ಸರಗಳ್ಳತನಕ್ಕೆ ವಿಫಲ ಯತ್ನ ನಡೆಸಿ ನೀರಿಲ್ಲದ ಬಾವಿಗೆ ಬಿದ್ದ ದುಷ್ಕರ್ಮಿ

Update: 2020-12-16 12:57 GMT

ಬೆಂಗಳೂರು, ಡಿ.16: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಸರಕಳ್ಳತನಕ್ಕೆ ವಿಫಲ ಯತ್ನ ನಡೆಸಿ ತಪ್ಪಿಸಿಕೊಳ್ಳಲು ದುಷ್ಕರ್ಮಿಯೋರ್ವ ನೀರಿಲ್ಲದ ಬಾವಿಗೆ ಬಿದ್ದಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ನಗರದ ರಾಜಾನುಕುಂಟೆಯ ತಿಮ್ಮಸಂದ್ರದ ಇಮ್ರಾನ್ ಎಂಬಾತ ಈ ಕೃತ್ಯವೆಸಗಿದ್ದು, ಇಲ್ಲಿನ ಚಿಕ್ಕಜಾಲ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ತಿಮ್ಮಸಂದ್ರದ ರಾಧಾಬಾಯಿ ಅವರು ಮಂಗಳವಾರ ಮಧ್ಯಾಹ್ನ ತಮ್ಮ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿದ್ದಾಗ ಬೈಕ್‍ನಲ್ಲಿ ಬಂದ ಆರೋಪಿಯು ಅವರ ಕತ್ತಿನಲ್ಲಿದ್ದ ಸರ ಕಸಿಯಲು ಪ್ರಯತ್ನಿಸಿದ್ದಾನೆ.

ಪ್ರತಿರೋಧ ತೋರಿದ ಅವರ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ತದನಂತರ, ರಾಧಾಬಾಯಿ ಅವರು ಸಹಾಯಕ್ಕಾಗಿ ಜೋರಾಗಿ ಕಿರುಚಾಡುತ್ತಿದ್ದಂತೆ ಅಲ್ಲಿಂದ ಓಡಿ ಹೋಗಿ ನೀರಿಲ್ಲದ ಬಾವಿಗೆ ಬಿದ್ದು ಗಾಯಗೊಂಡಿರುವುದಾಗಿ ಹೇಳಲಾಗುತ್ತಿದೆ.

ಸ್ಥಳಕ್ಕೆ ಬಂದ ಸ್ಥಳೀಯರು ಹಿಂಬಾಲಿಸಿ ಬಾವಿಗೆ ಬಿದ್ದು ಗಾಯಗೊಂಡ ಆತನನ್ನು ಹಿಡಿದು ಚಿಕ್ಕಜಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News