ಬೆಂಗಳೂರಿನಲ್ಲಿ ಮತ್ತೆ ಲಾಕ್ಡೌನ್: ಹೈಕೋರ್ಟ್ ನಲ್ಲಿ ಜು.15ರಿಂದ ಹೊಸ ಅರ್ಜಿಗಳ ಸಲ್ಲಿಕೆಗೆ ಅವಕಾಶವಿಲ್ಲ
Update: 2020-07-13 12:27 GMT
ಬೆಂಗಳೂರು, ಜು.13: ಬೆಂಗಳೂರಿನಲ್ಲಿ ಮತ್ತೆ ಲಾಕ್ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಜು.15ರಿಂದ ಹೊಸ ಅರ್ಜಿಗಳ ಸಲ್ಲಿಕೆಗೆ ಅವಕಾಶವಿಲ್ಲ ಎಂದು ಹೈಕೋರ್ಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಅತ್ಯಂತ ತುರ್ತು ಹೊರತುಪಡಿಸಿ ಬೇರೆ ಅರ್ಜಿಗಳ ವಿಚಾರಣೆ ಇಲ್ಲ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಮಿಕರ್ ತಿಳಿಸಿದ್ದಾರೆ. ಈಗಾಗಲೇ ಜು.15ರಿಂದ 22ರವರೆಗೆ ಮುಂದೂಡಿಕೆ ಪ್ರಕರಣಗಳಲ್ಲಿಯೂ ಸಹ ತುರ್ತು ಅರ್ಜಿಗಳಿದ್ದರೆ ಮಾತ್ರ ವಿಚಾರಣೆ ನಡೆಯಲಿದೆ. ಅತ್ಯಂತ ತುರ್ತು ಎಂದು ಮನವಿ ಸಲ್ಲಿಸಿದರೆ ಮಾತ್ರ ನ್ಯಾಯಪೀಠ ವಿಚಾರಣೆಗೆ ಪರಿಗಣಿಸಲಿದೆ. ಲಾಕ್ಡೌನ್ ಅವಧಿಯಲ್ಲಿ ವಕೀಲ ವೃಂದ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಈ ಆದೇಶ ಕೇವಲ ಬೆಂಗಳೂರು ಹೈಕೋರ್ಟ್ ಗೆ ಮಾತ್ರ ಅನ್ವಯವಾಗಲಿದ್ದು, ಧಾರವಾಡ ಹಾಗೂ ಕಲಬುರಗಿ ನ್ಯಾಯಪೀಠದಲ್ಲಿ ಕಳೆದ ಲಾಕ್ಡೌನ್ ಸಮಯದಲ್ಲಿದ್ದ ಮಾರ್ಗಸೂಚಿಗಳು ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.