ಮೀಟರ್ ಬಡ್ಡಿ ದಂಧೆ ಆರೋಪ: ಸಹ ನಟ ಬಂಧನ

Update: 2020-12-06 12:48 GMT

ಬೆಂಗಳೂರು, ಡಿ. 6: ಸಾಲ ನೀಡಿ ಮೀಟರ್ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪದಡಿ ಸಹ ನಟನೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವೈಯಾಲಿಕಾವಲ್ ನಿವಾಸಿ ನಾಗರಾಜ್ ಶೆಟ್ಟಿ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ಹಲವು ಸಿನೆಮಾಗಳಲ್ಲಿ ಸಹನಟನಾಗಿದ್ದ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ನಾಗರಾಜ್ ಶೆಟ್ಟಿ ಬಡ್ಡಿಗಾಗಿ ಸಾಲ ಪಡೆದಿರುವವರಿಗೆ ಕಿರುಕುಳ ನೀಡುತ್ತಿರುವ ಕುರಿತು ಸಿಸಿಬಿಗೆ ದೂರುಗಳು ಬಂದಿದ್ದವು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ವೈಯಾಲಿಕಾವಲ್ ನ ನಾಗರಾಜ್ ಶೆಟ್ಟಿ ಮನೆ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.

ಶಿವಮೊಗ್ಗ ಮೂಲದ ನಾಗರಾಜ್ ಶೆಟ್ಟಿ ವೈಯಾಲಿಕಾವಲ್ ನಲ್ಲಿ ಬಾಲಾಜಿ ಫೈನಾನ್ಸ್ ನಡೆಸುತ್ತಿದ್ದ. ಮೃತ ಕಪಾಲಿ ಮೋಹನ್ ಆಪ್ತನಾಗಿರುವ ಈತ ನಗರದ ಉದ್ಯಮಿಗಳು ಮತ್ತು ವ್ಯಾಪಾರಸ್ಥರಿಗೆ ಹೆಚ್ಚಿನ ಸಾಲ ನೀಡುತ್ತಿದ್ದ. ಆದರೆ ಸಾಲಕ್ಕೆ ಅಧಿಕ ಬಡ್ಡಿಯನ್ನು ವಸೂಲಿ ಮಾಡುತ್ತಿದ್ದು, ಬಡ್ಡಿ ಕಟ್ಟದೇ ಇದ್ದರೆ ಕಿರುಕುಳ ನೀಡುತ್ತಿದ್ದ ಎಂಬ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತನಿಂದ 164 ಚೆಕ್, 84 ಪ್ರಾಮಿಸರಿ ನೋಟ್ ಗಳು, ಸಾಲ ಪಡೆದವರಿಂದ ಪಡೆದಿದ್ದ ಆಸ್ತಿ ದಾಖಲೆಗಳು ಸೇರಿ 22 ಲಕ್ಷ ಹಣವನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News