ಲಕ್ಷ್ಮಣ ಕಾಂಚನ್

Update: 2020-10-19 13:03 GMT

ಉಡುಪಿ, ಅ.19: ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಲಕ್ಷ್ಮಣ ಕಾಂಚನ್, ಸೋಮವಾರ ನಿಧನರಾದರು. ಇವರಿಗೆ 70 ವರ್ಷ ವಯಸ್ಸಾಗಿತ್ತು. ಇವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಉಡುಪಿ ಜಿಲ್ಲೆಯ ಮಣೂರಿನವರಾದ ಕಾಂಚನ್ ತಮ್ಮ 15ನೇ ವಯಸ್ಸಿಗೆ ಅಮೃತೇಶ್ವರೀ ಮೇಳದಲ್ಲಿ ಕಲಾವಿದರಾಗಿ ವೃತ್ತಿ ಬದುಕು ಆರಂಭಿಸಿದರು. ಅವರು ಸಾಲಿಗ್ರಾಮ, ಕಮಲಶಿಲೆ, ಸೌಕೂರು, ಗೋಳಿಗರಡಿ, ಕಳವಾಡಿ, ಪೆರ್ಡೂರು, ಹಾಲಾಡಿ, ಮಡಾಮಕ್ಕಿ, ಬಗ್ವಾಡಿ, ಮೇಗರವಳ್ಳಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಒಟ್ಟು 51 ವರ್ಷಗಳ ಕಾಲ ಸುದೀರ್ಘ ಕಲಾಸೇವೆ ಗೈದ ಹಿರಿಮೆಗೆ ಇವರಿಗಿದ್ದು, ಕಳೆದ 25 ವರ್ಷಗಳಿಂದ ಮಳೆಗಾಲದಲ್ಲಿ ಅಮೃತೇಶ್ವರೀ ಪ್ರವಾಸಿ ಯಕ್ಷಗಾನ ಮಂಡಳಿಯ ಖಾಯಂ ಕಲಾವಿದರಾಗಿ ಕರ್ನಾಟಕ ಮತ್ತು ಹೊರಾಜ್ಯಗಳಲ್ಲಿ ಕಲಾಪ್ರದರ್ಶನ ನೀಡಿದ್ದಾರೆ.

ಪೌರಾಣಿಕ ಪ್ರಸಂಗಗಳಲ್ಲಿ ಲಕ್ಷ್ಮಣ ಕಾಂಚನ್‌ರ ಲವ-ಕುಶ, ಜಮದಗ್ನಿ, ಅರ್ಜುನ, ವೀರಮಣಿ, ಜಾಂಬವ, ಕೃಷ್ಣ, ಕಮಲಭೂಪ, ಕೌಂಡ್ಲಿಕ, ಸಾಲ್ವನ ಪಾತ್ರಗಳು ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಗಿದ್ದವು. ಯಕ್ಷಗಾನ ಕಲಾರಂಗವು ಮೂರು ವರ್ಷಗಳ ಹಿಂದೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇವರಿಗೆ ಸಂಸ್ಥೆ ಆರ್ಥಿಕ ನೆರವು ನೀಡಿತ್ತು. ಕಾಂಚನ್‌ರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ