ಕೋವಿಡ್ ಸವಾಲಿನ ಸಂದರ್ಭದಲ್ಲಿ ಗಾಂಧೀಜಿಯ ಸ್ವದೇಶಿ ಪರಿಕಲ್ಪನೆ ನಮಗೆ ದಾರಿದೀಪ: ಸಚಿವ ಡಾ.ಸುಧಾಕರ್

Update: 2020-10-02 16:13 GMT

ಬೆಂಗಳೂರು, ಅ. 2: ಮಹಾತ್ಮ ಗಾಂಧೀಜಿ ಅವರ ಸ್ವದೇಶಿ ಪರಿಕಲ್ಪನೆ ಕೋವಿಡ್-19ಯೊಂದಿಗಿನ ಪ್ರಸ್ತುತ ಸಂಘರ್ಷ ಸವಾಲಿನ ಸಂದರ್ಭದಲ್ಲಿ ನಮಗೆ ದಾರಿದೀಪವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಗಾಂಧಿ-ಕಿಂಗ್ ಫೌಂಡೇಷನ್ ಗಾಂಧಿಜಿ ಅವರ 150ನೆ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಾಂಧಿ ಬದುಕಿನ ಉದ್ದಕ್ಕೂ ಸ್ವಾಲಂಬನೆ ಹಾಗೂ ಆದರ್ಶದ ಜೀವನ ನಡೆಸಿ ಮಾದರಿಯಾಗಿದ್ದಾರೆ. ಸದ್ಯದ ಕೋವಿಡ್ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಅವರ ಸರಳ, ಸ್ವಾವಲಂಬಿ ಬದುಕು ಪರಿಹಾರ ರೂಪದಲ್ಲಿ ಗೋಚರವಾಗುತ್ತಿವೆ ಎಂದರು.

ಬಡತನ, ಅಜ್ಞಾನ, ಅಸಹಿಷ್ಣುತೆ ಮತ್ತು ರೋಗಗಳಿಂದ ಜನರನ್ನು ಮುಕ್ತಗೊಳಿಸುವುದೇ ನಿಜವಾದ ಸ್ವರಾಜ್ಯ ಎಂಬುದು ಮಹಾತ್ಮರ ಸಂದೇಶವಾಗಿತ್ತು. ಇದನ್ನು ಯುವ ಜನತೆ, ವಿದ್ಯಾರ್ಥಿಗಳು, ಶಿಕ್ಷಕರು, ನೀತಿನಿರೂಪಕರ ಸಹಿತ ಎಲ್ಲ ವರ್ಗದ ಜನ ಅರಿತುಕೊಳ್ಳುವ ಅವಶ್ಯಕತೆ ಇದೆ. ಜೊತೆಗೆ ಪರಸ್ಪರ ಪ್ರೀತಿ ಮತ್ತು ಗೌರವದಿಂದ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ ಎಂದರು.

ಗಾಂಧೀಜಿ ಅವರ ವಿಚಾರಗಳು ಇಂದಿಗೂ ಪ್ರಸ್ತುತ. ರಾಜಕಾರಣದ ಆಚೆಗೂ ಅವರ ಮೌಲ್ಯಗಳು, ವಿಚಾರಧಾರೆಗಳು ಭಾರತೀಯ ನೆಲೆಗಟ್ಟಿನಲ್ಲಿ ಹಾಸುಹೊಕ್ಕಾಗಿವೆ ಮತ್ತು ಸದಾಕಾಲ ನಮ್ಮ ಅಂತಃಸಾಕ್ಷಿಯ ಭಾಗವಾಗಿ ಮುಂದುವರಿಯುತ್ತವೆ ಎಂದ ಅವರು, ಆದರ್ಶಯುತ ಮೌಲ್ಯಗಳ ಮೂಲಕ ಗಾಂಧಿ ಅವರು ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರ ಜೀವನ ಮತ್ತು ವಿಚಾರಧಾರೆ ಶಾಶ್ವತವಾಗಿ ಜನಮಾನಸದಲ್ಲಿ ನೆಲೆಯೂರಿರುತ್ತದೆ ಎಂಬ ನಂಬಿಕೆ ತಮ್ಮದು ಎಂದರು.

ಗಾಂಧೀಜಿ ಮತ್ತು ಅವರ ಅಹಿಂಸಾ ತತ್ವಗಳು ಮಾರ್ಟಿನ್ ಲೂಥರ್ ಕಿಂಗ್ ಅವರ ಮೇಲೆ ಗಾಢವಾದ ಪ್ರಭಾವ ಬೀರಿದ್ದವು. ಇದನ್ನು ಕಿಂಗ್ ಅವರೇ ಅನೇಕ ಸಂದರ್ಶನಗಳಲ್ಲಿ ಉಲ್ಲೇಖಿಸಿದ್ದರು. ಹೀಗಾಗಿ ಒಂದಲ್ಲಾ ಮತ್ತೊಂದು ರೂಪದಲ್ಲಿ ನಾವೆಲ್ಲರೂ ಅವರ ಬದುಕು ಹಾಗೂ ಪ್ರತಿಪಾದಿಸಿದ ಮೌಲ್ಯಗಳ ಜೊತೆಗೆ ಮುಖಾಮುಖಿಯಾಗಿ ಮುನ್ನಡೆದಿದ್ದೇವೆ ಎಂದರು.

ನೊಬೆಲ್ ಶಾಂತಿ ಪುರಸ್ಕೃತ ಡಾ.ಇರಾ ಆಲ್ಪೆಂಡ್, ನೊಬೆಲ್ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಎಕ್ಟೆರಿನಾ ಜಗ್ಲಾಡಿನ, ಹೈದರಾಬಾದ್ ವಿವಿ ಉಪಕುಲಪತಿ ಪ್ರೊ.ಅಪ್ಪಾರಾವ್, ರಾಜೀವ್‍ ಗಾಂಧಿ ವಿವಿ ಪ್ರೊ.ಸಾಕೇತ್ ಕುಶ್ಹಾ, ಗುಜರಾತ್ ವಿದ್ಯಾಪೀಠದ ಉಪಕುಲಪತಿ ಪ್ರೊ. ಅನಾಮಿಕ್ ಶ್ಹಾ ಹಾಗೂ ಗಾಂಧಿ-ಕಿಂಗ್ ಫೌಂಡೇಷನ್ ಪದಾಧಿಕಾರಿಗಳು ಸಂವಾದದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News