ವಿಟ್ಲದಿಂದ ಬೆಂಗಳೂರಿಗೆ ಹೊರಟ ಖಾಸಗಿ ಬಸ್ ಅಪಘಾತ: ಓರ್ವ ಮೃತ್ಯು, ಹಲವರಿಗೆ ಗಾಯ

Update: 2020-11-22 06:28 GMT

ರಾಮನಗರ, ನ.22: ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಅಪಘಾತಕ್ಕೀಡಾಗಿ ಓರ್ವ ಮೃತಪಟ್ಟು, ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ರಾಮನಗರ ಜಿಲ್ಲೆಯ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಡೆಮಾರನಹಳ್ಳಿ ಎಂಬಲ್ಲಿ ಇಂದು ಮುಂಜಾವ ನಡೆದಿದೆ.

ಮೃತರನ್ನು ಚಿಕ್ಕಮಗಳೂರು ಕಡೂರು ನಿವಾಸಿ ಟಿಪ್ಪು(40) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕೆಲವು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಕುದೂರು ಪೊಲೀಸರು ತಿಳಿಸಿದ್ದಾರೆ.

ಸುಗಮ ಟೂರಿಸ್ಟ್ ಸಂಸ್ಥೆಗೆ ಸೇರಿದ ಈ ಬಸ್ ಶನಿವಾರ ರಾತ್ರಿ ವಿಟ್ಲದಿಂದ ಪ್ರಯಾಣಿಕರನ್ನು ಕೂರಿಸಿಕೊಂಡು ಬೆಂಗಳೂರಿಗೆ ಹೊರಟಿತ್ತು. ಇಂದು ಮುಂಜಾವ 5 ಗಂಟೆ ಸುಮಾರಿಗೆ ಕುದೂರು ಠಾಣಾ ವ್ಯಾಪ್ತಿಯ ಗುಡೆಮಾರನಹಳ್ಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News