ಬೆಂಗಳೂರು ವಿವಿ ಅರಣ್ಯ ಭೂಮಿ ನಾಶ: ಡಾಕ್ಟರೇಟ್ ವಾಪಸ್ ನೀಡಿದ ಪರಿಸರವಾದಿ ಯಲ್ಲಪ್ಪ ರೆಡ್ಡಿ
ಬೆಂಗಳೂರು, ಅ.3: ಬೆಂಗಳೂರು ವಿಶ್ವವಿದ್ಯಾಲಯದ ಜಾಗದಲ್ಲಿ ಯೋಗ ವಿವಿ, ಸೆಂಟ್ರಲ್ ವಿವಿ, ನ್ಯಾಕ್ ಸಂಸ್ಥೆ, ಸಿಬಿಎಸ್ಸಿ ಸಂಸ್ಥೆಗಳಿಗೆ ಭೂಮಿ ನೀಡಿರುವ ಕಾರಣ ಈಗಾಗಲೇ ಪರಿಸರವಾದಿಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಈ ನಡುವೆ ಖ್ಯಾತ ಪರಿಸರವಾದಿ ಯಲ್ಲಪ್ಪ ರೆಡ್ಡಿ ತಮ್ಮ ಡಾಕ್ಟರೇಟ್ ವಾಪಸ್ ನೀಡಿ ಆಕ್ರೋಶ ಹೊರಹಾಕಿದ್ದಾರೆ.
ಕಳೆದ 30 ವರ್ಷಗಳಿಂದ ಸಾರ್ವಜನಿಕರು, ಪರಿಸರ ತಜ್ಞರು, ಎನ್ಎಸ್ಎಸ್ ವಿದ್ಯಾರ್ಥಿಗಳ ಪರಿಶ್ರಮದಿಂದ ಜಾಗವನ್ನು ದಟ್ಟ ಅರಣ್ಯವಾಗಿ ಅಭಿವೃದ್ಧಿ ಮಾಡಲಾಗಿದೆ. ಇದೀಗ ಅದನ್ನು ನಾಶ ಮಾಡಲು ಹೊರಟಿರುವುದಕ್ಕೆ ಪರಿಸರವಾದಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.
ಯಲ್ಲಪ್ಪ ರೆಡ್ಡಿಯವರ ಪರಿಸರ ಕಾಳಜಿ ಹಾಗೂ 35 ವರ್ಷಗಳ ನಿರಂತರ ಸಂಶೋಧನೆಗೆ ಬೆಂಗಳೂರು ವಿವಿ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಇದೀಗ ಬಯೋ ಪಾರ್ಕ್ ನಾಶ ಮಾಡಿ ಅರಣ್ಯ ಪ್ರದೇಶವನ್ನು ಖಾಸಗಿಯವರಿಗೆ ಪರಭಾರೆ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ತಮ್ಮ ಡಾಕ್ಟರೇಟ್ ವಾಪಸ್ ನೀಡಿ ಆಕ್ರೋಶ ಹೊರಹಾಕಿದ್ದಾರೆ.