ತೆಲಂಗಾಣ ಸಿಎಂ ಪರಿಹಾರ ನಿಧಿಗೆ ಪ್ರಭಾಸ್ ದೇಣಿಗೆ
Update: 2020-10-21 06:58 GMT
ಹೈದರಾಬಾದ್: ಮಹೇಶ್ ಬಾಬು, ಜೂನಿಯರ್ ಎನ್ ಟಿಆರ್ ಹಾಗೂ ಚಿರಂಜೀವಿ ಬಳಿಕ ತೆಲುಗು ನಟ ಪ್ರಭಾಸ್ ಅವರು ಹೈದರಾಬಾದ್ ಪ್ರವಾಹದಿಂದ ಬಾಧಿತವಾಗಿರುವ ಜನರಿಗೆ ನೆರವಾಗಲು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ 1.5 ಕೋ.ರೂ. ದೇಣಿಗೆ ನೀಡಿದ್ದಾರೆ.
ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ 37,000 ಕುಟುಂಬಗಳು ಕಂಗಾಲಾಗಿವೆ. ಜನಜೀವನ ಮೊದಲಿನ ಸ್ಥಿತಿಗೆ ತರಲು ಮಹಾನಗರ ಪಾಲಿಕೆಯ ಕೆಲಸಗಾರರು ಹಾಗೂ ವಿಪತ್ತು ನಿರ್ವಹಣ ತಂಡ ದಣಿವಿಲ್ಲದೆ ಶ್ರಮಿಸುತ್ತಿದೆ.
ದಕ್ಷಿಣ ಭಾರತ ಸಿನೆಮಾಗಳ ಖ್ಯಾತ ಪಿಆರ್ ಒ ಹಾಗೂ ನಿರ್ಮಾಪಕ ಬಿಎ ರಾಜು ಅವರು ಪ್ರಭಾಸ್ ಹೈದರಾಬಾದ್ ಪ್ರವಾಹ ಸಂತ್ರಸ್ತರಿಗೆ 1.5 ಕೋ.ರೂ. ದೇಣಿಗೆ ನೀಡಿರುವುದಾಗಿ ಘೋಷಿಸಿದ್ದಾರೆ. ಪ್ರಭಾಸ್ ಅವರ ಕೊಡುಗೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು, ಅವರ ಅಭಿಮಾನಿಗಳ ಬಳಗ ನಗರದೆಲ್ಲೆಡೆ ಪರಿಹಾರ ಪ್ರಯತ್ನದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.