ಪಕ್ಷಕ್ಕಾಗಿ ದುಡಿಯುವವರಿಗೆ ಸೂಕ್ತ ಸ್ಥಾನಮಾನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

Update: 2020-10-04 12:38 GMT

ಬೆಂಗಳೂರು, ಅ.4: ಯಾರು ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತಾರೋ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಪಕ್ಷ ಹೊಸಬರು ಹಳಬರು ಎಂದು ನೋಡುವುದಿಲ್ಲ. ಕಾಂಗ್ರೆಸ್ ಅಷ್ಟೇ ಮುಖ್ಯ. ಎಲ್ಲರನ್ನೂ ಸಂಘಟನೆಗೆ ಬಳಸಿಕೊಳ್ಳುತ್ತೇವೆ. ಇಡೀ ರಾಜ್ಯ ಉಪಚುನಾವಣೆ ಫಲಿತಾಂಶ ನೋಡುತ್ತಿದೆ. ಯಾರು ಪಕ್ಷಕ್ಕೆ ದುಡಿಯುತ್ತಾರೋ ಅವರಿಗೆ ಸೂಕ್ತ ಸ್ಥಾನಮಾನ, ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ಅವಕಾಶ ನೀಡಲಾಗುವುದು ಎಂದರು.

ಉಪಚುನಾವಣೆ ಹಿನ್ನೆಲೆ ನೂರಾರು ಜನ ಮುಖಂಡರು ಪಕ್ಷ ಸೇರ್ಪಡೆ ಆಗಿದ್ದಾರೆ. ಇವರ ಹಿಂದೆ ಸಾವಿರಾರು ಜನ ಪಕ್ಷ ಸೇರ್ಪಡೆ ಆಗುತ್ತಾರೆ. ಇವರ ಸೇರ್ಪಡೆ ಪಕ್ಷದ ಶಕ್ತಿ ಮತ್ತಷ್ಟು ಜಾಸ್ತಿ ಮಾಡಿದೆ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಯಾರೇ ಬಂದರೂ ಅವರನ್ನ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದರು.

ರವಿವಾರವೇ ದಿಲ್ಲಿಗೆ ಅಭ್ಯರ್ಥಿ ಪಟ್ಟಿಯನ್ನು ಶಿಫಾರಸು ಮಾಡುತ್ತೇವೆ. ನಾವು ಟಿಕೆಟ್ ಕೊಡಲ್ಲ. ಹೈಕಮಾಂಡ್ ಟಿಕೆಟ್ ಪ್ರಕಟಿಸುತ್ತದೆ. ಶಿರಾ, ರಾಜರಾಜೇಶ್ವರಿ ನಗರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಟಿಕೆಟ್ ಅಂತಿಮ ಆಗುತ್ತದೆ. ಶಿರಾ ಕ್ಷೇತ್ರದಲ್ಲಿ ಈ ಹಿಂದೆ ಜಯಚಂದ್ರ 10 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಇಡೀ ಜಿಲ್ಲೆಯ ನಾಯಕರು ಒಂದಾಗಿದ್ದಾರೆ. ರಾಜ್ಯ ಸರಕಾರದ ಕಾರ್ಯಕ್ರಮ ಮತ್ತು ಆಗುತ್ತಿರುವ ಬೆಳವಣಿಗೆ ನೋಡಿದ್ದೇವೆ. ಮುಂದೆ ಕಾಂಗ್ರೆಸ್ ಮಾತ್ರ ಅನಿವಾರ್ಯ ಎಂದು ಶಿರಾ ತಾಲೂಕಿನ ಹಲವು ಮುಖಂಡರು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ ಎಂದು ತಿಳಿಸಿದರು.

ಪ್ರತಿಭಟನೆ: ಉತ್ತರ ಪ್ರದೇಶದ ಅತ್ಯಾಚಾರ ಪ್ರಕರಣದ ವಿರುದ್ಧ ದೇಶದ ಜನರು ಪ್ರತಿಭಟನೆ ನಡೆಸಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯನ್ನು ನಡೆಸಿಕೊಂಡ ರೀತಿ ಎಲ್ಲರಿಗೂ ಗೊತ್ತಿದೆ. ನಿರ್ಭಯಾ ಪ್ರಕರಣದಲ್ಲಿ ಪ್ರಧಾನಿಯೇ ಮುಂದೆ ನಿಂತು ಕರೆಯಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಅವರ ತಂದೆ ತಾಯಿಗೂ ನೋಡಲು ಅವಕಾಶ ನೀಡಿಲ್ಲ. ಇದರಿಂದ ನಮ್ಮ ದೇಶಕ್ಕೆ ಕಳಂಕ ಬಂದಿದೆ. ಇದರ ವಿರುದ್ಧ ರಾಜ್ಯಾದ್ಯಂತ ಅ.5ರ ಸೋಮವಾರ ಪ್ರತಿಭಟನೆ ನಡೆಸಲಾಗುವುದು ಎಂದು ಡಿ.ಕೆ ಶಿವಕುಮಾರ್ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News