ಲಾಕ್‍ಡೌನ್, ಕೊರೋನ ನಡುವೆ 700ರಷ್ಟು ರೋಗಿಗಳನ್ನು ಉಚಿತವಾಗಿ ಆಸ್ಪತ್ರೆಗೆ ಸಾಗಿಸಿದ ಆಟೊ ಚಾಲಕ

Update: 2020-08-09 13:05 GMT

ಬೆಂಗಳೂರು, ಆ.9: ರಾಜಧಾನಿ ಬೆಂಗಳೂರಿನಲ್ಲಿ ಕೊರೋನ ಸೋಂಕಿನ ನಾಗಲೋಟ ಮುಂದುವರಿದಿದ್ದು, ಇದರ ನಡುವೆ ರೋಗಿಗಳಿಗೆ ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ದೊರೆಯದೆ, ಸಾವನ್ನಪ್ಪುತ್ತಿರುವ ಪ್ರಕರಣಗಳು ದಿನೇ ದಿನೇ ಬೆಳಕಿಗೆ ಬರುತ್ತಿವೆ. ಹೀಗಿರುವಾಗ ಇಲ್ಲೊಬ್ಬರು ವ್ಯಕ್ತಿ ತನ್ನ ಆಟೊವನ್ನೆ ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿ, ಸಮಾಜಕ್ಕೆ ಮಾದರಿಯಾಗಿದ್ದಾರೆ.

ಬೆಂಗಳೂರಿನ ಹೆಬ್ಬಾಳದ ಭುವನೇಶ್ವರಿನಗರದ ನಿವಾಸಿ ಆಗಿರುವ ಆಟೊ ಚಾಲಕ ಅಬ್ದುಲ್ ಮಜೀದ್ ಸೌದಾಗರ್ ಎಂಬವರು ತನ್ನ ಆಟೊ ರಿಕ್ಷಾವನ್ನು, ಸದ್ಯ ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿ ದಿನಪೂರ್ತಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ರೋಗಿಗಳ ಬಳಿ ಹಣ ಇಲ್ಲದಿದ್ದರೂ, ಆಸ್ಪತ್ರೆಗೆ ಸಾಗಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

''ಲಾಕ್‍ಡೌನ್ ಪ್ರಾರಂಭದಿಂದಲೂ ಬೆಂಗಳೂರಿನಲ್ಲಿ ತುರ್ತು ಆರೋಗ್ಯ ಸೇವೆಗಳಿಗಾಗಿ ಜನರು ಪರದಾಟ ನಡೆಸುತ್ತಿದ್ದು, ಮುಖ್ಯವಾಗಿ ಆ್ಯಂಬುಲೆನ್ಸ್ ವ್ಯವಸ್ಥೆ ಸರಿಯಾಗಿ ಸಿಗುತ್ತಿಲ್ಲ. ಇದನ್ನು ಮನಗಂಡು ಆಟೊ ಆ್ಯಂಬುಲೆನ್ಸ್ ಆರಂಭಿಸಿ ಅಂದಿನಿಂದ ಇಂದಿನವರೆಗೂ ನೂರಾರು ರೋಗಿಗಳ ಸಹಾಯಕ್ಕೆ ಮುಂದಾಗಿದ್ದೇನೆ'' ಎನ್ನುತ್ತಾರೆ ಅಬ್ದುಲ್ ಮಜೀದ್.

ನೂರಾರು ರೋಗಿಗಳು ಬರುತ್ತಾರೆ: ಅಬ್ದುಲ್ ಮಜೀದ್ ಅವರ ಮೊಬೈಲ್ ಸಂಖ್ಯೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದ್ದು, ಪ್ರತಿನಿತ್ಯ ರೋಗಿಗಳು ಇವರನ್ನು ಸಂಪರ್ಕಿಸಿ, ಆಸ್ಪತ್ರೆಯ ಬಾಗಿಲು ಸೇರುತ್ತಾರೆ. ಇದುವರೆಗೂ ಸುಮಾರು 700ಕ್ಕೂ ಅಧಿಕ ರೋಗಿಗಳನ್ನು ಒಂದು ರೂಪಾಯಿ ಸಹ  ಪಡೆಯದೆ, ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟೇ ಅಲ್ಲದೆ, ಕೋವಿಡ್-19 ಸಂಬಂಧ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾದ 25 ಮಂದಿಗೂ ಅಧಿಕ ಜನರನ್ನು ಅಬ್ದುಲ್ ಮಜೀದ್ ಅವರು ಮನೆಗೆ ತಲುಪಿಸಿ, ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಪಿಪಿಇ ಕಿಟ್, ಮಾಸ್ಕ್: ಕೊರೋನ ಆರಂಭ ದಿನದಿಂದಲೂ ಪಿಪಿಇ ಕಿಟ್ ಹಾಗೂ ಎನ್-95 ಮಾಸ್ಕ್ ಅನ್ನು ಧರಿಸಿ, ಆಟೊ ಚಾಲನೆ ಮಾಡುವ ಮೂಲಕ ಅಬ್ದುಲ್ ಮಜೀದ್ ಗಮನ ಸೆಳೆದಿದ್ದರು. ಜತೆಗೆ, ಪ್ರತಿನಿತ್ಯ ತಮ್ಮ ಆಟೊ ರಿಕ್ಷಾ ಅನ್ನು ಸ್ಯಾನಿಟೈಸ್ ಮಾಡುತ್ತಾರೆ. ಆಟೊದಲ್ಲಿ ಪ್ರಯಾಣ ಬೆಳೆಸುವ ರೋಗಿಗಳಿಗೆ ಕೊರೋನ ಸೋಂಕು ಅಂಟಿಕೊಳ್ಳದಂತೆ ಎಚ್ಚರಿಯನ್ನು ವಹಿಸುತ್ತಾರೆ.

ಬೆಂಗಳೂರಿನಲ್ಲಿಯೇ ಕೊರೋನ ಸೋಂಕಿನ ಪ್ರಮಾಣ ಮಿತಿ ಮೀರಿದ್ದು, ಜನರು ಆರೋಗ್ಯ ಸೇವೆಗಳನ್ನು ಪಡೆಯಲು ಹರಸಾಹಸ ಪಡಬೇಕಿದೆ ಎನ್ನುವ ಪರಿಸ್ಥಿತಿಯ ನಡುವೆ ಉಚಿತ ಆಟೊ ಆ್ಯಂಬುಲೆನ್ಸ್ ಆರಂಭಿಸಿದ 70 ವರ್ಷದ ಅಬ್ದುಲ್ ಮಜೀದ್ ಅವರು, ಡಿಪ್ಲೋಮಾ ಕೋರ್ಸ್ ವ್ಯಾಸಂಗ ಮಾಡಿದ್ದು, ಹಲವು ಐಟಿ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು, ಇವರ ಸಮಾಜ ಸೇವೆಗೆ ಸಂಚಾರಿ ಪೊಲೀಸರಿಂದ ಅನುಮತಿ ದೊರೆತಿದ್ದು, ಇದಕ್ಕೆ ನಿರ್ಗಮಿತ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಹಾಯ ಮಾಡಿದ್ದರು.

ಸಹಾಯವೂ ಬೇಕಿದೆ

ಆರಂಭದಲ್ಲಿ ಅಬ್ದುಲ್ ಮಜೀದ್ ಅವರಿಗೆ ಕೆಲವರು ಆಟೊ ಗ್ಯಾಸ್ ಹಾಗೂ ಸ್ಯಾನಿಟೈಸ್ ಮಾಡಲು ಸಹಾಯ ಮಾಡಿದ್ದರು. ಆದರೆ, ಇದೀಗ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೋಗಿಗಳೇ ಸ್ವ ಇಚ್ಛೆಯಿಂದ ನೀಡುವ ಹಣದಿಂದ ಆಟೊಗೆ ಇಂಧನ ತುಂಬಿಸುತ್ತಾರೆ. ಹೀಗಾಗಿ, ದಾನಿಗಳು ಇವರಿಗೆ ಸಹಾಯ ಮಾಡಿದರೆ, ಮತ್ತಷ್ಟು ಕಾಲ ಆಟೊ ಆ್ಯಂಬುಲೆನ್ಸ್ ಸೇವೆಯಲ್ಲಿ ತೊಡಗಿಸಿಕೊಳ್ಳಲಿದೆ.

ಪೊಲೀಸರಿಂದಲೂ ಮಾಹಿತಿ, ನೀವೂ ಸಂಪರ್ಕಿಸಿ

ಬಹುತೇಕರು ಆ್ಯಂಬುಲೆನ್ಸ್ ಸೂಕ್ತ ಸಮಯಕ್ಕೆ ಬಂದಿಲ್ಲವೆಂದರೆ, ಪೊಲೀಸ್ ಸಹಾಯವಾಣಿಗೆ ಕರೆ ಮಾಡುತ್ತಾರೆ. ತದನಂತರ, ಅಲ್ಲಿನ ಪೊಲೀಸ್ ಸಿಬ್ಬಂದಿ ಅಬ್ದುಲ್ ಮಜೀದ್ ಅವರಿಗೆ ಕರೆ ಮಾಡಿ, ರೋಗಿಗಳ ವಿಳಾಸ ತಿಳಿಸುತ್ತಾರೆ. ಇನ್ನು, ತುರ್ತು ಆರೋಗ್ಯ ಸೇವೆ ಅಥವಾ ಆಸ್ಪತ್ರೆಗೆ ತೆರಳುವ ಆಸಕ್ತರು ಅಬ್ದುಲ್ ಮಜೀದ್ ಅವರನ್ನು( ಮೊಬೈಲ್ ಸಂಖ್ಯೆ 99869 03424) ಸಂಪರ್ಕಿಸಬಹುದು.

Writer - ಸಮೀರ್ ದಳಸನೂರು

contributor

Editor - ಸಮೀರ್ ದಳಸನೂರು

contributor

Similar News