ಬಹು ಆಯಾಮದ ಬಡತನ ಗುಂಪಿನಲ್ಲಿದ್ದ ಜನರ ಪ್ರಮಾಣ ಕುಸಿತ: ಭಾರತಕ್ಕೆ ಅಗ್ರಸ್ಥಾನ

Update: 2020-07-17 17:02 GMT

ವಿಶ್ವಸಂಸ್ಥೆ, ಜು.17: ಬಹುಆಯಾಮದ ಬಡತನ ಗುಂಪಿನಲ್ಲಿದ್ದ ಜನರ ಪ್ರಮಾಣವನ್ನು ಭಾರತವು ದಾಖಲೆ ಮಟ್ಟದಲ್ಲಿ ಕಡಿಮೆಗೊಳಿಸಿದೆ. 2005-2006 ಮತ್ತು 2015-2016ರ ಮಧ್ಯೆ ಸುಮಾರು 273 ಮಿಲಿಯನ್ ಭಾರತೀಯರು ಬಹುಆಯಾಮದ ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.

ಸಮೀಕ್ಷೆಗೆ ಒಳಪಟ್ಟ 75 ದೇಶಗಳಲ್ಲಿ 65 ದೇಶಗಳು 2000ದಿಂದ 2019ರ ನಡುವಿನ ಅವಧಿಯಲ್ಲಿ ತಮ್ಮಲ್ಲಿರುವ ಬಹುಆಯಾಮದ ಬಡತನ ಮಟ್ಟವನ್ನು ಗಣನೀಯವಾಗಿ ಕಡಿತಗೊಳಿಸಿವೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ(ಯುಎನ್ಡಿಪಿ) ಮತ್ತು ದಿ ಆಕ್ಸ್ಫರ್ಡ್ ಪಾವರ್ಟಿ ಆ್ಯಂಡ್ ಹ್ಯೂಮನ್ ಡೆವಲಪ್ಮೆಂಟ್ ಇನಿಷಿಯೇಟಿವ್(ಒಪಿಎಚ್ಐ) ಬಿಡುಗಡೆಗೊಳಿಸಿದ ವರದಿ ವಿವರಿಸಿದೆ.

ಅನಾರೋಗ್ಯ, ಶಿಕ್ಷಣದ ಕೊರತೆ, ಅಸಮರ್ಪಕ ಜೀವನ ಮಟ್ಟ, ಕಳಪೆ ದರ್ಜೆಯ ಕೆಲಸ, ಹಿಂಸೆಯ ಬೆದರಿಕೆ, ಅಪಾಯಕರ ಪರಿಸರದಲ್ಲಿ ಜೀವನ - ಇವು ಬಹುಆಯಾಮದ ಬಡತನ ವಿಭಾಗದಲ್ಲಿ ಒಳಗೊಂಡಿದೆ. ಬಹು ಆಯಾಮದ ಬಡತನ ಸೂಚ್ಯಾಂಕ ಮೌಲ್ಯ(ಎಂಪಿಐ)ವನ್ನು ಕಡಿಮೆಗೊಳಿಸಿದ 65 ದೇಶಗಳಲ್ಲಿ 50 ದೇಶಗಳು ಬಡತನದಲ್ಲಿ ಜೀವಿಸುವ ಜನರ ಪ್ರಮಾಣವನ್ನೂ ಕಡಿಮೆಗೊಳಿಸಿವೆ. ಇದರಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು ಅಂದಾಜು 273 ಮಿಲಿಯನ್ ಜನರು 10 ವರ್ಷದ ಅವಧಿಯಲ್ಲಿ ಬಹುಆಯಾಮದ ಬಡತನ ವ್ಯಾಪ್ತಿಯಿಂದ ಹೊರಗೆ ಬಂದಿದ್ದಾರೆ.

ಅಮೆರಿಕ (2010- 2015/16), ಭಾರತ (2005/2006-2015/2016), ನಿಕರಾಗುವ(2001-2011/2012) ಮತ್ತು ಉತ್ತರ ಮಸೆಡೋನಿಯಾ(2005/2006-2011) ದೇಶಗಳು ತಮ್ಮ ಜಾಗತಿಕ ಎಂಪಿಐ ಮೌಲ್ಯವನ್ನು ಅರ್ಧಕ್ಕೆ ಇಳಿಸಿವೆ ಎಂದು ವರದಿ ತಿಳಿಸಿದೆ.

ವಿಭಿನ್ನ ಆರಂಭಿಕ ಬಡತನ ಮಟ್ಟವನ್ನು ಹೊಂದಿರುವ ದೇಶಗಳು ಏನನ್ನು ಸಾಧಿಸಬಹುದು ಎಂಬುದನ್ನು ವಿಶ್ವದ ಜನಸಂಖ್ಯೆಯ ಸುಮಾರು ಐದನೇ ಒಂದಂಶದಷ್ಟು ಜನಸಂಖ್ಯೆಯನ್ನು ಹೊಂದಿರುವ ಈ ಐದು ದೇಶಗಳು ತೋರಿಸಿವೆ. ಭಾರತದಲ್ಲಿ ಬಹುಆಯಾಮದ ಬಡತನ ವ್ಯಾಪ್ತಿಯಲ್ಲಿರುವವರ ಸಂಖ್ಯೆಯು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರ ವಿಭಾಗದ ಜನಸಂಖ್ಯಾ ದತ್ತಾಂಶ(2019)ವನ್ನು ಆಧರಿಸಿದೆ. ಭಾರತ ಮತ್ತು ನಿಕರಾಗುವಾ ದೇಶಗಳು ಕ್ರಮವಾಗಿ 10 ಮತ್ತು 10.5 ವರ್ಷಗಳಲ್ಲಿ ಮಕ್ಕಳೊಳಗಿನ ಎಂಪಿಐ ಮೌಲ್ಯವನ್ನು ಅರ್ಧಕ್ಕೆ ಇಳಿಸಿವೆ.

ಬಾಂಗ್ಲಾದೇಶ, ಬೊಲಿವಿಯ, ಕಿಂಗ್ಡಮ್ ಆಫ್ ಎಸ್ವಾತಿನಿ, ಗಾಬೊನ್, ಜಾಂಬಿಯಾ, ಗಯಾನ, ಭಾರತ, ಲೈಬೀರಿಯ, ಮಾಲಿ, ಮೊಝಾಂಬಿಕ್, ನಿಜೆರ್, ನಿಕರಾಗುವ, ನೇಪಾಳ ಮತ್ತು ರವಾಂಡ ದೇಶಗಳು ವಿವಿಧ ಪ್ರದೇಶಗಳಲ್ಲಿ ಬಹುಆಯಾಮದ ಬಡತನವನ್ನು ಕಡಿಮೆಗೊಳಿಸಿದೆ. ಕೋವಿಡ್-19 ಈ ದೇಶಗಳ ಅಭಿವೃದ್ಧಿ ಗತಿಯ ಮೇಲೆ ವ್ಯಾಪಕ ಪರಿಣಾಮ ಬೀರಿದೆ. ಆದರೆ ಕೊರೋನ ಸೋಂಕಿಗೂ ಹಿಂದಿನ ಈ ಅಂಕಿಅಂಶಗಳು ಭರವಸೆಯ ಸಂದೇಶವನ್ನು ನೀಡುತ್ತವೆ. ಜನತೆ ತಮ್ಮ ದೈನಂದಿನ ಬದುಕಿನಲ್ಲಿ ಅನುಭವಿಸುತ್ತಿರುವ ಬಡತನದ ಸಮಸ್ಯೆಯನ್ನು ನಿವಾರಿಸಲು ಮತ್ತು ಮಿಲಿಯಾಂತರ ಜನರ ಜೀವನಮಟ್ಟವನ್ನು ಸುಧಾರಿಸಲು ಈ ಯಶಸ್ಸಿನ ಕತೆಗಳು ಪ್ರೇರಣೆಯಾಗಲಿವೆ ಎಂದು ಆಕ್ಸ್ಫರ್ಡ್ ವಿವಿಯ ಒಪಿಎಚ್ಐ ನಿರ್ದೇಶಕಿ ಸಬೀನಾ ಅಲ್ಕೈರ್ ಹೇಳಿದ್ದಾರೆ.

ಕೋವಿಡ್-19ರ ರೀತಿಯ ಇನ್ನೂ ಹಲವು ಮಾರಕ ಸೋಂಕು ಶೀಘ್ರವೇ ವಿಶ್ವವನ್ನು ಕಂಗೆಡಿಸಲಿದೆ. ಪ್ರತಿಯೊಂದೂ ಬಡಜನರ ಮೇಲೆ ಹಲವು ವಿಧದ ಪರಿಣಾಮ ಬೀರಲಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಬಡತನದ ಸಮಸ್ಯೆ ಹಾಗೂ ಬಡತನಕ್ಕೆ ಗುರಿಯಾಗುವ ಸಮಸ್ಯೆಯನ್ನು ಪರಿಹರಿಸಬೇಕಿದೆ ಎಂದು ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ವರದಿ ಇಲಾಖೆಯ ನಿರ್ದೇಶಕ ಪೆಡ್ರೋ ಕಾನ್ಸಿಕೊ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News