ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಆರೋಪ: ವಿಚಾರಣೆಗೆ ಹಾಜರಾದ ಇಂದ್ರಜಿತ್ ಲಂಕೇಶ್

Update: 2020-08-31 14:38 GMT

ಬೆಂಗಳೂರು, ಆ.31: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಆರೋಪ ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್, ಕೆಲವರ ಹೆಸರು ಉಲ್ಲೇಖಿಸಿ, ದಾಖಲೆ ಸಲ್ಲಿಕೆ ಮಾಡಿದ್ದೇನೆ ಎಂದು ಹೇಳಿಕೆ ನೀಡಿರುವುದು ಕುತೂಹಲ ಕೆರಳಿಸಿದೆ.

ಡ್ರಗ್ಸ್ ಆರೋಪ ಸಂಬಂಧ ಮಾಹಿತಿ ಹಂಚಿಕೊಳ್ಳುವ ಸಂಬಂಧ ನೀಡಿದ್ದ ನೋಟಿಸ್ ಅನ್ವಯ ಇಂದ್ರಜಿತ್ ಲಂಕೇಶ್, ಸೋಮವಾರ ಇಲ್ಲಿನ ಚಾಮರಾಜಪೇಟೆಯ ಸಿಸಿಬಿ ಕೇಂದ್ರ ಕಚೇರಿಗೆ ಲ್ಯಾಪ್‍ಟಾಪ್ ಸಹಿತ ಅಧಿಕಾರಗಳ ಮುಂದೆ ಹಾಜರಾದರು. ಸತತ ಎರಡು ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಅವರು ಕೆಲವರ ಹೆಸರು ಉಲ್ಲೇಖಿಸುವ ಜೊತೆಗೆ, ಕೆಲ ದಾಖಲೆಗಳನ್ನು ಸಲ್ಲಿಕೆ ಮಾಡಿದರು.

ವಿಚಾರಣೆ ಬಳಿಕ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್, ಸಿಸಿಬಿ ನೀಡಿದ ನೋಟಿಸ್ ಮೇರೆಗೆ ವಿಚಾರಣೆಗೆ ಹಾಜರಾದೆ. 10ರಿಂದ 15 ಜನರ ಹೆಸರು ಹೇಳಿದ್ದು, ಅಶ್ಲೀಲ ವಿಡಿಯೋ ಸಂದೇಶ ಹಾಗೂ ಕೆಲ ದಾಖಲೆಗಳನ್ನು ನೀಡಿದ್ದೇನೆ ಎಂದು ತಿಳಿಸಿದರು.

ಸದ್ಯ ನನಗೆ ಗೊತ್ತಿರುವ ಹಲವಾರು ಮಾಹಿತಿಗಳನ್ನು ಸಿಸಿಬಿ ಅಧಿಕಾರಿಗಳಿಗೆ ನೀಡಿದ್ದು, ಪೊಲೀಸರಿಗೆ ಕೂಡ ನಾನು ಕೊಟ್ಟ ದಾಖಲೆಗಳು ಉಪಯೋಗವಾಗಲಿದೆ ಎಂದ ಅವರು, ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಖ್ಯಾತ ನಟ-ನಟಿಯರ ಹೆಸರುಗಳನ್ನು ಇಲ್ಲಿ ಹೇಳಲು ಇಷ್ಟವಿಲ್ಲ ಎಂದು ನುಡಿದರು.

ವಿಚಾರಣೆಗೆ ಹಾಜರಾಗಿದ್ದು, ಸಾಮಾಜಿಕ ಕಳಕಳಿಯ ದೃಷ್ಟಿಯಿಂದ. ಇತ್ತೀಚೆಗೆ ಶಾಲಾ- ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಗೆ ಸಿಲುಕಿಕೊಳ್ಳುತ್ತಾರೆ. ಸಮಾಜದಲ್ಲಿ ಡ್ರಗ್ಸ್ ಎನ್ನುವ ಪಿಡುಗು ಯುವ ಜನರನ್ನು ಹಾಳು ಮಾಡಿದೆ ಎಂದರು.

ಈಗ ಚಿತ್ರರಂಗಕ್ಕೆ ಬರುವ ನಟ-ನಟಿಯರು ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗುತ್ತಾರೆ. ಇದು ನಿಜಕ್ಕೂ ಬೇಸರದ ಸಂಗತಿ. ಡ್ರಗ್ಸ್ ಪ್ರಕರಣದ ತನಿಖೆಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು, ಅರಿವು ಮತ್ತು ಹೆದರಿಕೆ ಇರಬೇಕು. ಎಲ್ಲಾ ವಿಚಾರ ಮಾಧ್ಯಮಗಳ ಮುಂದೆ ಮಾಹಿತಿ ನೀಡಿದರೆ ತನಿಖೆಗೆ ತೊಂದರೆ ಆಗಲಿದೆ ಎಂದು ಇಂದ್ರಜಿತ್ ಹೇಳಿದರು.

'ಸರ್ಜಾ ಹೇಳಿಕೆ ಹಿಂದಕ್ಕೆ'

ದಿವಗಂತ ಚಿರಂಜೀವಿ ಸರ್ಜಾ ವಿಚಾರದ ಬಗ್ಗೆ ಮಾತನಾಡಿದ್ದು, ಆ ವಿಚಾರವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ. ಮೃತರ ಬಗ್ಗೆ ಮಾತನಾಡುವುದು ಬೇಡ. ಚಿರಂಜೀವಿ ಇದ್ದಿದ್ದರೆ ನಟಿ ಮೇಘನಾ ರಾಜ್ ಖುಷಿಯಾಗಿ ಇರುತ್ತಿದ್ದರು ಎಂದು ಇಂದ್ರಜಿತ್ ನುಡಿದರು.

ರವಿ ಬೆಳಗೆರೆ ಹೇಳಿಕೆಗೆ ತೀರುಗೇಟು

ಕೆಲವರ ತಲೆಯಲ್ಲಿ ಬುದ್ಧಿ, ಕೂದಲು ಇಲ್ಲ ಎಂದು ಪರೋಕ್ಷವಾಗಿ ಇಂದ್ರಜಿತ್ ಕುರಿತು ವ್ಯಂಗ್ಯವಾಡಿದ್ದ ರವಿ ಬೆಳಗೆರೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೆಲವರಿಗೆ ಭಾಷೆ ಗೊತ್ತಿಲ್ಲ. ಅಂತವರಿಗೆ ನಾನು ಉತ್ತರ ಕೊಡಲ್ಲ. ಸುಪಾರಿ ಕೊಟ್ಟ ಪತ್ರಕರ್ತನ ಬಗ್ಗೆ ಮಾತನಾಡಲು ಇಷ್ಟವಿಲ್ಲ ಎಂದರು.

ಪ್ರಕರಣ ಸಂಬಂಧ ಇಂದ್ರಜಿತ್ ಲಂಕೇಶ್‍ಗೆ ನೋಟಿಸ್ ನೀಡಿದ್ದು, ಹಾಗಾಗಿ, ಸೋಮವಾರ ವಿಚಾರಣೆಗೆ ಹಾಜರಾಗಿ ಡ್ರಗ್ಸ್ ಮಾಫಿಯಾ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಸದ್ಯ ಅವರ ಹೇಳಿಕೆ ಮೇಲೆ ನಾವು ತನಿಖೆ ನಡೆಸುತ್ತೇವೆ. ಹಾಗೆಯೇ ಇಂದ್ರಜಿತ್‍ಗೆ ಮತ್ತೆ ನೋಟಿಸ್ ನೀಡಲ್ಲ. ನಮಗೆ ಬೇಕಾದ ಪೂರಕ ಮಾಹಿತಿ ಸಿಕ್ಕಿದೆ.

-ಸಂದೀಪ್ ಪಾಟೀಲ್, ಸಿಸಿಬಿ ಜಂಟಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News