ಶ್ವೇತಭವನದ ಬಳಿ ವ್ಯಕ್ತಿಯ ಗುಂಡಿಟ್ಟು ಹತ್ಯೆ: ಸುದ್ದಿಗೋಷ್ಠಿ ಮೊಟಕುಗೊಳಿಸಿದ ಟ್ರಂಪ್
ವಾಷಿಂಗ್ಟನ್, ಆ.11: ಶ್ವೇತಭವನದ ಬಳಿಕ ಸೀಕ್ರೆಟ್ ಸರ್ವಿಸ್ನವರು ವ್ಯಕ್ತಿಯನ್ನು ಗುಂಡಿಟ್ಟುಹತ್ಯೆಗೈದ ಬಳಿಕ ಅಮೆರಿಕದ ಸೀಕ್ರೆಟ್ ಸರ್ವಿಸ್ ಏಜೆಂಟ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುದ್ದಿಗೋಷ್ಠಿಯನ್ನು ಮೊಟಕುಗೊಳಿಸಿ ಬೆಂಗಾವಲೊಂದಿಗೆ ಒವಲ್ ಆಫೀಸ್ಗೆೆ ಕರೆದೊಯ್ದಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಘಟನೆಯ ಬಳಿಕ ಶ್ವೇತಭವನವನ್ನು ಲಾಕ್ಡೌನ್ ಮಾಡಲಾಗಿದೆ.
ಟ್ರಂಪ್ ಕೊರೋನ ವೈರಸ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲು ಬಯಸಿದ್ದರು. ವೈಟ್ಹೌಸ್ ಹೊರಗಡೆ ಗುಂಡಿನ ಹಾರಾಟ ನಡೆದಿದ್ದು,ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬ ವಿಚಾರ ತಿಳಿದ ತಕ್ಷಣ ಸುದ್ದಿಗೋಷ್ಠಿಯನ್ನು ಮೊಟಕುಗೊಳಿಸಿದರು.
ಗುಂಡೇಟಿಗೆ ಒಳಗಾಗಿರುವ ವ್ಯಕ್ತಿ ಹಾಗೂ ಸೀಕ್ರೆಟ್ ಸರ್ವಿಸ್ ಅಧಿಕಾರಿಯನ್ನು ಘಟನೆಯ ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಂಜೆ 5:55ಕ್ಕೆ ಡಿ.ಸಿ.ಅಗ್ನಿಶಾಮಕ ವಿಭಾಗವನ್ನು ಘಟನಾಸ್ಥಳಕ್ಕೆ ರವಾನಿಸಲಾಗಿತ್ತು.
ಸೀಕ್ರೆಟ್ ಸರ್ವಿಸ್ನಿಂದ ಸ್ವೀಕರಿಸಿದ ಮಾಹಿತಿಯ ಪ್ರಕಾರ ಅಧಿಕಾರಿಯು ವ್ಯಕ್ತಿಯ ದೇಹದ ಮೇಲ್ಭಾಗಕ್ಕೆ ಗುಂಡುಹೊಡೆದಿದ್ದಾರೆ ಎಂದು ಡಿಸಿ ಅಗ್ನಿಶಾಮಕ ವಕ್ತಾರ ಡೌಗ್ ಬ್ಯೂಕ್ಯಾನನ್ ತಿಳಿಸಿದ್ದಾರೆ.
ಸ್ವಲ್ಪ ಸಮಯ ಬಿಟ್ಟು ಸುದ್ದಿಗೋಷ್ಠಿ ಕೊಠಡಿಗೆ ವಾಪಸ್ ಬಂದ ಟ್ರಂಪ್ ಗುಂಡು ಹಾರಾಟದ ಕುರಿತು ಮಾತನಾಡಿದರು."ನನಗೆ ವ್ಯಕ್ತಿಯ ಕುರಿತು ಏನೂ ಗೊತ್ತಿಲ್ಲ. ಆದರೆ ಆತ ಶಸ್ತ್ರಾಸ್ತ್ರ ಹೊಂದಿದ್ದ ಎಂದು ಅರ್ಥಮಾಡಿಕೊಳ್ಳಬಲ್ಲೆ''ಎಂದು ಹೇಳಿದ್ದರು.
ಘಟನಾ ಸ್ಥಳದಲ್ಲಿ ಯಾವುದೇ ಅಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ತನಿಖೆಯ ಬಗ್ಗೆ ಗೊತ್ತಿರುವ ಇಬ್ಬರು ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ.