ಎಚ್.ವಿಶ್ವನಾಥ್ ಸಚಿವ ಸ್ಥಾನದ ಕನಸಿಗೆ ತಣ್ಣೀರೆರಚಿದ ಹೈಕೋರ್ಟ್

Update: 2020-11-30 14:12 GMT

ಬೆಂಗಳೂರು, ನ.30: ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಅವರಿಗೆ ಹೈಕೋರ್ಟ್ ತಡೆಯೊಡ್ಡಿದೆ. ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಎಚ್.ವಿಶ್ವನಾಥ್ ಅವರ ಅನರ್ಹತೆ ಮುಂದುವರಿದಿರುವ ಕಾರಣ ಅವರ ಹೆಸರನ್ನು ಸಚಿವ ಸ್ಥಾನಕ್ಕೆ ಸೂಚಿಸುವ ಮುನ್ನ ಅವರು ಅನರ್ಹರಾಗಿಯೇ ಮುಂದುವರಿದಿದ್ದಾರೆ ಎಂಬುದನ್ನು ಸಿಎಂ ಪರಿಗಣಿಸಬೇಕು ಎಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.

ಶಾಸಕ ಸ್ಥಾನದಿಂದ ಅನರ್ಹಗೊಂಡು ಪರಿಷತ್ ಸದಸ್ಯರಾಗಿರುವ ಎಂಟಿಬಿ ನಾಗರಾಜ್, ಆರ್. ಶಂಕರ್ ಹಾಗೂ ಎಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನದ ಹುದ್ದೆ ನೀಡದಂತೆ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ಎ.ಎಸ್.ಹರೀಶ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ಸೋಮವಾರ ಮಧ್ಯಂತರ ಆದೇಶ ಪ್ರಕಟಿಸಿತು.

ಯಾವುದೇ ಅನರ್ಹ ಶಾಸಕ ಅಮಾನತುಗೊಂಡ ಬಳಿಕ ಮರು ಆಯ್ಕೆಯಾಗುವವರೆಗೆ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬಾರದು ಎಂದು ಸಂವಿಧಾನದ ವಿಧಿ 164(1 ಬಿ) ಹಾಗೂ 361(ಬಿ) ಸ್ಪಷ್ಟವಾಗಿ ಹೇಳಿವೆ. ಎಚ್.ವಿಶ್ವನಾಥ್ ವಿಧಾನಸಭೆಗಾಗಲೀ, ಪರಿಷತ್ತಿಗಾಗಲೀ ಆಯ್ಕೆಯಾಗಿಲ್ಲ. ಬದಲಿಗೆ ನಾಮ ನಿರ್ದೇಶನಗೊಂಡಿದ್ದಾರೆ. ವಿಶ್ವನಾಥ್ ಅವರ ಅನರ್ಹತೆ ಮುಂದುವರಿದಿದ್ದು, ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವಂತಿಲ್ಲ. ಹೀಗಾಗಿ, ಸಚಿವ ಸ್ಥಾನಕ್ಕೆ ಹೆಸರುಗಳನ್ನು ಸೂಚಿಸುವಾಗ ಸಿಎಂ ಅವರು ವಿಶ್ವನಾಥ್ ಅವರ ಅನರ್ಹತೆಯನ್ನು ಪರಿಗಣಿಸಬೇಕು ಎಂದು ಕೋರ್ಟ್ ನಿರ್ದೇಶಿಸಿತು.

ಇನ್ನು ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಅಮಾನತುಗೊಂಡಿದ್ದರೂ, ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಸಂವಿಧಾನದ ವಿಧಿ 164(ಬಿ)ಯಲ್ಲಿ ಅನರ್ಹಗೊಂಡ ಶಾಸಕರು ಸಚಿವರಾಗುವುದಿದ್ದಲ್ಲಿ ಅವರು ವಿಧಾನಸಭೆ ಅಥವಾ ಪರಿಷತ್ತಿಗೆ ಮರು ಆಯ್ಕಯಾಗಿರಬೇಕು ಎಂದು ಹೇಳಿದೆ. ಅದರಂತೆ ನಾಗರಾಜ್ ಹಾಗೂ ಶಂಕರ್ ಪರಿಷತ್ತಿಗೆ ಆಯ್ಕೆಯಾಗಿರುವುದರಿಂದ ಸಚಿವ ಸ್ಥಾನ ನೀಡದಂತೆ ಕೋರಿರುವ ಮನವಿಯನ್ನು ಪರಿಗಣಿಸಲು ಬರುವುದಿಲ್ಲ ಎಂದು ತಿಳಿಸಿ, ಅಂತಿಮ ತೀರ್ಪು ಬರುವವರೆಗೂ ಪ್ರಕರಣದಲ್ಲಿ ಈ ಮಧ್ಯಂತರ ಆದೇಶ ಜಾರಿಯಲ್ಲಿರಲಿದೆ ಎಂದು ಸ್ಪಷ್ಟಪಡಿಸಿತು.

ಇದೇ ವೇಳೆ ರಾಜ್ಯಪಾಲರು ಸಾಂವಿಧಾನಿಕವಾಗಿ ಹಲವು ವಿನಾಯಿತಿಗಳನ್ನು ಪಡೆದಿದ್ದಾರೆ. ಅವರನ್ನು ಯಾವುದೇ ನ್ಯಾಯಾಲಯ ವಿಚಾರಣೆ ನಡೆಸಲು ಅಥವಾ ಅವರಿಗೆ ನಿರ್ದೇಶಿಸಲು ಅವಕಾಶವಿಲ್ಲ. ಹೀಗಾಗಿ ರಾಜ್ಯಪಾಲರನ್ನು ಅರ್ಜಿಯಿಂದ ಕೈಬಿಡಲಾಗಿದೆ ಎಂದು ತಿಳಿಸಿತು. ಆದರೆ, ಸಿಎಂ ಸಂವಿಧಾನದ ಅಡಿಯಲ್ಲಿ ಹುದ್ದೆ ಪಡೆದಿರುವುದರಿಂದ ಅವರು ಸಚಿವರ ಹೆಸರುಗಳನ್ನು ಸೂಚಿಸುವ ಮುನ್ನ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ನಿಭಾಯಿಸಬೇಕು ಎಂದು ನಿರ್ದೇಶಿಸಿತು.

ಪ್ರಶಾಂತ್ ಭೂಷಣ್ ವಾದ ಮಂಡನೆ: ಎಚ್.ವಿಶ್ವನಾಥ್, ಆರ್.ಶಂಕರ್, ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡಬಾರದು. ಈ ಮೂವರು ಶಾಸಕರೂ ಜನರಿಂದ ನೇರವಾಗಿ ಆಯ್ಕೆಯಾಗಿಲ್ಲ. ಇವರು ಉಪ ಚುನಾವಣೆಯಲ್ಲಿ ಸೋತಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಅನರ್ಹರಾದವರು ಜನರಿಂದ ಮರು ಆಯ್ಕೆಯಾಗದೆ ಅವರು ಸಚಿವರಾಗುವಂತಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.

ಆರ್ಟಿಕಲ್ 164 (1ಬಿ)ಯಲ್ಲಿ ಏನಿದೆ: ವಿಸ್ತರಿಸಿ ಹೇಳುವುದಾದರೆ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿಯೊಬ್ಬರು ರಾಜ್ಯದ ವಿಧಾನಸಭೆ ಅಥವಾ ಪರಿಷತ್ ಸದಸ್ಯರಾಗಿರುವಾಗ 10ನೇ ಪರಿಚ್ಛೇದದ 2ನೇ ಕಲಂ ಅಡಿಯಲ್ಲಿ ಅನರ್ಹರಾದಲ್ಲಿ, ಅಂತಹ ಸದಸ್ಯರು, ಅವರು ಅನರ್ಹವಾದ ದಿನದಿಂದ ಸದಸ್ಯತ್ವ ಅವಧಿ ಮುಕ್ತಾಯವಾಗುವವರೆಗೆ ಅಥವಾ ವಿಧಾನಸಭೆ ಅಥವಾ ಪರಿಷತ್ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧಿಸಿ ಜಯಶಾಲಿ ಎಂದು ಘೋಷಿತರಾಗುವವರೆಗೆ ಅವರು ಮತ್ತೆ ಸಚಿವರಾಗುವಂತಿಲ್ಲ. ಈ ಷರತ್ತುಗಳಲ್ಲಿ ಯಾವುದು ಮೊದಲು ಮುಕ್ತಾಯವಾಗುತ್ತದೋ ಅಂದಿನಿಂದ ಅವರು ಮತ್ತೆ ಸಚಿವರಾಗಬಹುದು.

ಎಚ್.ವಿಶ್ವನಾಥ್ ಚುನಾವಣೆಗೆ ಸ್ಪರ್ಧಿಸದೆ, ಸಾಹಿತಿ ಕೋಟಾದಲ್ಲಿ ರಾಜ್ಯಪಾಲರಿಂದ ನಾಮನಿರ್ದೇಶನಗೊಂಡು ವಿಧಾನ ಪರಿಷತ್ ಸದಸ್ಯರಾಗಿರುವುದರಿಂದ ಅವರಿಗೆ ಈ ಆರ್ಟಿಕಲ್ 164 (1ಬಿ) ಅಡ್ಡಿಯಾಗಿ ಪರಿಣಮಿಸಿದೆ.

ಆಶ್ಚರ್ಯವಾಗಿದೆ

ಎಂಎಲ್‍ಸಿ ಎಚ್.ವಿಶ್ವನಾಥ್ ಅವರು ಸಚಿವರಾಗಲು ಅನರ್ಹರು ಎಂದು ಹೈಕೋರ್ಟ್ ಆದೇಶ ನೀಡಿರುವುದು ನಮಗೂ ಆಶ್ಚರ್ಯವಾಗಿದೆ. ಈ ಬಗ್ಗೆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನಕ್ಕೆ ಬರಲಾಗುತ್ತದೆ.

-ಆರ್.ಅಶೋಕ್, ಕಂದಾಯ ಸಚಿವ

ಅವರೊಂದಿಗೆ ನಾವಿದ್ದೇವೆ

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ 'ಸಚಿವರಾಗಲು ಅನರ್ಹ' ಎಂಬ ಹೈಕೋಟ್ ಮಧ್ಯಂತರ ತೀರ್ಪಿನ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇವೆ. ಶೀಘ್ರದಲ್ಲೇ ನಾವೆಲ್ಲರೂ ಸೇರಿ ಚರ್ಚಿಸುತ್ತೇವೆ. ನಮ್ಮಲ್ಲಿ ಯಾರಿಗೆ ಅನ್ಯಾಯವಾದರೂ ಎಲ್ಲರೂ ಒಗ್ಗಟ್ಟಾಗುತ್ತೇವೆ. ಎಚ್.ವಿಶ್ವನಾಥ್ ಅವರೊಂದಿಗೆ ನಾವಿದ್ದೇವೆ'

-ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News