ಸುರೇಶ್ ಅಂಗಡಿಯನ್ನು ತಾಯ್ನಾಡಲ್ಲಿ ಅಂತ್ಯಸಂಸ್ಕಾರ ಮಾಡಲು ಸರಕಾರಕ್ಕೆ ಸಾಧ್ಯವಾಗಲಿಲ್ಲ
ಬೆಳಗಾವಿ, ಅ.2: 'ಬೆಳಗಾವಿ ಹಾಗೂ ಉತ್ತರ ಕರ್ನಾಟಕದಲ್ಲಿ ಅನೇಕ ಮಂತ್ರಿಗಳು, ಶಾಸಕರು, ಸಂಸದರು ಇದ್ದರೂ ಪ್ರವಾಹದಿಂದ ನೊಂದಿರುವ ಜನರಿಗೆ ನೆರವಾಗಲು ಸಾಧ್ಯವಾಗಲಿಲ್ಲ ಎಂದರೆ, ಇದಕ್ಕೆ ಮತದಾರನೆ ಉತ್ತರ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದ ಈ ಭಾಗದ ಜನರ ಜೀವನ ಬೀದಿಗೆ ಬಿದ್ದಿದೆ. ತಮ್ಮದೇ ಸರಕಾರ, ಇಷ್ಟು ಜನ ಸಂಸದರು, ಮಂತ್ರಿಗಳು, ಶಾಸಕರು ಇದ್ದರೂ ಇಲ್ಲಿನ ಜನರಿಗೆ ಪರಿಹಾರ ಹಾಗೂ ನ್ಯಾಯ ಕೊಡಿಸಲು ಅವರು ವಿಫಲರಾಗಿದ್ದಾರೆ ಎಂದರೆ, ಇದಕ್ಕೆ ಈ ಭಾಗದ ಮತದಾರರೆ ಉತ್ತರ ಕೊಡಬೇಕು ಎಂದರು.
ಅಭ್ಯರ್ಥಿ ಕುರಿತು ಸಭೆ ನಡೆಸಿ ತೀರ್ಮಾನ: ಮುಂಬರುವ ಉಪಚುನಾವಣೆಗಳಿಗೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಚರ್ಚಿಸಲು ಇವತ್ತು ಸಂಜೆ ನಮ್ಮ ಎಲ್ಲ ನಾಯಕರು, ಶಾಸಕರು, ಜಿಲ್ಲಾ ಅಧ್ಯಕ್ಷರು, ಚುನಾಚಣೆಯಲ್ಲಿ ಸ್ಪರ್ಧೆ ಮಾಡಿದವರ ಸಭೆ ಕರೆದಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ನಂತರ ತೀರ್ಮಾನ ಮಾಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
ಸರಿಯಾದ ಅಂತ್ಯ ಸಂಸ್ಕಾರ ನೀಡಲಿಲ್ಲ: ನಮ್ಮ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರ ಪಾರ್ಥಿವ ಶರೀರವನ್ನು ದಿಲ್ಲಿಯಿಂದ ಇಲ್ಲಿಗೆ ತಂದು ದರ್ಶನಕ್ಕೆ ಅವಕಾಶ ನೀಡಿ ಅವರಿಗೆ ಇಲ್ಲಿ ಅಂತ್ಯಕ್ರಿಯೆ ಮಾಡಬಹುದಿತ್ತು. ಅವರು ಯಾಕೆ ಈ ರೀತಿ ಮಾಡಲಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಅಲ್ಲಿ ಏನೇನು ರಾಜಕಾರಣ ನಡೆದಿದೆ ಅಂತಾ ಅವರ ಕುಟುಂಬದವರೇ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿಯವರ ಕೈಯಲ್ಲಿ ನೊಂದ ಕುಟುಂಬ ಸದಸ್ಯರಿಗೆ, ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಿಕೊಡಲು ಸಾಧ್ಯವಾಗಲಿಲ್ಲ. ಇನ್ನು ಮುಂದೆ ಅದೇನು ನ್ಯಾಯ ಒದಗಿಸುತ್ತಾರೋ ನೋಡೋಣ. ಏಮ್ಸ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡಲಿಲ್ಲ ಎಂಬ ಆರೋಪದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು.
ಇಲ್ಲಿ ಮಿಲಿಟರಿ ಬೆಸ್ ಇದೆ. ಕೇಂದ್ರ ಸರಕಾರದ ಮಂತ್ರಿ ನಿಧನರಾದ ಸಮಯದಲ್ಲಿ ಅವರ ದೇಹವನ್ನು ಸರಿಯಾಗಿ ಪ್ಯಾಕ್ ಮಾಡಿ ಇಲ್ಲಿಗೆ ತಂದು ಅವರ ತಾಯ್ನಾಡಿನ ಮಣ್ಣಲ್ಲಿ ಅಂತ್ಯ ಸಂಸ್ಕಾರ ಮಾಡಲು ರಾಜ್ಯ ಸರಕಾರಕ್ಕಾಗಲಿ, ಕೇಂದ್ರ ಸರಕಾರಕ್ಕಾಗಲಿ ಸಾಧ್ಯವಾಗಲಿಲ್ಲ. ದಿಲ್ಲಿಯಲ್ಲಿ ಅವರ ಅಂತ್ಯಕ್ರಿಯೆ ಹೇಗೆ ಮಾಡಿದರು ಎಂದು ನಾವೆಲ್ಲ ವಿಡಿಯೋದಲ್ಲಿ ನೋಡಿದ್ದೇವೆ. ಸರಕಾರದ ಈ ನಡೆ ಬಗ್ಗೆ ಜನ, ಅವರ ಆತ್ಮ, ಅವರ ಕುಟುಂಬ ತೀರ್ಮಾನ ಮಾಡಲಿ ಎಂದು ವಾಗ್ದಾಳಿ ನಡೆಸಿದರು.
ಯೋಗಿ ಸರಕಾರ ದೇಶಕ್ಕೆ ರೋಗ ತಂದುಕೊಟ್ಟಿದೆ: ಇಡೀ ದೇಶದ ಗೌರವ, ಸ್ವಾಭಿಮಾನ, ನಮ್ಮ ಸಮುದಾಯದ, ಎಲ್ಲ ವರ್ಗದ ಜನರಿಗೆ ವಿಶ್ವಮಟ್ಟದಲ್ಲಿ ಕಪ್ಪುಚುಕ್ಕೆಯಾಗಿದೆ. ಇದು ಕೇವಲ ಒಂದು ಹೆಣ್ಣಿಗೆ ಆಗಿರುವ ಅನ್ಯಾಯದ ಪ್ರಶ್ನೆ ಅಲ್ಲ. ಇಡೀ ಮನುಕುಲಕ್ಕೆ ಆಗಿರುವ ದೊಡ್ಡ ಅವಮಾನ ಎಂದು ಶಿವಕುಮಾರ್ ಹೇಳಿದರು.