ಉಸಿರುಗಟ್ಟಿಸುವ ಜಗತ್ತು

Update: 2020-06-20 17:33 GMT

ಭಾಗ-2 

ಈ ಕಾಲದಲ್ಲಿ ವಸಾಹತು ಶಾಹಿ ರಾಷ್ಟ್ರಗಳು ಲಾಭ ನಷ್ಟದ ಬಗ್ಗೆ ಹೆಚ್ಚು ಚಿಂತಿತವಾಗಿದ್ದವು. ಮಿಲಿಟರಿ ಮತ್ತು ಆರ್ಥಿಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಅವುಗಳ ಮುಖ್ಯ ಗುರಿಯಾಗಿತ್ತು. ಯುರೋಪಿಯನ್ನರನ್ನು ವಸಾಹತುಗಳಲ್ಲಿ ದುಡಿಸುವುದು ದುಬಾರಿಯಾಗಿತ್ತು. ಅಲ್ಲದೆ ಇಂತಹ ನಿರ್ಧಾರವು ವಸಾಹತುಶಾಹಿ ರಾಷ್ಟ್ರಗಳಲ್ಲಿ ಕಾರ್ಮಿಕರ ಲಭ್ಯತೆಯ ಸಮಸ್ಯೆಯನ್ನೂ ಉಂಟು ಮಾಡಬಹುದಿತ್ತು. ಹೀಗಾಗಿ ಬಂಡವಾಳಶಾಹಿ ರಾಷ್ಟ್ರಗಳ ದೃಷ್ಟಿ ಬಿದ್ದಿದ್ದೆ ಸುಲಭದಲ್ಲಿ ಲಭಿಸುವ ಕರಿಯರ ಮೇಲೆ. ಈ ರೀತಿ ಭಾರೀ ಸಂಖ್ಯೆಯ ಆಫ್ರಿಕದ ಕರಿಯರನ್ನು ಅಮೆರಿಕಕ್ಕೆ ಸಾಗಿಸಿ ಅಲ್ಲಿನ ಕೃಷಿ, ತೋಟಗಾರಿಕೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಲಾಯಿತು. ಲಾಭ ಗಳಿಕೆಯ ಉದ್ದೇಶದ ಗುಲಾಮರ ವ್ಯಾಪಾರಕ್ಕೆ ಕಾನೂನಿನ ಅನುಮತಿಯೂ ಇತ್ತು. ಈ ರೀತಿ ಆಫ್ರಿಕನ್ನರನ್ನು ಭಾರೀ ಸಂಖ್ಯೆಯಲ್ಲಿ ಸಾಗಿಸಿ ಅಲ್ಲಿ ಅಮಾನುಷವಾಗಿ ದುಡಿಸಲಾಯಿತು. ಜಗತ್ತಿನಾದ್ಯಂತ ಇಂದಿಗೂ ಈ ಅನಿಷ್ಟ ಆಚರಣೆ ನಿಂತಿಲ್ಲ. ಹೊಸ ರೂಪದಲ್ಲಿ ನಡೆಯುತ್ತಲೇ ಇದೆ

ಗುಲಾಮಗಿರಿಯ ಹೊಸ ರೂಪ

ಈ ಹಿಂದೆ ಯಾವ ರೀತಿಯಲ್ಲಿ ಗುಲಾಮಗಿರಿ ಇತ್ತೋ, ಅದು ಇಂದಿಗೂ ಇದೆ. ಅದರ ರೂಪ ಮಾತ್ರ ಬದಲಾಗಿದೆ. ತಂತ್ರಜ್ಞಾನ, ಆರ್ಥಿಕಥೆ ಮತ್ತು ಮಿಲಿಟರಿ ಶಕ್ತಿಯ ಮೂಲಕ ತೃತೀಯ ಜಗತ್ತಿನ ರಾಷ್ಟ್ರಗಳನ್ನು ಗುಲಾಮಗಿರಿಗೆ ತಳ್ಳಲಾಗಿದೆ. ಬಡ ರಾಷ್ಟ್ರಗಳಿಗೆ ಅಸ್ತ್ರಗಳನ್ನು ಪೂರೈಸಿ ಬಿಕ್ಕಟ್ಟು ಸೃಷ್ಟಿಸುವುದೇ ಬಲಿಷ್ಠ ರಾಷ್ಟ್ರಗಳು. ಕಚ್ಚಾಟದ ಮಜಾ ಪಡೆಯುವುದರ ಜೊತೆಯಲ್ಲಿ ಲಾಭಕೋರತನದ ಹುನ್ನಾರವೂ ಇದರಲ್ಲಿ ಅಡಗಿದೆ. ಅಲ್ಲದೆ ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಅಗ್ಗದ ಸರಕುಗಳನ್ನು ಸುರಿದು ಬಡ ರಾಷ್ಟ್ರಗಳ ಕೈಗಾರಿಕೆಗಳನ್ನು ನಾಶ ಮಾಡಿದ್ದೇ ಬಂಡವಾಳಶಾಹಿ ರಾಷ್ಟ್ರಗಳು. ಇದರಿಂದಾಗಿ ಬಡ ರಾಷ್ಟ್ರಗಳು ಪರಾವಲಂಬಿಯಾಗಿ ಗುಲಾಮರಂತೆ ಬದುಕುವ ದುಸ್ಥಿತಿಯಲ್ಲಿವೆ. ಆದರೆ ನಾವು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದೇವೆ. ಟ್ವಿಟ್ಟರ್, ಫೇಸ್‌ಬುಕ್, ಗೂಗಲ್, ಮೈಕ್ರೋ ಸಾಫ್ಟ್ ಮುಂತಾದ ವಿದೇಶಿ ಕಂಪೆನಿಗಳಿಗೆ ನಾವು ದಾಸರಾಗಿರುವುದು, ಗುಲಾಮ ಗಿರಿಯ ಇನ್ನೊಂದು ರೂಪವೇ ಆಗಿದೆ. ಈ ಎಲ್ಲ ಕಂಪೆನಿಗಳ ಸಾಮಾಜಿಕ ಜಾಲ ತಾಣಗಳನ್ನು ಬಿಟ್ಟು ಬದುಕು ಅಸಾಧ್ಯವೆನಿಸಿಬಿಟ್ಟಿದೆ. ಅಗೋಚರವಾಗಿ ನಾವು ಈ ಬಹುರಾಷ್ಟ್ರೀಯ ಕಂಪೆನಿಗಳ ಹುಂಡಿ ತುಂಬುತ್ತಿರುವ ಅರಿವು ನಮಗೆ ಬರುವುದೇ ಇಲ್ಲ. ಇಡೀ ಜಗತ್ತೇ ಕಳೆದ ಮೂರು ತಿಂಗಳುಗಳಲ್ಲಿ ಕೊರೋನದಿಂದಾಗಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದರೆ, ಈ ಅವಧಿಯಲ್ಲಿ ಈ ಎಲ್ಲ ಕಂಪೆನಿಗಳು ಭಾರೀ ಲಾಭ ದಾಖಲಿಸಿವೆ. ಅಂದರೆ ನಾವು ಯಾವ ಸ್ಥಿತಿಯಲ್ಲಿದ್ದರೂ ಈ ಬಂಡವಾಳ ಶಾಹಿ ಕಂಪೆನಿಗಳ ಗುಲಾಮರಾಗಿಯೇ ಇರುತ್ತೇವೆ ಎಂದರ್ಥ. ನಾವು ಯಾವಾಗ ಈ ಸಾಮಾಜಿಕ ಜಾಲ ತಾಣಗಳಲ್ಲಿ ಸೇರಿಕೊಳ್ಳುತ್ತೇವೋ ಅಂದಿನಿಂದಲೇ ನಮ್ಮೆಲ್ಲ ವೈಯಕ್ತಿಕ ಮಾಹಿತಿಗಳು ಕಾರ್ಪೊರೇಟ್ ಕುಳಗಳ ಕೈ ಸೇರಿ, ನಮ್ಮನ್ನು ಬಗೆ ಬಗೆಯ ಜಾಹೀರಾತುಗಳ ಮೂಲಕ ಮರುಳುಗೊಳಿಸಿ ದೋಚುವ ಕಾರ್ಯವೂ ಆರಂಭಗೊಳ್ಳುತ್ತದೆ. ಅಂದು ವಸಾಹತುಗಳನ್ನು ಕಟ್ಟಿ ದೋಚಲಾಗಿದ್ದರೆ, ಇಂದು ಸಾಮಾಜಿಕ ಜಾಲ ತಾಣಗಳೆಂಬ ನವ ವಸಾಹತುಶಾಹಿಯ ರೂಪದಲ್ಲಿ ಲೂಟಿ ಮಾಡಲಾಗುತ್ತಿದೆ.

ಒಂದು ಕಡೆ ಸಾಮಾಜಿಕ ಜಾಲ ತಾಣಗಳು ಪರ್ಯಾಯ ಮಾಧ್ಯಮವಾಗಿ ಬಲಗೊಳ್ಳುತ್ತಿದ್ದರೂ, ಮತ್ತೊಂದು ಕಡೆ ಇವುಗಳು ಸಮಾಜಕ್ಕೆ ಕಂಟಕವಾಗಿಯೂ ಪರಿಣಮಿಸುತ್ತಿವೆೆ. ಎಷ್ಟೋ ಮಂದಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಡುವ ಮಾನ ಹಾನಿಕರ ಸುಳ್ಳು ಸುದ್ದಿಗಳಿಂದಾಗಿ ಬದುಕು ಕಳೆದುಕೊಂಡಿರುವ ಘಟನೆಗಳೇ ನಮ್ಮ ಮುಂದೆ ಇವೆ. ಅಲ್ಲದೆ ಇದು ಕೋಮುದ್ವೇಷದ ವಿಷ ಬೀಜ ಬಿತ್ತುವ ಕೋಮುವಾದಿಗಳ ಅಡ್ಡೆಯೂ ಆಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ನಿಯಂತ್ರಣ ಇಲ್ಲದ ಸಾಮಾಜಿಕ ಜಾಲ ತಾಣಗಳ ನಡುವೆ ಉಸಿರಾಡುವುದು ಕಷ್ಟವೇ ಸರಿ. ಮಾಧ್ಯಮಗಳ ಅವಸ್ಥೆಯಂತೂ ಹೇಳಿ ಪ್ರಯೋಜನ ಇಲ್ಲ. ರಾಜಕೀಯ ಪಕ್ಷಗಳ, ಧಾರ್ಮಿಕ ಗುಂಪುಗಳ ಮತ್ತು ಕಾರ್ಪೊರೇಟ್ ಕುಳಗಳ ಪರವಾಗಿ ಪುಂಗಿ ಊದುವುದೇ ಇವುಗಳ ನಿತ್ಯ ಕೆಲಸ ಆಗಿದೆ. ಕೆಲವು ಮಂದಿ ಮಾಧ್ಯಮದಲ್ಲಿ ಬ್ರಹ್ಮಾಂಡ ಬದಲಾವಣೆ ತರುತ್ತೇವೆ ಎಂಬ ಭ್ರಮೆಯಲ್ಲಿ ವೆಬ್ ಆಧಾರಿತ ಚಾನೆಲ್ ಗಳನ್ನು ಭಾರೀ ಉತ್ಸಾಹದಿಂದ ಆರಂಭಿಸಿದ್ದಾರೆ. ಆದರೆ ವಾಸ್ತವ ಬೇರೆಯೇ ಇದೆ. ಈ ಎಲ್ಲ ವೆಬ್ ಚಾನೆಲ್ ಗಳ ಜುಟ್ಟು ಇರುವುದು ಕಾರ್ಪೊರೇಟ್ ಕುಳಗಳ ಕೈಯಲ್ಲೆ. ಯಾವ ಸಂದರ್ಭದಲ್ಲೂ ರಾಜಕೀಯ, ಧಾರ್ಮಿಕ ಮತ್ತು ಬಂಡವಾಳಶಾಹಿ ಪರ ಲಾಬಿ ಚಾನೆಲ್ ಗಳ ಕೊರಳ ಹಿಸುಕುವ ಅಪಾಯ ಇದ್ದೆ ಇದೆ. ಆದ್ದರಿಂದ ಇಲ್ಲೂ ಪುಂಗಿಯನ್ನೇ ಊದಬೇಕಾದ ಅನಿವಾರ್ಯತೆ ಇರುವುದಂತೂ ಸತ್ಯ. ಜನ ಸಾಮಾನ್ಯನಿಗೆ ಇವೆಲ್ಲ ಉಸಿರುಗಟ್ಟುವ ಸನ್ನಿವೇಶಗಳೇ ಆಗಿವೆ.

 ಚೀನಾ ಎಂಬ ನವ ವಸಾಹತುಶಾಹಿ
ಗುಲಾಮಗಿರಿ ಮತ್ತು ಜನಾಂಗೀಯವಾದ ಆರ್ಥಿಕ ಕಾರಣದಿಂದಾಗಿಯೇ ಹುಟ್ಟಿಕೊಂಡಿತ್ತು. ಹಿಂದಿನ ಶತಮಾನದ ವರೆಗೆ ಯುರೋಪಿಯನ್ ರಾಷ್ಟ್ರಗಳು ವ್ಯಾಪಾರಕ್ಕಾಗಿ ಬಂದು ತಮ್ಮ ವಸಾಹತುಗಳನ್ನು ಹೇಗೆ ಸ್ಥಾಪಿಸಿದ್ದವೋ ಅದೇ ರೀತಿಯ ಕೊಲೊನಿಯಲ್ ಕಲ್ಚರ್ ಇಂದಿಗೂ ಇದೆ. ಆದರೆ ರೂಪ ಮಾತ್ರ ಬದಲಾಗಿದೆ. ಪ್ರಸಕ್ತ ಜಗತ್ತಿನಲ್ಲಿ ಅಮೆರಿಕ ಮತ್ತು ಚೀನಾ ನಡೆಯೇ ಇದಕ್ಕೊಂದು ಸಾಕ್ಷಿ. ಅಮೆರಿಕ ಹೇಗೆ ತನ್ನ ಮಿಲಿಟರಿ ಮತ್ತು ಆರ್ಥಿಕ ಶಕ್ತಿಯ ಬಲದಿಂದ ಜಗತ್ತಿನಾದ್ಯಂತ ಸೇನಾ ನೆಲೆ ಮತ್ತು ಪ್ರಭಾವವನ್ನು ಹೊಂದಿದೆಯೋ, ಅದೇ ಹಾದಿಯಲ್ಲಿ ಚೀನಾ ಕೂಡ ಇದೆ. ನಮ್ಮ ಏಶ್ಯದಲ್ಲೇ ಗಮನಿಸುವುದಾದರೆ, ಭಾರತವನ್ನು ಕಟ್ಟಿ ಹಾಕುವುದಕ್ಕಾಗಿ ನೆರೆಯ ಕೆಲವು ರಾಷ್ಟ್ರಗಳಲ್ಲಿ ಚೀನಾ ಭಾರೀ ಹೂಡಿಕೆ ಮಾಡಿ, ಅಲ್ಲಿಯ ಸರಕಾರಗಳನ್ನು ಬೀಜಿಂಗ್ ನಿಂದ ನಿಯಂತ್ರಿಸುತ್ತಿದೆ. ಹಾಂಕಾಂಗ್ ಮತ್ತು ಟಿಬೆಟ್ ಕಥೆ ಹೇಳುವುದೇ ಬೇಡ. ಯಾವುದೇ ರೀತಿಯ ಸ್ವಾತಂತ್ಯ ಇಲ್ಲದ ಇಲ್ಲಿನ ಜನರ ಬದುಕು ಪಂಜರದ ಗಿಳಿಯಂತಾಗಿದೆ. ಮಲೇಶ್ಯ ಮತ್ತು ವಿಯೆಟ್ನಾಂ, ದಕ್ಷಿಣ ಚೀನಾ ಸಮುದ್ರದಲ್ಲಿ ನಿತ್ಯ ಭೀತಿಯಲ್ಲೇ ಬದುಕ ಬೇಕಾದ ದುಸ್ಥಿತಿ ಇದೆ. ಈ ಮೊದಲು ಚೀನಾವನ್ನು ದ್ವೇಷಿಸುತ್ತಿದ್ದ ಫಿಲಿಪ್ಪೀನ್ಸ್ ಅನ್ಯ ದಾರಿಯಿಲ್ಲದೆ ಇದೀಗ ಡ್ರ್ಯಾಗನ್ ಅನ್ನು ಅಪ್ಪಿಕೊಂಡಿದೆ. ಇವೆಲ್ಲ ಏಶ್ಯದ ಪುಟ್ಟ ರಾಷ್ಟ್ರಗಳ ಪಾಲಿಗೆ ಉಸಿರುಗಟ್ಟುವ ವಾತಾವರಣವೇ ಸರಿ. ಹಲವು ಜಾತಿ, ಜನಾಂಗ ಮತ್ತು ಮತಗಳ ರಾಷ್ಟ್ರವಾಗಿರುವ ಚೀನಾದಲ್ಲಿ ಉಯಿಘರ್ ಮುಸ್ಲಿಮರ ಸ್ಥಿತಿ ನೋಡಿದರೆ ಸಾಕು , ಅಲ್ಲಿ ಧಾರ್ಮಿಕ ಸ್ವಾತಂತ್ರ ಯಾವ ಮಟ್ಟದಲ್ಲಿದೆ ಎಂಬುದನ್ನು ತಿಳಿಯಬಹುದು. ಹೀಗೆ ಇಡೀ ಜಗತ್ತು, ಒಂದಲ್ಲ ಒಂದು ರೀತಿಯಲ್ಲಿ ಜಾತಿ, ಧರ್ಮ ಮತ್ತು ಜನಾಂಗ ಭೇದದಿಂದ ಇನ್ನೂ ಮುಕ್ತಗೊಂಡಿಲ್ಲ. ನಿರಾಳವಾಗಿ ಉಸಿರಾಡುವುದು ಕಷ್ಟವೇ ಸರಿ.

ನಮ್ಮ ಸ್ಥಿತಿಯೂ ಅಷ್ಟೇ
ಭಾರತದ ಸ್ಥಿತಿಯೂ ಅಷ್ಟೇ. ಇಲ್ಲೂ ಉಸಿರುಗಟ್ಟುವ ವಾತಾವರಣವೇ ಇದೆ. ನಮ್ಮ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸ್ಥಿತಿ ಉಸಿರುಗಟ್ಟಿಸುವಷ್ಟು ಕೆಟ್ಟು ಹೋಗಿದೆ. ನಮ್ಮ ರಾಜಕೀಯ ನಾಯಕರು ತಮ್ಮ ಸ್ವಾರ್ಥಕ್ಕಾಗಿ ದೇಶದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ಯಾವ ರೀತಿ ಬಲಿಕೊಟ್ಟಿದ್ದಾರೆ ಅಂದರೆ ಅದನ್ನು ಹೇಳಿಕೊಳ್ಳಲು ನಾಚಿಕೆ ಮತ್ತು ಭಯ ಪಡುವಂತಾಗಿದೆ. ರಾಜಕೀಯವನ್ನು ಒಂದು ಬಿಝಿನೆಸ್ ಆಗಿ ಮಾರ್ಪಡಿಸಿದ್ದೆ ನಮ್ಮ ಪುಢಾರಿಗಳ ಮಹಾನ್ ಸಾಧನೆ. ಇಂದಿನ ದಿನ ಮಾನಗಳಲ್ಲಿ ಹಣ ಸುರಿದು ಹಣ ಗಳಿಸುವ ವ್ಯವಸ್ಥೆಯೇ ರಾಜಕೀಯ ಎಂಬಂತಾಗಿದೆ. ಜನ ಸೇವೆ ಎಂದು ಮತ ಬೇಡುವ ಇವರು, ಅಧಿಕಾರಕ್ಕೇರಿದ ಬಳಿಕ ಜನರನ್ನೇ ಸೇವಕರನ್ನಾಗಿ ಮಾಡಿ ಎಲ್ಲವನ್ನು ಮರೆಯುತ್ತಾರೆ. ಚುನಾವಣೆ ವೇಳೆ ಕೆಲವೇ ಲಕ್ಷ ಇರುವ ಇವರ ಆಸ್ತಿ ಮೌಲ್ಯ, ಗೆದ್ದ ಬಳಿಕ ನೂರೆಂಟು ಕೋಟಿಗಳು ಗಡಿದಾಟುತ್ತದೆ. ಅಪರಾಧ, ಭ್ರಷ್ಟಾಚಾರ ಇವರ ದಿನ ನಿತ್ಯದ ಕಾಯಕ ಆಗಿದೆ. ಸೂಕ್ಷ್ಮ ಸಂವೇದನೆಯ ನಮ್ಮ ದೇಶದಲ್ಲಿ ಚುನಾವಣೆ ಗೆಲ್ಲುವ ಇವರ ತಂತ್ರ ಅತ್ಯಂತ ಅಪಾಯಕಾರಿಯಾಗಿದ್ದು, ಕೋಮುವಾದವೇ ಇವರ ಅಸ್ತ್ರವಾಗಿದೆ. ಯಾರು ಬೇಕಾದರೂ ಹೊಡೆದಾಡಿ ಸಾಯಲಿ, ಚುನಾವಣೆ ಗೆಲ್ಲುವುದೇ ಇವರ ಗುರಿಯಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಶೋಷಿತ ಸಮಾಜದ ಒಬ್ಬ ಸಜ್ಜನ ವ್ಯಕ್ತಿ ರಾಜಕೀಯದಲ್ಲಿ ಬೆಳೆಯುವುದು ಅಸಾಧ್ಯವೇ ಸರಿ. ಉತ್ತಮ ವಿದ್ಯಾರ್ಹತೆ, ಸಜ್ಜನಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಇರಬೇಕಾದ ಮಾನ ದಂಡ ಅಲ್ಲವೇ ಅಲ್ಲ ಎಂಬಂತಾಗಿದೆ. ಏನಿದ್ದರೂ ಭ್ರಷ್ಟ, ಕ್ರಿಮಿನಲ್, ಕೋಮುವಾದಿ ಎಂಬ ಹಣೆ ಪಟ್ಟಿ ಹೊತ್ತವನು ಚುನಾವಣಾ ಸ್ಪರ್ಧೆಗೆ ಹೆಚ್ಚು ಅರ್ಹನಾಗಿರುತ್ತಾನೆ. ನಾವೆಲ್ಲಾ ಅತ್ಯಂತ ಪವಿತ್ರ ಎಂದು ನಂಬಿರುವ ವಿಧಾನ ಸಭೆಯೇ ಇವರಲ್ಲಿ ಕೆಲವರ ತೆವಲು ತೀರಿಸುವ ಸ್ಥಳ ಕೂಡ ಹೌದು. ಇಂತಹವರನ್ನು ಜನ ಕ್ಯಾಕರಿಸಿ ತಿರಸ್ಕರಿಸಿದರೂ ಹಿಂಬಾಗಿಲಿನಿಂದ ಮತ್ತೆ ಅಧಿಕಾರಕ್ಕೆ ಬರುವುದು ನಮ್ಮೆಲ್ಲರ ದೌರ್ಭಾಗ್ಯ ಅಲ್ಲದೆ ಮತ್ತೇನು? ಧಾರ್ಮಿಕ ಮುಖಂಡರು, ಅಪರಾಧಿಗಳು ಮತ್ತು ಭ್ರಷ್ಟರು ರಾಜಕೀಯಕ್ಕೆ ಪ್ರವೇಶಿಸುವುದು ರಾಜಕೀಯ ಎನ್ನುವ ವ್ಯವಸ್ಥೆ ಎಷ್ಟೊಂದು ಕುಲಗೆಟ್ಟಿದೆ ಎನ್ನುವುದಕ್ಕೆ ಜ್ವಲಂತ ಸಾಕ್ಷಿಯೇ ಸರಿ. ಈ ರೀತಿಯ ಅವ್ಯವಸ್ಥೆ ಶೋಷಣೆಯ ಇನ್ನೊಂದು ಮುಖ ಆಗಿದ್ದು, ಇಂತಹ ಸ್ಥಿತಿಯಲ್ಲಿ ಜಾರ್ಜ್ ಫ್ಲಾಯ್ಡಾ ಹಾಗೆ ಉಸಿರಾಡುವುದಾದರೂ ಹೇಗೆ?

ಹೋಮ, ಹವನಗಳ ಮೂಲಕ ಕೆಳ ವರ್ಗದವರಲ್ಲಿ ಮೌಢ್ಯ ಭಿತ್ತಿ ಅವರನ್ನು ದೋಚುವುದು, ಪಂಕ್ತಿ ಭೇದ ನಡೆಸುವುದು, ಸಾಮಾಜಿಕ ಬಹಿಷ್ಕಾರ ಹಾಕುವುದು, ಜ್ಯೋತಿಷ್ಯ ಮೂಲಕ ಮೂಢ ನಂಬಿಕೆ ಬಿತ್ತುವುದು ಶೋಷಣೆ ಮತ್ತು ಲೂಟಿಕೋರತನ ಅಲ್ಲದೆ ಮತ್ತೇನು? ಇಂತಹ ವಾತಾವರಣದಲ್ಲಿ ಉಸಿರುಗಟ್ಟಿ ಸಾಯುವ ಸಾಧ್ಯತೆಯೇ ಹೆಚ್ಚು. ಇಂತಹ ವಿಷಮ ಸ್ಥಿತಿಯಿಂದ ಹೊರಬಂದು ನಿರಾಳವಾಗಿ ಉಸಿರಾಡಲು ನಮ್ಮ ದೇಶದ ಎಲ್ಲ ಶೋಷಿತ ಜಾತಿ ಮತ್ತು ಧರ್ಮದವರು ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಬೌದ್ಧಿಕವಾಗಿ ಮತ್ತಷ್ಟು ಬಲಗೊಳ್ಳಬೇಕು. ಇಲ್ಲೇ ಇರುವುದು ಭಾರತದ ಬಲ.
(ಮುಗಿಯಿತು)

Writer - ಗಿರೀಶ್ ಬಜ್ಪೆ

contributor

Editor - ಗಿರೀಶ್ ಬಜ್ಪೆ

contributor

Similar News