ಮಕ್ಕಳ ಸುರಕ್ಷತೆ, ಆರೋಗ್ಯದ ದೃಷ್ಟಿಯಿಂದ ತೀರ್ಮಾನ: ಸಚಿವ ಶ್ರೀರಾಮುಲು

Update: 2020-10-06 13:04 GMT

ಬೆಂಗಳೂರು, ಅ.6: ಕೇಂದ್ರ ಸರಕಾರವು ಶಾಲೆಗಳನ್ನು ತೆರೆಯಲು ಸೆ.30ರಂದು ಆದೇಶ ಹೊರಡಿಸಿದೆ. ಇದರ ಪ್ರಕಾರ ಅ.15ರಿಂದ ಶಾಲಾ-ಕಾಲೇಜುಗಳನ್ನು ತೆರೆಯಲು ರಾಜ್ಯ ಸರಕಾರಗಳಿಗೆ ಅಧಿಕಾರ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು 3 ವಿಷಯಗಳ ಕುರಿತು ಆರೋಗ್ಯ ಇಲಾಖೆಯ ಸಲಹೆ-ಸೂಚನೆಗಳನ್ನು ಕೇಳಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಮಂಗಳವಾರ ನಗರದ ಅರಮನೆ ರಸ್ತೆಯಲ್ಲಿರುವ ಔಷಧ ನಿಯಂತ್ರಕರ ಕಚೇರಿಯಲ್ಲಿ ಶಿಕ್ಷಣ ಸಚಿವರು, ಅಧಿಕಾರಿಗಳು, ವೈದ್ಯರು ಮತ್ತು ತಜ್ಞರ ಜತೆ ವರ್ಚುವಲ್ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಎಲ್‍ಕೆಜಿ-ಪಿಯುಸಿ ತನಕ ಯಾವಾಗ ತರಗತಿಗಳನ್ನು ಪ್ರಾರಂಭಿಸಬಹುದು, ಒಂದು ವೇಳೆ ಶಾಲೆ ಆರಂಭ ಮಾಡಿದಲ್ಲಿ ಯಾವ ತರಗತಿಗಳನ್ನು ನಾವು ಮೊದಲು ಪ್ರಾರಂಭಿಸಬಹುದು ಹಾಗೂ ಸಮುದಾಯ ಜನಪ್ರತಿನಿಧಿಗಳಿಂದ ಯಾವ ರೀತಿಯಿಂದ ಸಹಕಾರ ನಿರೀಕ್ಷಿಸಬಹುದು ಎಂದು ಶಿಕ್ಷಣ ಇಲಾಖೆ ಸಲಹೆ ಕೇಳಿದೆ ಎಂದು ಅವರು ಹೇಳಿದರು.

ಒಂದೆಡೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ, ಮತ್ತೊಂದೆಡೆ ಮಕ್ಕಳ ಕುರಿತ ವಿಷಯ ಆಗಿರುವುದರಿಂದ ಇದು ತುಂಬಾ ಸೂಕ್ಷ್ಮ ವಿಷಯವಾಗಿದೆ. ಆದುದರಿಂದ, ಎಲ್ಲ ಆಯಾಮಗಳಲ್ಲಿ ಸಮಾಲೋಚನೆ ಮಾಡಲಾಗಿದೆ. ಸಾಧಕ-ಬಾಧಕ ಅಂಶಗಳನ್ನ ಚರ್ಚಿಸಿದ್ದೇವೆ. ತಜ್ಞರ ಜತೆ ಸಭೆ ಹಾಗೂ ವಿಸ್ತೃತ ಅಧ್ಯಯನದ ನಂತರ ನಮ್ಮ ಇಲಾಖೆ ಶಿಕ್ಷಣ ಇಲಾಖೆಗೆ ವಿಸ್ತೃತ ವರದಿ ಸಲ್ಲಿಸಲಿದೆ ಎಂದು ಶ್ರೀರಾಮುಲು ತಿಳಿಸಿದರು.

ಅಲ್ಲದೆ, ಮಕ್ಕಳ-ಪೋಷಕರ-ಶಿಕ್ಷಕರ ಸುರಕ್ಷತೆ, ಆರೋಗ್ಯ ನಮ್ಮ ಸರಕಾರದ ಆದ್ಯತೆ. ಈ ವಿಷಯದಲ್ಲಿ ಯಾವುದೆ ರಾಜಿ ಇಲ್ಲ. ಯಾವುದೆ ನಿರ್ಧಾರ ಕೈಗೊಂಡರು ಮಕ್ಕಳ ಸುರಕ್ಷತೆ, ಆರೋಗ್ಯದ ದೃಷ್ಟಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಮಕ್ಕಳ ಸುರಕ್ಷತೆ, ಆರೋಗ್ಯ ಮತ್ತು ಶಿಕ್ಷಣ ಎರಡನ್ನು ಮನಸ್ಸಿನಲ್ಲಿಟ್ಟುಕೊಂಡು ನಿಧಾರ ಮಾಡುತ್ತೇವೆ ಎಂದು ಶ್ರೀರಾಮುಲು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News