ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ರಾಜ್ಯಾದ್ಯಂತ ಸಿಪಿಎಂನಿಂದ ಪ್ರತಿಭಟನೆ

Update: 2020-06-16 18:33 GMT

ಬೆಂಗಳೂರು, ಜೂ.16: ಆದಾಯತೆರಿಗೆ ಪಾವತಿಸದ ಕುಟುಂಬಗಳಿಗೆ ತಿಂಗಳಿಗೆ ತಲಾ 7500 ರೂ. ಪಾವತಿಸಬೇಕು. ಹಾಗೇಯೇ ಪ್ರತಿ ವ್ಯಕ್ತಿಗೆ ತಲಾ 10 ಕೆ.ಜಿ.ಯಂತೆ ಆಹಾರಧಾನ್ಯ ವಿತರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾಕ್ರ್ಸ್ ವಾದ)ದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಯಿತು.

ಬೆಂಗಳೂರು, ತುಮಕೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಮಂಗಳೂರು, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಕಲಬುರಗಿ, ಬೀದರ್, ಉತ್ತರಕ ನ್ನಡ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ನೂರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಕೇಂದ್ರ ಸರಕಾರವು ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡುವ ಕಡೆಗೆ ಚಿಂತನೆ ನಡೆಸುತ್ತಿಲ್ಲ. ಕೊರೋನ ಮಹಾಮಾರಿ ಇಡೀ ದೇಶವನ್ನೇ ನಲುಗಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅಸಹಾಯಕರಾಗಿರುವ, ವಲಸೆ ಕಾರ್ಮಿಕರ, ಕೃಷಿ ಕೂಲಿ ಕಾರ್ಮಿಕರ, ಒಂಟಿ ಮಹಿಳೆಯರು ಹೀಗೆ ತಳಮಟ್ಟದ ಜನರ ನೆರವಿಗೆ ನಿಲ್ಲಬೇಕಿದೆ ಎಂದು ಸಿಪಿಎಂ ನಾಯಕರು ಒತ್ತಾಯಿಸಿದ್ದಾರೆ.

ಲಾಕ್‍ಡೌನ್ ಸಂದರ್ಭದಲ್ಲಿ ರೈತರ ಪರವಾಗಿರಬೇಕಾಗಿದ್ದ ಸರಕಾರ ರೈತ ವಿರೋಧಿ ನೀತಿಗಳನ್ನು ಅನುಸರಿಸಲಾಗುತ್ತಿದೆ. ಅಲ್ಲದೆ, ಕೊರೋನ ವಿರುದ್ಧ ಹೋರಾಡಬೇಕಾಗಿದ್ದ ಸರಕಾರ ಅದನ್ನು ನಿರ್ಲಕ್ಷ್ಯ ಧೋರಣೆಯಿಂದ ನೋಡುತ್ತಿದೆ. ಕೊರೋನ ನಿಯಂತ್ರಣಕ್ಕಾಗಿ ಯಾವುದೇ ಕಟ್ಟುನಿಟ್ಟಿನ ಕಾರ್ಯಕ್ರಮಗಳನ್ನು ಹಾಕಿಕೊಂಡಿಲ್ಲ ಎಂದು ಸಿಪಿಎಂ ಕಾರ್ಯದರ್ಶಿ ಯು.ಬಸವರಾಜ ಆರೋಪಿಸಿದ್ದಾರೆ.

ರಾಜ್ಯ ಸರಕಾರವು ಕೊರೋನ ಮಹಾಮಾರಿಯಿಂದ ಜನರು ಬಳಲುತ್ತಿದ್ದರೂ, ಜನತೆ ಸಾಯುತ್ತಿರುವ ಸಂಖ್ಯೆಯೂ ಅಧಿಕವಾಗುತ್ತಿರುವ ಈ ಸಂದರ್ಭದಲ್ಲಿ ಅದರ ಕಡೆಗೆ ಕೆಲಸ ಮಾಡುವುದರ ಬದಲಿಗೆ ಅನಗತ್ಯವಾದ, ಕಾರ್ಪೋರೇಟರ್‍ಗಳಿಗೆ ಅನುಕೂಲಕರವಾದ ಭೂಸುಧಾರಣಾ ಕಾಯ್ದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿತರಲು ಮುಂದಾಗಿದ್ದು ರೈತರನ್ನು ಇಲ್ಲವಾಗಿಸಲು ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಆದಾಯ ತೆರಿಗೆ ತೆರುವ ಮಿತಿಗಳ ಹೊರಗಿರುವ ಎಲ್ಲ ಕುಟುಂಬಗಳಿಗೆ ತಿಂಗಳಿಗೆ 7,500 ರಂತೆ ಆರು ತಿಂಗಳವರೆಗೆ ನಗದು ಹಣ ನೀಡಬೇಕು. ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆಜಿಯಂತೆ ಆರು ತಿಂಗಳವರೆಗೆ ಉಚಿತ ಆಹಾರ ಧಾನ್ಯಗಳನ್ನು ನೀಡಬೇಕು. ರಾಷ್ಟ್ರೀಯ ಆಸ್ತಿಗಳ ಲೂಟಿಯನ್ನು, ಸಾರ್ವಜನಿಕ ವಲಯದ ಖಾಸಗೀಕರಣವನ್ನು ಮತ್ತು ಕಾರ್ಮಿಕ ಕಾನೂನುಗಳ ರದ್ಧತಿಯನ್ನು ನಿಲ್ಲಿಸಬೇಕು.

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೆಚ್ಚಿಸಿದ ಕೂಲಿಯೊಂದಿಗೆ ಕನಿಷ್ಠ ವರ್ಷದಲ್ಲಿ 200 ದಿನಗಳ ಉದ್ಯೋಗ ನೀಡಬೇಕು. ನಗರದ ಬಡವರಿಗೂ ಉದ್ಯೋಗಖಾತ್ರಿ ಯೋಜನೆಯನ್ನು ವಿಸ್ತರಿಸಬೇಕು. ನಿರುದ್ಯೋಗಿಗಳಿಗೆ ತಕ್ಷಣವೇ ಒಂದು ನಿರುದ್ಯೋಗ ಭತ್ಯೆ ಪ್ರಕಟಿಸಬೇಕು. ಕರ್ನಾಟಕದಲ್ಲಿ ಆಹಾರ ಪರಿಕರಗಳು, ವೆಂಟಿಲೇಟರ್ಸ್, ಅಗತ್ಯ ಔಷಧಿಗಳ ತೀವ್ರ ಕೊರತೆಯಿದ್ದು, ಅವುಗಳನ್ನು ಗರಿಷ್ಠ ಪ್ರಮಾಣದಲ್ಲಿ ಪೂರೈಸಬೇಕು ಎಂದು ಸಿಪಿಎಂ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News