×
Ad

ಬೆಂಗಳೂರು ವಿವಿ ಆವರಣದಲ್ಲಿ ಯೋಗ ವಿವಿಗೆ ಭೂಮಿ ನೀಡುವ ನಿರ್ಧಾರ ಹಿಂಪಡೆಯಲು ಎಚ್‍ಡಿಕೆ ಆಗ್ರಹ

Update: 2020-10-04 20:11 IST

ಬೆಂಗಳೂರು, ಅ. 4: `ಜೀವವೈವಿಧ್ಯದ ತಾಣವಾಗಿರುವ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಒಟ್ಟು 32 ಎಕರೆ ಪ್ರದೇಶವನ್ನು ಯೋಗ ವಿ.ವಿ ಮತ್ತು ಇತರೆ ಎರಡು ಸಂಸ್ಥೆಗಳಿಗೆ ನೀಡಿರುವ ಸರಕಾರದ ನಿರ್ಧಾರವನ್ನು ತಕ್ಷಣವೇ ವಾಪಸ್ ಪಡೆಯಬೇಕು' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಸುಮಾರು ಎರಡು ದಶಕಗಳಿಂದ ಪರಿಸರ ತಜ್ಞರು ಶ್ರಮವಹಿಸಿ ಬೆಳೆಸಿದ ಈ ತಾಣವನ್ನು ಸರಕಾರ ಯಾವುದೇ ಸಮಾಲೋಚನೆ ನಡೆಸದೆ ಏಕಾಏಕಿ ಜೀವವೈವಿಧ್ಯ ತಾಣಕ್ಕೆ ಕುತ್ತು ತರುವ ನಿರ್ಧಾರ ಕೈಗೊಂಡಿರುವುದು ತೀವ್ರ ಅಪಾಯಕಾರಿ. ಹಿರಿಯ ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಅವರು ತಮಗೆ ಸರಕಾರ ನೀಡಿದ್ದ `ಗೌರವ ಡಾಕ್ಟರೇಟ್' ಹಿಂತಿರುಗಿಸುವ ಮೂಲಕ ತಮ್ಮ ಸಾತ್ವಿಕ ಸಿಟ್ಟನ್ನು ಪ್ರಕಟಿಸಿದ್ದಾರೆ. ಇದಕ್ಕೆ ಪರಿಸರ ಪ್ರೇಮಿಗಳು ಬೆಂಬಲ ಸೂಚಿಸಿದ್ದಾರೆ' ಎಂದು ತಿಳಿಸಿದ್ದಾರೆ.

'ಯೋಗ ವಿ.ವಿ.ಗೆ 15 ಎಕರೆ, ಗುಲ್ಬರ್ಗಾ ವಿ.ವಿ.ಗೆ 15 ಎಕರೆ, ಸಿಬಿಎಸ್‍ಸಿ ದಕ್ಷಿಣ ಭಾರತದ ಕಚೇರಿಗೆ 2 ಎಕರೆ ಸೇರಿದಂತೆ ಒಟ್ಟು 32 ಎಕರೆಯನ್ನು ನೀಡಿರುವ ಕ್ರಮದಿಂದ ಬೆಂಗಳೂರು ವಿವಿ ಆವರಣ ಕಾಂಕ್ರೀಟ್ ಕಾಡಾಗಲಿದೆ. ಈ ಸಂಸ್ಥೆಗಳಿಗೆ ಬೇರೆ ಕಡೆ ಸ್ಥಳ ನೀಡುವ ಮೂಲಕ ಈ ಜೀವವೈವಿಧ್ಯ ತಾಣವನ್ನು ಸರಕಾರ ಉಳಿಸಬೇಕು. ಬೆಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ 20 ವರ್ಷಗಳಲ್ಲಿ ನಿರ್ಮಾಣಗೊಂಡ ಜೀವವೈವಿಧ್ಯ ವನದ ನಡುವೆ ಮೂರು ಸಂಸ್ಥೆಗಳಿಗೆ ಭೂಮಿ ನೀಡಲು ಮುಂದಾಗಿರುವ ವಿ.ವಿ ಮತ್ತು ಸರಕಾರದ ಕ್ರಮ ಖಂಡನೀಯ. ಇದರಿಂದ `ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ' ಎಂಬಂತೆ ಇಡೀ ಸಸ್ಯ ಸಂಪತ್ತು ನಾಶವಾಗಲಿದೆ' ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

`ಹಿಂದೆ ಉಪಕುಲಪತಿಗಳಾಗಿದ್ದ ಡಾ.ಕೆ.ಸಿದ್ದಪ್ಪನವರು ಇದೊಂದು ಬಯಲು ಪ್ರಯೋಗಾಲಯವಾಗಲಿದೆ ಎಂದು ನಿರೀಕ್ಷಿಸಿ ಜೀವವೈವಿಧ್ಯವನಕ್ಕೆ ಚಾಲನೆ ನೀಡಿದ್ದರು. ಅಂತೆಯೇ ಇದೀಗ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೂಗರ್ಭಶಾಸ್ತ್ರ, ಪರಿಸರ ವಿಜ್ಞಾನ, ಸಾಮಾಜಿಕ ವಿಜ್ಞಾನಗಳ ವಿದ್ಯಾರ್ಥಿಗಳಿಗೆ ಇದೊಂದು ಬಯಲು ಪ್ರಯೋಗಾಲಯವಾಗಿ ನೂರಾರು ಸಂಶೋಧನೆಗಳು ನಡೆಯುತ್ತಿವೆ. ಇಂತಹ ತಾಣವನ್ನು ಧ್ವಂಸ ಮಾಡಬಾರದು. ಮುಂದಿನ ಪೀಳಿಗೆಗೆ ಉಳಿಸಬೇಕು. ಬೆಳೆಸಬೇಕು' ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News