರದೇಶಗಳಲ್ಲಿ ಹಲವಾರು ಖಾಸಗಿ ಸಂಸ್ಥೆಗಳು, ಪೂರ್ವ ಪ್ರಾಥಮಿಕ ಶಿಕ್ಷಣ ಶಾಲೆಯನ್ನು ನಡೆಸುತ್ತಿವೆ. ಮಾಂಟೆಸ್ಸರಿಶಾಲೆ, ಮುಂತಾದ ಉತ್ತಮವಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ನಗರ ಪ್ರದೇಶದಲ್ಲಿ ಜನಪ್ರಿಯ ಕಾರ್ಯನಿರ್ವಹಿಸುತ್ತಿವೆ.

ನಗರ ಅಥವಾ ಪಟ್ಟಣ ಪ್ರದೇಶಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರಗಳು ಹಲವಾರು ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಡೇ ಕೇರ್ ಸೆಂಟರ್, ಆರ್ಲಿ ಲರ್ನಿಂಗ್ ಸೆಂಟರ್, ಪ್ಲೇಹೋಮ್, ಶಿಶುವಿಹಾರ, ಅಂಗನವಾಡಿ ಇತ್ಯಾದಿ. ಇವುಗಳ ಗುಣಮಟ್ಟ ಮಾತ್ರ ಕೇಳುವುದಕ್ಕೆ ಅಸಾಧ್ಯ. ಇಂತಹ ಖಾಸಗಿ ಕೇಂದ್ರಗಳಲ್ಲಿ ಮಕ್ಕಳನ್ನು ದನದ ದೊಡ್ಡಿಯಂತೆ ಕೂಡಿ ಹಾಕಿರುತ್ತಾರೆ. ಕೆಲವೊಂದು ಕೇಂದ್ರಗಳಲ್ಲಿ ಗಾಳಿ ಮತ್ತು ಬೆಳಕಿಗೂ ಸಹ ಕೊರತೆ. ವಿದ್ಯಾವಂತ ನಿರುದ್ಯೋಗಿಗಳು, ಗೃಹಿಣಿಯರು, ಮುಂತಾದವರು ಇದನ್ನು ಹೆಚ್ಚಾಗಿ ನಡೆಸುತ್ತಿದ್ದಾರೆ. ಇಲ್ಲಿ ಶೇ.95 ರಷ್ಟು ಯಾರಿಗೂ ಸಹ ತರಬೇತಿ ಎಂಬುದು ಇರುವುದಿಲ್ಲ. ಹಣ ಮಾಡುವುದೇ ಹೆಚ್ಚಿನ ಕೇಂದ್ರಗಳ ಮುಖ್ಯ ಉದ್ದೇಶ ಎಂದರೆ ತಪ್ಪಲ್ಲ. ಇಂದು ಇಂತಹ ಕೇಂದ್ರಗಳು ಅಣಬೆಯಂತೆ ಪ್ರತಿ ರೋಡಿನಲ್ಲಿ ಸಹ ಹುಟ್ಟುಕೊಂಡಿವೆ. ಕೆಲವರಿಗೆ ಇದು ಸಮಯ ಕಳೆಯುವ ಸಾಧನವಾದರೆ ಇನ್ನು ಕೆಲವರಿಗೆ ಇದು ಒಂದು ರೀತಿಯ ಹವ್ಯಾಸ!.

ಇಂತಹ ಕೇಂದ್ರಗಳನ್ನು ತೆರೆಯುವುದಕ್ಕೆ ಸರಕಾರದ ಪೂರ್ವಾನುಮತಿ ಅವಶ್ಯಕತೆ ಇಲ್ಲದಿರುವುದೇ ಇದಕ್ಕೆಲ್ಲ ಮುಖ್ಯ ಕಾರಣ. ಹಲವಾರು ಕೇಂದ್ರಗಳಲ್ಲಿ ಆಟದ ಮೈದಾನ, ಆಟದ ಸಾಮಾನು ಕೂಡ ಸಾಕಷ್ಟು ಪ್ರಮಾಣದಲ್ಲಿ ಇರುವುದಿಲ್ಲ. ಕೆಲವು ಕೇಂದ್ರಗಳು ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಪ್ರವೇಶ ಪರೀಕ್ಷೆಯನ್ನು ನಡೆಸುವ ಸಾಹಸ ಕೂಡ ಮಾಡುತ್ತಿವೆ!. ಅಷ್ಟು ಸಣ್ಣ ಮಕ್ಕಳಿಗೆ ಆಗಲೇ ಪ್ರವೇಶ ಪರೀಕ್ಷೆ ಎದುರಿಸುವ ಅನಿವಾರ್ಯತೆ. ಇಂತಹ ಕೇಂದ್ರಗಳು ತಮಗೆ ತೋಚಿದಂತೆ ಪಠ್ಯಕ್ರಮ, ಬೋಧನಾವಿಧಾನ, ಮೌಲ್ಯಮಾಪನ ನಡೆಸುವ ಅಭ್ಯಾಸ ಇಟ್ಟುಕೊಂಡಿವೆ. ಅಲ್ಲದೆ ಶುಲ್ಕ ಭರಿಸಲು ತಂದೆ ತಾಯಿ ಸಾಕಷ್ಟು ಸ್ಥಿತಿವಂತರಾಗಿರಬೇಕು. ಸಾಮಾನ್ಯ ಪೋಷಕರಿಗೆ ಇಂತಹ ಕೇಂದ್ರಗಳು ಗಗನ ಕುಸುಮವಷ್ಟೆ. ಕೆಲವು ಕೇಂದ್ರಗಳು ಕಠಿಣ ಶಿಕ್ಷೆಯನ್ನು ಮಕ್ಕಳಿಗೆ ನೀಡಿ ಅವುಗಳ ಮಾನಸಿಕ ಸ್ಥಿತಿಗತಿ, ದೈಹಿಕ ಸ್ಥಿತಿಗತಿಗಳನ್ನು ಏರುಪೇರು ಮಾಡಿ ಕುಖ್ಯಾತಿಗೊಳಗಾಗಿವೆ.

ಇನ್ನು ಗ್ರಾಮೀಣ ಪ್ರದೇಶದಲ್ಲಿನ ಸರಕಾರಿ ಅಂಗನವಾಡಿಗಳ ಸಮಸ್ಯೆಯಂತೂ ಅದ್ವಾನವಾಗಿದೆ ಎಂದರೆ ತಪ್ಪಿಲ್ಲ. ಶೇ.87 ಅಂಗನವಾಡಿ ಕೇಂದ್ರಗಳಲ್ಲಿ ಯಾವುದೇ ಮೂಲಭೂತ ಸೌಕರ್ಯ ಇಲ್ಲ. ಗಾಳಿ, ನೀರು, ಬೆಳಕು, ಶೌಚಾಲಯ ವ್ಯವಸ್ಥೆಯು ಸಹ ಸರಿಯಾಗಿಲ್ಲ. ಕೆಲವೊಮ್ಮೆ ಬಿರುಕು ಮೂಡಿರುವ ಕಟ್ಟಡ, ಕೆಲವೊಮ್ಮೆ ಬಯಲು ಪ್ರದೇಶದಲ್ಲಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಕೆಲಸ ಮಾಡುವ ಶಿಕ್ಷಕರ ವೇತನವಂತೂ ತೀರಾ ಕಡಿಮೆ. ಇವರಿಗೆ ಯಾವುದೇ ಉದ್ಯೋಗ ಭದ್ರತೆ ಇಲ್ಲ. ಪೋಷಕರ ನಿರ್ಲಕ್ಷ್ಯ ಇಲ್ಲಿನ ಇನ್ನೊಂದು ಮುಖ್ಯ ಸಮಸ್ಯೆ. ಹಲವಾರು ಬಾರಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ ಪೋಷಕರ ಮನವೊಲಿಸಿ ಮಕ್ಕಳನ್ನು ಕೇಂದ್ರಕ್ಕೆ ಕರೆತರಬೇಕಾಗುತ್ತದೆ. ಇಂತಹ ಕೇಂದ್ರಗಳಲ್ಲಿ ಕಲಿಕೆಗೆ ಬೇಕಾದ ಕಲಿಕಾ ಸಾಧನಗಳ ಕೊರತೆಯಂತೂ ಅಗಾಧವಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಸುಂದರವಾದ ಕಲಿಕಾ ಸಾಧನಗಳು, ಆಟದ ಸಾಮಾನುಗಳ ಕೊರತೆ ಮುಂತಾದವುಗಳಿಂದ ಹೆಚ್ಚಿನ ಮಕ್ಕಳನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಇಲ್ಲಿನ ಶಿಕ್ಷಕರು ಅಭಿಪ್ರಾಯಪಡುತ್ತಾರೆ. ಹೆಚ್ಚಿನ ಗ್ರಾಮೀಣ ಪೋಷಕರು ಅಂಗನವಾಡಿ ಕೇಂದ್ರಗಳು ಎಂದರೆ ಮಧ್ಯಾಹ್ನ ಊಟ ನೀಡುವ ಕೇಂದ್ರಗಳು ಎಂದು ಭಾವಿಸಿದ್ದಾರೆ. ಇನ್ನು ಕೆಲವರು ಮನೆಯಲ್ಲಿ ಮಕ್ಕಳ ಗಲಾಟೆ ತಪ್ಪಿಸಲು, ಪತಿ, ಪತ್ನಿ ಇಬ್ಬರು ಕೆಲಸಕ್ಕೆ ತೆರಳಿದರೆ ಮಕ್ಕಳನ್ನು ನೋಡಿಕೊಳ್ಳಲು ಇಂತಹ ಕೇಂದ್ರಗಳು ಇರುವುದು ಎಂಬುದು ಅವರುಗಳ ಅಭಿಪ್ರಾಯ.

ಪೂರ್ವ ಪ್ರಾಥಮಿಕ ಶಿಕ್ಷಣದ ಸುಧಾರಣೆ ಹೇಗೆ?

1. ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರಗಳನ್ನು ತೆರೆಯಲು ಕಡ್ಡಾಯವಾಗಿ ಸರಕಾರದ ಪೂರ್ವ ಅನುಮತಿಯನ್ನು ಪಡೆಯುವಂತೆ ಮಾಡುವುದು 3 ವರ್ಷ ವಯಸ್ಸಿನ ಕೆಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡದಂತೆ ನಿಯಮ ರೂಪಿಸಬೇಕು.

2. ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಕಡ್ಡಾಯವಾಗಿ ತರಬೇತಿ ಹೊಂದಿರುವುದನ್ನು ಸ್ಥಳೀಯ ಮಟ್ಟದ ಅಧಿಕಾರಿಗಳು ದೃಢಪಡಿಸಬೇಕು.

 3. ಖಾಸಗಿ ಸಂಸ್ಥೆಗಳು ನಡೆಸುವ ಕೇಂದ್ರಗಳಲ್ಲಿ ಸುರಕ್ಷತೆ, ನೈರ್ಮಲ್ಯತೆ, ಶುಲ್ಕ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ನೋಡಿಕೊಳ್ಳುವುದು.

4. ಪ್ರತಿ ಶಾಲೆಯು ಸಾಕಷ್ಟು ಪ್ರಮಾಣದಲ್ಲಿ ಕಲಿಕಾ ಸಾಧನಗಳು, ಆಟದ ಮೈದಾನ, ಶೌಚಾಲಯ, ಉತ್ತಮ ಕೊಠಡಿಗಳನ್ನು ಹೊಂದಿರುವಂತೆ ನಿಯಮವನ್ನು ಜಾರಿಗೆ ತರಬೇಕು.

5. ಗ್ರಾಮೀಣ ಅಂಗನವಾಡಿಗಳ ಮೂಲಭೂತ ಸೌಕರ್ಯ, ಶಿಕ್ಷಕರ ವೇತನ ಸುಧಾರಿಸಬೇಕು. ಇವರಿಗೆ ಸೂಕ್ತ ಉದ್ಯೋಗ ಭದ್ರತೆ ನೀಡಬೇಕು. ಇತರ ಸರಕಾರಿ ನೌಕರರಂತೆ ಇವರಿಗೆ ಎಲ್ಲಾ ಸೌಲಭ್ಯಗಳು ಲಭ್ಯವಾಗಬೇಕು.

6. ಪೂರ್ವ ಪ್ರಾಥಮಿಕ ಶಿಕ್ಷಣದ ಮಕ್ಕಳಿಗೆ ಪ್ರತ್ಯೇಕವಾದ ವೈಜ್ಞಾನಿಕ, ಏಕರೂಪದ ಪಠ್ಯಪುಸ್ತಕ, ಮಾತೃಭಾಷೆ, ಬೋಧನಾವಿಧಾನ, ಮೌಲ್ಯಮಾಪನವನ್ನು ಜಾರಿಗೆ ತರಬೇಕು.

7. ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸಲು ಪ್ರತ್ಯೇಕ ಸ್ವಾಯತ್ತ ನಿಯಂತ್ರಣ ಆಯೋಗವನ್ನು ರಚಿಸುವುದು ಸೂಕ್ತ. ಪರಿಣತ ತಜ್ಞರು, ಮನೋವಿಜ್ಞಾನ ತಜ್ಞರು ಮತ್ತು ಸ್ವಯಂ ಸೇವಾ ಸಂಸ್ಥೆಯವರು ಇದರ ಸದಸ್ಯರಾಗಬೇಕು. ಮಕ್ಕಳು ಸಾಮಾನ್ಯ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಳ್ಳುವ ಮುಂಚಿತವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಮುಗಿಸುವುದು ತೀರಾ ಅವಶ್ಯಕವೆಂದು ಶಿಕ್ಷಣ ತಜ್ಞರು ಪ್ರತಿಪಾದಿಸಿದ್ದಾರೆ. ಇದನ್ನು ಹಲವಾರು ಸಂಶೋಧನೆಗಳು ದೃಢಪಡಿಸಿವೆ. ದೇಶದ ಹಲವಾರು ಶಿಕ್ಷಣ ಸಂಶೋಧನಾ ಸಂಸ್ಥೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದ ವಿವಿಧ ಸಮಸ್ಯೆಯ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಪೂರ್ವ ಪ್ರಾಥಮಿಕ ಶಿಕ್ಷಣ ಮುಗಿಸಿದ ಮಕ್ಕಳು ಯಶಸ್ವಿಯಾಗಿ ಸಾಮಾನ್ಯ ಮತ್ತು ಉನ್ನತ ಶಿಕ್ಷಣವನ್ನು ಮುಗಿಸುತ್ತವೆ ಎಂಬುದನ್ನು ಇಂದು ಸಂಶೋಧನೆಗಳು ದೃಢಪಡಿಸಿವೆ.

ಅವಿಭಕ್ತ ಕುಟುಂಬಗಳು, ಹೆಚ್ಚಿದಂತೆ ಮಕ್ಕಳನ್ನು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಸೇರಿಸುವವರ ಸಂಖ್ಯೆ ಕ್ರಮೇಣ ನಗರ ಪ್ರದೇಶದಲ್ಲಿ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇದು ಸಾಧ್ಯವಾಗುತ್ತಿಲ್ಲ. ಉನ್ನತ ಶಿಕ್ಷಣದಂತೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಸಹ ಸರಕಾರಗಳು ಒಂದು ಆದ್ಯತಾ ವಲಯವನ್ನಾಗಿ ಪರಿಗಣಿಸಬೇಕು. ಈ ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿಗೆ ಪ್ರತ್ಯೇಕ ಅನುದಾನವನ್ನು ಬಜೆಟ್‌ನಲ್ಲಿ ನಿಗದಿಪಡಿಸಬೇಕು. ಖಾಸಗಿ ಸಹ ಭಾಗಿತ್ವದಲ್ಲಿ ಈ ಶಿಕ್ಷಣವನ್ನು ಅಭಿವೃದ್ಧಿಪಡಿಸಲು ಸಾಧ್ಯವೇ ಎಂಬುದನ್ನು ಚಿಂತಿಸಬೇಕಾಗಿದೆ.

ಇಂತಹ ಶಿಕ್ಷಣ ಕೇಂದ್ರಗಳು ವಾಣಿಜ್ಯೀಕರಣಗೊಳ್ಳುವುದನ್ನು ತಪ್ಪಿಸಲು ಚಿಂತಿಸಬೇಕಿದೆ. ಪ್ರತಿ ಕೇಂದ್ರ ಅವಶ್ಯಕವಾದ ಎಲ್ಲಾ ಮೂಲಭೂತ ಸೌಕರ್ಯ ಹೊಂದಿದ ನಂತರವೇ ಇವುಗಳಿಗೆ ಅನುಮತಿ ನೀಡಬೇಕು. ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರಗಳ ನಿಯಂತ್ರಣ ಮತ್ತು ನಿರಂತರ ಮೌಲ್ಯಮಾಪನವನ್ನು ಸ್ಥಳೀಯ ಮಟ್ಟದ ಅಧಿಕಾರಿಗಳು ತಪ್ಪದೇ ಕೈಗೊಳ್ಳಬೇಕಿದೆ. ಮುಖ್ಯವಾಗಿ ಪೂರ್ವ ಶಿಕ್ಷಣವನ್ನು ಒಂದು ಮೂಲಭೂತ ಹಕ್ಕನ್ನಾಗಿ ಪರಿಗಣಿಸಲು ಸರಕಾರಗಳು ಚಿಂತಿಸಬೇಕಾಗಿದೆ. ಆಗಲೇ ಸಾಮಾಜಿಕ ನ್ಯಾಯಕ್ಕೆ ಒಂದು ಪರಿಪೂರ್ಣ ಅರ್ಥ ಬರಲು ಸಾಧ್ಯ.

Writer - ಡಾ. ಡಿ. ಸಿ. ನಂಜುಂಡ, ಮೈಸೂರು

contributor

Editor - ಡಾ. ಡಿ. ಸಿ. ನಂಜುಂಡ, ಮೈಸೂರು

contributor

Similar News