ಪುತ್ರನ ನಿಶ್ಚಿತಾರ್ಥದ ವೇಳೆ ಹೊಟೇಲ್‍ನ ಲಿಫ್ಟ್ ಗುಂಡಿಗೆ ಬಿದ್ದು ವ್ಯಕ್ತಿ ಮೃತ್ಯು

Update: 2020-12-07 12:13 GMT

ಬೆಂಗಳೂರು, ಡಿ.7: ನಗರದ ಹೊಟೇಲ್‍ವೊಂದರ ಲಿಫ್ಟ್ ಗುಂಡಿಗೆ ಆಯತಪ್ಪಿ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಎಲೇಕೊಡಿಗೇನಹಳ್ಳಿಯ ಮಂಜುನಾಥ್(60) ಮೃತಪಟ್ಟವರು ಎಂದು ತಿಳಿದುಬಂದಿದೆ.

ನಗರದ ಹೊಟೇಲ್‍ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತರ ಪುತ್ರ ದರ್ಶನ್ ಅವರ ಮದುವೆಯನ್ನು ದೊಡ್ಡಬಳ್ಳಾಪುರದ ಕಂಟನಕುಂಟೆಯ ಶಿಲ್ಪಾ ಜೊತೆ ನಿಶ್ಚಯ ಮಾಡಲಾಗಿದ್ದು, ಹೊಟೇಲ್‍ನ ಮೂರನೇ ಮಹಡಿಯಲ್ಲಿ ನಿಶ್ಚಿತಾರ್ಥ ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಪಾಲ್ಗೊಂಡ ವರನ ತಂದೆ ಮಂಜುನಾಥ್, ರವಿವಾರ ಮಧ್ಯಾಹ್ನ 1 ಗಂಟೆ ವೇಳೆ ಮೂರನೇ ಮಹಡಿಯಲ್ಲಿ ಆಯತಪ್ಪಿ ಲಿಫ್ಟ್ ಗುಂಡಿಗೆ ಬಿದ್ದಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News