ಅಪರಿಚಿತ ವಾಹನ ಢಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಮೃತ್ಯು

Update: 2020-11-27 11:26 GMT

ಬೆಂಗಳೂರು, ನ.27: ಶರವೇಗವಾಗಿ ಬಂದ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಇಲ್ಲಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜೆಪಿ ನಗರದ ಪಿಯುಸಿ ವಿದ್ಯಾರ್ಥಿ ಅನನ್ಯ(17) ಹಾಗೂ ಕುಮಾರಸ್ವಾಮಿ ಲೇಔಟ್‍ನ ಪದವಿ ವಿದ್ಯಾರ್ಥಿ ಕಿಶೋರ್(20) ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಇಬ್ಬರು ನಂದಿಬೆಟ್ಟ ವೀಕ್ಷಿಸಲು ಸ್ಕೂಟರ್ ನಲ್ಲಿ ಗುರುವಾರ ಮುಂಜಾನೆ ಹೋಗಿ ವಾಪಾಸಾಗುತ್ತಿದ್ದ ವೇಳೆ, ಮಾಳಿಗೇನಹಳ್ಳಿ ಬಳಿ ವೇಗವಾಗಿ ಬರುತ್ತಿದ್ದ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿರುವ ವಿಶ್ವನಾಥಪುರ ಪೊಲೀಸರು ಅಪಘಾತ ನಡೆಸಿದ ಅಪರಿಚಿತ ವಾಹನಕ್ಕೆ ಶೋಧ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News