ಯಡಿಯೂರಪ್ಪ ಕೊಟ್ಟ ಮಾತು ತಪ್ಪಲ್ಲ, ಮಂತ್ರಿ ಮಾಡ್ತರೆ: ಬಿಜೆಪಿ ಅಭ್ಯರ್ಥಿ ಮುನಿರತ್ನ

Update: 2020-11-04 12:30 GMT

ಬೆಂಗಳೂರು, ನ.4: ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತು ತಪ್ಪಲ್ಲ. ಕೊಟ್ಟ ಮಾತಿನಂತೆ ಈಗಾಗಲೇ ಎಲ್ಲರನ್ನೂ ಸಚಿವರನ್ನಾಗಿ ಮಾಡಿದ್ದಾರೆ. ನನ್ನನ್ನೂ ಸಚಿವರನ್ನಾಗಿ ಮಾಡಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ವೈಯಾಲಿಕಾವಲ್ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೋನ ಸಮಯದಲ್ಲಿ ಶೇ.45 ಮತದಾನವಾಗಿರುವುದು ಒಳ್ಳೆಯ ಮತದಾನ ಪ್ರಮಾಣವಾಗಿದೆ. ಕಳೆದ ಬಾರಿಗಿಂತ ಶೇ.7ರಷ್ಟು ಮತದಾನ ಕಡಿಮೆಯಾಗಿದೆ. ಕಡಿಮೆ ಮತದಾನವಾಗಿ ಯಾರಿಗೆ ಲಾಭ ಎನ್ನುವ ಚರ್ಚೆ ನಡೆಯುತ್ತಲೇ ಇರುತ್ತದೆ ಎಂದು ಹೇಳಿದರು.

ಕಳೆದ 134 ವರ್ಷಗಳಿಂದ ಅದನ್ನೇ ಹೇಳಿಕೊಂಡು ಬರುತ್ತಿದ್ದಾರೆ. ಕಡಿಮೆ ಪರ್ಸೆಂಟೇಜ್ ಆದರೆ ನಮಗೆ ಲಾಭ ಅಂತ ಹೇಳುತ್ತಾ ಬರುತ್ತಿದ್ದಾರೆ. ಆದರೆ ಜನರು ತುಂಬಾ ಬುದ್ಧಿವಂತರಿದ್ದಾರೆ. ಶೇ. 20 ಆಗಲಿ ಶೇ. 30 ಆಗಲಿ ಅಭಿವೃದ್ಧಿ ಮಾಡಿದವರಿಗೆ ಜನರು ಮತ ಹಾಕುತ್ತಾರೆ. ಕಡಿಮೆ ಮತದಾನವಾದರೆ ನಮಗೆ ಲಾಭ ಅಗುತ್ತದೆ ಅನ್ನೋದನ್ನ ಬಿಟ್ಟು ಮುಂದೆ ಜನರ ಜೊತೆ ಯಾವ ರೀತಿ ಬೆರೆಯಬೇಕು ಎಂಬುದು ಚಿಂತೆ ಮಾಡಿದರೆ ಕಾಂಗ್ರೆಸ್ ಉಳಿಯುತ್ತದೆ ಎಂದು ತಿರುಗೇಟು ನೀಡಿದರು.

50 ಸಾವಿರ ಮತಗಳಿಂದ ಮುನಿರತ್ನ ಗೆಲ್ಲುತ್ತಾರೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಅದು ಯಡಿಯೂರಪ್ಪ ಹಿರಿತನದ ಆಧಾರದಲ್ಲಿ ಹೇಳಿದ್ದಾರೆ. ನಾನು ಮತದಾರರಲ್ಲಿ ಮತಭಿಕ್ಷೆ ಕೇಳಿದ್ದೇನೆ. ಎಷ್ಟು ಮತಗಳಿಂದ ಗೆಲ್ಲುತ್ತೇನೆ ಅನ್ನೋದನ್ನ ಈಗ ಹೇಳೋದಿಲ್ಲ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ಕೊಟ್ಟ ಮಾತಿನ ಪ್ರಕಾರ ಈಗಾಗಲೇ ಎಲ್ಲರನ್ನೂ ಸಚಿವರನ್ನಾಗಿ ಮಾಡಿದ್ದಾರೆ. ನನಗೂ ಕೊಟ್ಟ ಮಾತಿನಂತೆ ಮಂತ್ರಿ ಮಾಡುತ್ತೇನೆ ಎಂದಿದ್ದಾರೆ. ಆದರೆ ಸಚಿವ ಸ್ಥಾನ ನೀಡುವ ಬಗ್ಗೆ ನಾನು ಈಗಲೇ ಏನು ಹೇಳುವುದಿಲ್ಲ. ಮುಂದಿನ ಭವಿಷ್ಯ ಏನು ಅನ್ನೋದು ಯಾರಿಗೂ ಗೊತ್ತಿಲ್ಲ. ಅದಕ್ಕೆ ಕಾಲವೇ ಉತ್ತರ ನೀಡಲಿದೆ ಎಂದರು.

ನಾವು ಕಾಂಗ್ರೆಸ್‍ನಿಂದ ಹೋದಾಗ ಕೆಲವರು ಶುಭ ಕೋರಿದರು. ನಿಮಗೆ ಒಳ್ಳೆಯದಾಗಲಿ, ಒಳ್ಳೆಯ ಪೋರ್ಟ್‍ಫೋಲಿಯೋ ಸಿಗಲಿ. ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪೋದಿಲ್ಲ ಎಂದು ನನಗೆ ಆಶೀರ್ವಾದ ಮಾಡಿ ಕಳಿಸಿದವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ನಕಲಿ ವೋಟರ್ ಐಡಿ ಆರೋಪ ಕುರಿತು ಮತ್ತೆ ಆಣೆ ಪ್ರಮಾಣದ ಬಗ್ಗೆ ಮಾತನಾಡಿದ ಮುನಿರತ್ನ, ಆರೋಪ ಮಾಡಿರುವವರು ಯಾವ ದೇವರನ್ನ ನಂಬುತ್ತಾರೋ ಅಲ್ಲೇ ಆಣೆ ಮಾಡಲು ಸಿದ್ಧನಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News