ಶ್ರೀ ಗುರು ರಾಘವೇಂದ್ರ ಬ್ಯಾಂಕಿನ 1400 ಕೋಟಿ ರೂ. ಅವ್ಯವಹಾರ ಬಯಲಿಗೆ
ಬೆಂಗಳೂರು, ಜೂ.18: ಸಾವಿರಾರು ಗ್ರಾಹಕರ ಠೇವಣಿ ಹಿಂತಿರುಗಿಸದೆ ವಂಚಿಸಿರುವ ಆರೋಪಕ್ಕೊಳಗಾಗಿರುವ ಬಸವನಗುಡಿ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಮಾಜಿ ಸಿಇಒ ನಿವಾಸ ಸೇರಿ ಐದು ಕಡೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ತನಿಖಾಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.
ಇಲ್ಲಿನ ಬಸವನಗುಡಿಯಲ್ಲಿ ನೆಲೆಸಿರುವ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಕೆ.ರಾಮಕೃಷ್ಣ ನಿವಾಸ, ಚಿಕ್ಕಲ್ಲಸಂದ್ರದಲ್ಲಿರುವ ಬ್ಯಾಂಕಿನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ವಾಸುದೇವಮಯ್ಯ ಅವರ ನಿವಾಸ, ಶಂಕರಪುರದಲ್ಲಿರುವ ಶ್ರೀ ಗುರು ಸಾರ್ವಭೌಮ ಸೌರ್ಹಾದ ಸಹಕಾರ ಸಂಘದ ಕಚೇರಿ ಹಾಗೂ ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಬ್ಯಾಂಕಿನ ಶಾಖೆ ಮತ್ತು ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದು ಎಸಿಬಿ ತಿಳಿಸಿದೆ.
1400 ಕೋಟಿ ರೂ. ಅವ್ಯವಹಾರ: ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಹೂಡಿಕೆ ಮಾಡಿರುವ ಗ್ರಾಹಕರ ಹಣವನ್ನು ಬ್ಯಾಂಕಿನ ಕೆಲವು ಅಧಿಕಾರಿಗಳು, ಸಿಬ್ಬಂದಿ ಸೇರಿ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ಸರಿ ಸುಮಾರು 1400 ಕೋಟಿ ರೂ.ಗಳ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲದೆ, ಆರ್ ಬಿಐ ನಿಯಮಗಳನ್ನು ಉಲ್ಲಂಘಿಸಿ ಬ್ಯಾಂಕಿನ ಕೆಲವು ಅಧಿಕಾರಿಗಳು, ಸಿಬ್ಬಂದಿ ಸೇರಿಕೊಂಡು ಕೃತಕ ಠೇವಣಿಗಳನ್ನು ಸೃಷ್ಟಿಸಿ ಸುಮಾರು 150 ಕೋಟಿ ರೂ. ಮೊತ್ತದ ಸಾಲವನ್ನು 60 ಕಾಲ್ಪನಿಕ ಗ್ರಾಹಕರಿಗೆ ಮಂಜೂರು ಮಾಡಿರುವ ಮಾಹಿತಿಯೂ ದಾಳಿ ವೇಳೆ ಗೊತ್ತಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಸಾರ್ವಜನಿಕರು ಖಾತೆ ತೆಗೆಯುವಾಗ ನೀಡಿದ ಬ್ರೌಷರ್ ನಲ್ಲಿ ಎನ್ಪಿಎ ಶೇ.1ಕ್ಕಿಂತ ಕಡಿಮೆ ಇದ್ದು, ನಿರಂತರವಾಗಿ ಶೇ.15ರಿಂದ 16ರಷ್ಟು ಎನ್ಪಿಎ ಇರುವುದಾಗಿ ತಿಳಿಸಿ ವಂಚನೆವೆಸಗಿದ್ದಾರೆ. ಆದರೆ, ಸಹಕಾರ ಸಂಘಗಳ ವರದಿಯಿಂದ ಈ ಬ್ಯಾಂಕಿನ ಎನ್ ಪಿಎ ಶೇ.25ರಿಂದು 30ರಷ್ಟು ಇರುವುದು ಪತ್ತೆಯಾಗಿದೆ.
ಏನಿದು ಪ್ರಕರಣ?: ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನ ಕೆಲವು ಸದಸ್ಯರು ಹಾಗೂ ಕಚೇರಿಯ ಸಿಬ್ಬಂದಿಗಳು ಸೇರಿಕೊಂಡು ಸಹಕಾರ ಬ್ಯಾಂಕಿಗೆ ಹೂಡಿಕೆ ಮಾಡಿರುವ ಗ್ರಾಹಕರ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಹಣವನ್ನು ದುರುಪಯೋಗ ಮಾಡಿಕೊಂಡು ವಂಚಿಸಿದ್ದ ಆರೋಪ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಇದರ ಅನ್ವಯ ಎಸಿಬಿ ದಾಳಿ ನಡೆಸಿ, ತನಿಖೆ ಮುಂದುವರೆಸಿದೆ.
ತಲೆಮರೆಸಿಕೊಂಡಿರುವ ಅಧ್ಯಕ್ಷ?
ಬಸವನಗುಡಿ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನ ಅವ್ಯವಹಾರ ಆರೋಪ ಕೇಳಿಬಂದ ಬೆನ್ನಲ್ಲೇ ಈ ಬ್ಯಾಂಕಿನ ಅಧ್ಯಕ್ಷ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಕೆ.ರಾಮಕೃಷ್ಣ, ಬ್ಯಾಂಕಿನ ಮಾಜಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ಸಿಇಒ) ವಾಸುದೇವಮಯ್ಯ ತಲೆಮರೆಸಿಕೊಂಡಿದ್ದು, ಇದುವರೆಗೂ ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಪ್ರಭಾವಿಗಳ ಮೇಲೂ ದಾಳಿ ಸಾಧ್ಯತೆ?
ಈ ಅವ್ಯವಹಾರ ಪ್ರಕರಣದಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು, ರಾಜಕಾರಣಿಗಳ ಹೆಸರು ಕೇಳಿಬರುತ್ತಿದ್ದು, ಇವರ ನಿವಾಸದ ಮೇಲೂ ಎಸಿಬಿ ದಾಳಿ ನಡೆಸಿ, ದಾಖಲೆ ಪತ್ತೆ ಮಾಡಲಿದೆ ಎಂದು ತಿಳಿದುಬಂದಿದೆ.