ನಮ್ಮ ಸಿದ್ಧಾಂತಕ್ಕೆ ಬದ್ಧವಾಗಿ ಹೋರಾಟ ಮಾಡುತ್ತೇವೆ: ಡಿ.ಕೆ. ಶಿವಕುಮಾರ್

Update: 2020-11-24 09:26 GMT

ಕಲಬುರಗಿ : 'ಬಿಜೆಪಿ ಕೊಟ್ಟ ಆಶ್ವಾಸನೆ ಈಡೇರಿಸುವುದಿಲ್ಲ. ಕೇವಲ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದು, ಇದು ತಾತ್ಕಾಲಿಕ. ನಾವು ನಮ್ಮ ಸಿದ್ಧಾಂತಕ್ಕೆ ಬದ್ಧವಾಗಿ ಹೋರಾಟ ಮಾಡುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಬಿರುದ್ಧ ವಾಗ್ದಾಳಿ ನಡೆಸಿದರು.

'ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ನಾಯಕರು ಹಾಗೂ ಮಂತ್ರಿಗಳು ಅನೇಕ ಆಶ್ವಾಸನೆ ಕೊಡುತ್ತಿದ್ದಾರೆ. ಅವರು ಏನಾದರೂ ಆಶ್ವಾಸನೆ ನೀಡಲಿ. ಕಳೆದ ಒಂದು ವರ್ಷದಿಂದ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂಬುದು ಜನರಿಗೆ ಗೊತ್ತಿದೆ. ಬಿಜೆಪಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೀವಿ ಅಂತಾ ಹೇಳಿದ್ದರು ಅದನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಕೇವಲ ಭಾವನಾತ್ಮಕವಾಗಿ ಜನರನ್ನು ಸೆಳೆಯುತ್ತಿದ್ದಾರೆ. ಅದು ತಾತ್ಕಾಲಿಕ. ಕಾರ್ಯಕರ್ತರು ಅದಕ್ಕೆ ಕುಗ್ಗುವುದಿಲ್ಲ. ನಾವು ನಮ್ಮ ಸಿದ್ಧಾಂತಕ್ಕೆ ಬದ್ಧವಾಗಿ ಹೋರಾಟ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜಯ ಸಾಧಿಸಲು ನಾನು ವಿಜಯನಗರದಿಂದ ಪ್ರವಾಸ ಆರಂಭಿಸಿದ್ದೇನೆ. ರಸ್ತೆ ಮಾರ್ಗವಾಗಿ ಎಲ್ಲೆಡೆ ಪ್ರವಾಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ ಗೆ ಜನರ ಬೆಂಬಲ

ನಾನು ಪ್ರವಾಸ ಮಾಡುತ್ತಿರುವ ಕಡೆಗಳಲ್ಲಿ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಹಾಗೂ ಮಹಿಳೆಯರು ನನ್ನನ್ನು ಬರ ಮಾಡಿಕೊಳ್ಳುತ್ತಿದ್ದು, ಬೆಂಬಲ ಸೂಚಿಸುತ್ತಿದ್ದಾರೆ. ಮಸ್ಕಿಯಲ್ಲಿ ನಿನ್ನೆ 35 ಸಾವಿರಕ್ಕೂ ಹೆಚ್ಚು ಜನ ಬಿಜೆಪಿಯಿಂದ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿ ದ್ದಾರೆ. ಇಷ್ಟು ದೊಡ್ಡ ಸಮೂಹದಲ್ಲಿ ಜನ ಸೇರುತ್ತಾರೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ರಾಜಕೀಯ ಅನುಭವದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಇದೇ ಅತಿ ದೊಡ್ಡ ಪಕ್ಷ ಸೇರ್ಪಡೆ ಸಭೆಯಾಗಿದೆ. ಪಕ್ಷಕ್ಕಾಗಿ ಶ್ರಮಿಸುತ್ತಿರುವ ಎಲ್ಲ ಕಾರ್ಯಕರ್ತರು, ನಾಯಕರು ಹಾಗೂ ಪಕ್ಷಕ್ಕೆ ಸೇರ್ಪಡೆಯಾದ ಬಸನಗೌಡ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ನಾನು ವಿಚಾರಣೆಗೆ ಹೋದಾಗ ಯಾರು ಬರಬೇಡಿ

ನಾನು ಸಿಬಿಐ ವಿಚಾರಣೆಗೆ ತೆರಳಿದಾಗ ಅನವಶ್ಯಕವಾಗಿ ಆತಂಕಕ್ಕೆ ಒಳಗಾಗಿ ಯಾರು ಕೂಡ ಬರಬೇಡಿ. ಯಾವುದೇ ಹೇಳಿಕೆ ನೀಡಬೇಡಿ. ಯಾವುದೇ ರೀತೀಯ ಭಯ ಪಡುವ ಅಗತ್ಯವಿಲ್ಲ. ನಾವು ಕಾನೂನಿಗೆ ಗೌರವ ನೀಡಬೇಕು. ಹೀಗಾಗಿ ಎಲ್ಲ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ. ನಿಮಗೆ ಅವಮಾನವಾಗುವ ರೀತಿಯಲ್ಲಿ ನಾನು ಎಂದಿಗೂ ನಡೆದುಕೊಂಡಿಲ್ಲ. ಕಾನೂನು ವಿರುದ್ಧ ಹೋಗಿಲ್ಲ. ಎಲ್ಲವೂ ಕಾನೂನು ಚೌಕಟ್ಟಿನಲ್ಲಿದೆ. ರಾಜಕಾರಣದಲ್ಲಿ ದ್ವೇಷ ಉಕ್ಕಿ ಹರಿಯುತ್ತಿದೆ. ಅದಕ್ಕೆ ನಾನು ಉತ್ತರ ನೀಡುತ್ತೇನೆ. ಸಿಬಿಐ ಅಧಿಕಾರಿಗಳು ಇಂತಹ ಪ್ರಕರಣದಲ್ಲಿ ಜಾಗೃತರಾಗಿ ಕೆಲಸ ಮಾಡಲಿದ್ದಾರೆ. ಅವರು ನನಗೆ ಯಾವುದೇ ಸಹಾಯ ಮಾಡುವುದು ಬೇಡ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ಸಾಕು. ಅವರು ಕೇಳುವ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತೇನೆ. ರಾಜ್ಯದಲ್ಲಿ ಇದುವರೆಗೂ ಯಾವುದೇ ಶಾಸಕನ ಮೇಲೆ ಸಿಬಿಐ ತನಿಖೆಗೆ ಆದೇಶ ನೀಡಿರಲಿಲ್ಲ. ಆದರೆ ನನ್ನ ಪ್ರಕರಣವನ್ನು ವಿಶೇಷವಾಗಿ ಕೊಟ್ಟಿದ್ದಾರೆ. ಇದನ್ನು ಜಯಿಸಿ ಬರುವ ವಿಶ್ವಾಸ ನನಗಿದೆ ಎಂದು ಡಿಕೆಶಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News