ಆರ್.ಆರ್.ನಗರ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪರ ಅಕ್ಕೈ ಪದ್ಮಶಾಲಿ ತಂಡ ಪ್ರಚಾರ

Update: 2020-10-16 12:30 GMT
ಕುಸುಮಾ- ಅಕ್ಕೈ ಪದ್ಮಶಾಲಿ

ಬೆಂಗಳೂರು, ಅ.16: ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್.ಕುಸುಮಾ ಪರ ಲೈಂಗಿಕ ಅಲ್ಪಸಂಖ್ಯಾತ ಸಂಘಟನೆಯ ಕಾರ್ಯಕರ್ತೆ ಹಾಗೂ ಕಾಂಗ್ರೆಸ್ ಮುಖಂಡರಾದ ಅಕ್ಕೈ ಪದ್ಮಶಾಲಿ ಮನೆ ಮನೆಗೆ ತೆರಳಿ ಪ್ರಚಾರ ಆರಂಭಿಸಿದ್ದಾರೆ.

ಕಳೆದ ತಿಂಗಳು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದ ಅಕ್ಕೈ ಅವರು ಸಮಾಜದ ಮುಖ್ಯವಾಹಿನಿಗೆ ಬಂದ ಮೊದಲ ಲೈಂಗಿಕ ಅಲ್ಪಸಂಖ್ಯಾತರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸುಮಾರು 50 ಮಂದಿಯೊಂದಿಗೆ ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಆರ್‍ಆರ್ ನಗರ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಸದಸ್ಯರೊಂದಿಗೆ ಪ್ರಚಾರ ಮಾಡುವಂತೆ ನಗರದ ಶಾಸಕರು ತಮಗೆ ಟಾಸ್ಕ್ ನೀಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕುಸುಮಾ ಅವರು ನಾಮಪತ್ರ ಸಲ್ಲಿಸುವ ವೇಳೆಯೂ ನಾನು ಅವರೊಂದಿಗಿದ್ದೆ. ಬೈಯ್ಯಪ್ಪನಹಳ್ಳಿಯಲ್ಲಿ ವಾಸವಿರುವ ನಾನು ಬೆಳಗ್ಗೆ 10 ಗಂಟೆಗೆ ಪ್ರಚಾರ ಆರಂಭಿಸಬೇಕು, ಹೀಗಾಗಿ ನಾನು ಕೆಲ ದಿನ ನನ್ನ ದ್ವಿಚಕ್ರ ವಾಹನದಲ್ಲಿ ಬರುತ್ತೇನೆ, ಇಲ್ಲದಿದ್ದರೆ ಆರ್‍ಆರ್ ನಗರಕ್ಕೆ ಮೆಟ್ರೋದಲ್ಲಿ ಬಂದು ಪ್ರಚಾರ ಆರಂಭಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಕೆಲವು ಕಾಂಗ್ರೆಸ್ ಶಾಸಕರು ಮತ್ತು ಮುಖಂಡರ ತಂಡದೊಂದಿಗೆ ನಾವು ಸೇರಿಕೊಂಡು ಪ್ರಚಾರ ಮಾಡುತ್ತೇವೆ, ನಮ್ಮ ಸಮುದಾಯದ ಸುಮಾರು 500 ಮತಗಳು ಆರ್‍ಆರ್ ನಗರದಲ್ಲಿವೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಕ್ಕೈ ಪದ್ಮಶಾಲಿ ಅವರು ಪ್ರಚಾರ ಮಾಡುತ್ತಿರುವುದು, ಕುಸುಮಾ ಅವರಿಗೆ ಏಕೆ ಮತ ಹಾಕಬೇಕು ಎಂದು ನಾನು ಜನರಿಗೆ ವಿವರಿಸುತ್ತೇನೆ, ವಿದ್ಯಾವಂತೆಯಾಗಿರುವ ಆಕೆಗೆ ಒಂದು ಅವಕಾಶ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡುತ್ತೇನೆ, ಇದೊಂದು ಉತ್ತಮ ಅನುಭವ ಎಂದು ಹೇಳಿದ್ದಾರೆ. ಪಕ್ಷದಿಂದ ಪಕ್ಷಕ್ಕೆ ಜಿಗಿದು ಹೇಗೆ ಚುನಾವಣೆಗೆ ಸುಮ್ಮನೆ ಹಣ ವ್ಯರ್ಥ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಗೆ ತಿಳಿಸಬಯಸುತ್ತೇನೆ ಎಂದಿದ್ದಾರೆ.

ರಾಜ್ಯಸಭೆ ಅಥವಾ ವಿಧಾನ ಪರಿಷತ್‍ನಲ್ಲಿ ಅಕ್ಕೈಗೆ ಸ್ಥಾನ ಕಲ್ಪಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News