ರೈತರು, ಕಾರ್ಮಿಕರ ಪ್ರತಿಭಟನೆ: ಮಾತುಕತೆಗೆ ಆಹ್ವಾನಿಸಿ ಸಮಸ್ಯೆ ಬಗೆಹರಿಸಲು ಸಿಎಂಗೆ ಸಿದ್ದರಾಮಯ್ಯ ಪತ್ರ
ಬೆಂಗಳೂರು, ಡಿ.20: ರಾಜ್ಯದಲ್ಲಿ ಕಳೆದ ಹಲವು ತಿಂಗಳುಗಳಿಂದ ರೈತರು ಮತ್ತು ಕಾರ್ಮಿಕರು ಚಳವಳಿ, ಪ್ರತಿಭಟನೆ ಹಾಗೂ ಸತ್ಯಾಗ್ರಹಗಳಲ್ಲಿ ತೊಡಗಿದ್ದಾರೆ. ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರು, ಕಾರ್ಮಿಕರನ್ನು ಮಾತುಕತೆಗೆ ಕರೆದು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ಮುಖ್ಯಾಂಶಗಳು ಹೀಗಿದೆ.
ಬಿಡದಿಯ ಟೊಯೋಟಾ ಕಂಪೆನಿ: ಕಾರು ತಯಾರಿಸುವ ಈ ಕಂಪನಿ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಹಲವು ಘಟಕಗಳನ್ನು ಹೊಂದಿದೆ. ಅದರ ಒಂದು ಘಟಕದಲ್ಲಿ ಸುಮಾರು ಎರಡು ಸಾವಿರ ಜನ ಖಾಯಂ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಕಾರು ಉತ್ಪಾದನಾ ಘಟಕವನ್ನು ಲಾಕೌಟ್ ಮಾಡಲಾಗಿದೆ. ಸುಸೂತ್ರವಾಗಿ ನಡೆಯುತ್ತಿದ್ದ ಈ ಘಟಕ ಕೇಂದ್ರವು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದ ಕೂಡಲೇ ಅದನ್ನು ನೆಪವಾಗಿಟ್ಟುಕೊಂಡು ‘ನಿರ್ದಿಷ್ಟ ಕಾಲಾವಧಿಯ ಕಾರ್ಮಿಕರನ್ನು (ಹೊಸ ಕಾಯ್ದೆಯಲ್ಲಿ ನಿರ್ದಿಷ್ಟ ಸೇವಾವಧಿಯ ಕಾರ್ಮಿಕರನ್ನು ನೇಮಿಸಿಕೊಳ್ಳುವ ಅವಕಾಶ ಮಾಡಲಾಗಿದೆ) ನೇಮಿಸಿಕೊಂಡು ಹೆಚ್ಚು ಲಾಭ ಗಳಿಸಬಹುದು ಎನ್ನುವ ಉದ್ದೇಶದಿಂದ ವಿಪರೀತ ಕಿರುಕುಳ ನೀಡುತ್ತಿವೆ ಎನ್ನುವುದು ಕಾರ್ಮಿಕರ ಆರೋಪ. ಶೋಷಣೆಯನ್ನು ಪ್ರಶ್ನಿಸಿದ ನೌಕರರನ್ನು ಕಂಪೆನಿ ಅಮಾನತು ಮಾಡಿದೆ. ಪ್ರತಿಭಟನೆಗೆ ಕೂತರೆ ಕಂಪೆನಿಗಳು ಕ್ಯಾರೆ ಎನ್ನುತ್ತಿಲ್ಲ. ಬದಲಾಗಿ ಲಾಕೌಟ್ ಮಾಡಿವೆ. ಕಂಪೆನಿಯ ಮುಂದೆ ಖಾಲಿ ಇದ್ದ ಜಾಗದಲ್ಲಿ ಪ್ರತಿಭಟನೆ ಮಾಡುವುದಕ್ಕಾಗಿ ಹಾಕಿದ್ದ ಶಾಮಿಯಾನವನ್ನು ತೆರವುಗೊಳಿಸಲು ಸರಕಾರ ಕೆಐಎಡಿಬಿ ಮೇಲೆ ಒತ್ತಡ ತಂದಿದೆ. ಕೆಐಡಿಬಿಯು ಆ ಜಾಗದ ಮಾಲಕರಿಗೆ ನೋಟಿಸ್ ನೀಡಿ ಶಾಮಿಯಾನವನ್ನು ತೆರವುಗೊಳಿಸಿದೆ. ಕಾರ್ಮಿಕರು ಈಗ ಛತ್ರಿಗಳನ್ನಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಕಾರ್ಮಿಕರ ಪ್ರತಿಭಟನೆ 40ನೇ ದಿನಕ್ಕೆ ಕಾಲಿಟ್ಟರೂ ಇದುವರೆಗೂ ಕಂಪೆನಿಯು ಲಾಕೌಟ್ ತೆರವುಗೊಳಿಸಿ ಮಾತುಕತೆಗೆ ಮುಂದಾಗಿಲ್ಲ.
ವಿಸ್ಟ್ರಾನ್ ಕಾರ್ಮಿಕರ ಪ್ರತಿಭಟನೆ : ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಇರುವ ವಿಸ್ಟ್ರಾನ್ ಎಂಬ ಕಂಪನಿಯಲ್ಲಿ ಸುಮಾರು 9,833 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ 8,490 ಸಾವಿರ ಜನ ಗುತ್ತಿಗೆ ಕಾರ್ಮಿಕರು. ಸುಮಾರು 1,343 ಖಾಯಂ ಕಾರ್ಮಿಕರಿದ್ದಾರೆ. ಈ ಕಂಪೆನಿಯು ಅಮೆರಿಕದ ಪ್ರತಿಷ್ಠಿತ ಮತ್ತು ಜಾಗತಿಕ ಮಟ್ಟದಲ್ಲಿ ಅತ್ಯಂತ ಶ್ರೀಮಂತ ಕಂಪೆನಿಯಾದ ಆಪಲ್ (ಐ-ಫೋನ್) ಕಂಪನಿಗೆ ಉಪಕರಣಗಳನ್ನು ತಯಾರಿಸಿ ಕೊಡುತ್ತಿದೆ. ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾಸಿಕ 22,000 ರೂಪಾಯಿಗಳ ವೇತನ ನೀಡುತ್ತೇವೆಂದು ಹೇಳಿ ಕೆಲಸಕ್ಕೆ ಸೇರಿಸಿಕೊಂಡು ಬಹುಪಾಲು ಜನರಿಗೆ ಕೇವಲ 8,000 ರೂಪಾಯಿಗಳನ್ನು ಮಾತ್ರ ನೀಡಲಾಗುತ್ತಿದೆಯೆಂಬ ಆರೋಪವಿದೆ. ಕಂಪೆನಿಯು 8 ಗಂಟೆಗೆ ಬದಲಾಗಿ 12 ಗಂಟೆ ದುಡಿಸಿಕೊಳ್ಳುತ್ತಿದೆ. ಗುತ್ತಿಗೆ ಕಾರ್ಮಿಕರಿಗೆ ಮೂರು ನಾಲ್ಕು ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ ಎಂಬ ಮಾಹಿತಿಯನ್ನು ಕಾರ್ಮಿಕ ಸಚಿವರು ಇತ್ತೀಚೆಗೆ ನೀಡಿರುವ ಹೇಳಿಕೆಗಳೂ ಸಮರ್ಥಿಸುತ್ತಿವೆ. ಈ ಗುತ್ತಿಗೆ ಕಾರ್ಮಿಕರಲ್ಲಿ ಬಹುಪಾಲು ಯುವಕರು ಕಾಲೇಜುಗಳಲ್ಲಿ ಕಲಿಯುತ್ತಿರುವವರಾಗಿದ್ದಾರೆ. ಕೊರೋನ ಕಾರಣದಿಂದ ಕಾಲೇಜುಗಳನ್ನು ಮುಚ್ಚಿರುವುದರಿಂದ, ಮೂರು ನಾಲ್ಕು ತಿಂಗಳು ದುಡಿದು ಬರುವ ಹಣದಿಂದ ಮುಂದಿನ ಓದನ್ನು ನಿಭಾಯಿಸಬಹುದು ಎಂಬ ಆಸೆಯಿಂದ ಗುತ್ತಿಗೆ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದವರಾಗಿದ್ದಾರೆ. ಅವರಿಗೂ ಸಂಬಳ ನೀಡಿಲ್ಲ. ಕಾರ್ಮಿಕರು ಶೌಚಾಲಯಕ್ಕೆ ಹೋದ ಅವಧಿಯನ್ನು ಕೆಲಸ ಮಾಡದ ಅವಧಿ ಎಂದು ಪರಿಗಣಿಸಿ ತಿಂಗಳಲ್ಲಿ ಎರಡು ಮೂರು ದಿನಗಳ ಸಂಬಳವನ್ನು ಕಡಿತಗೊಳಿಸಲಾಗಿದೆ. ಈ ರೀತಿಯ ಅಮಾನವೀಯ ಸಂಗತಿಗಳು ಕಾರ್ಮಿಕ ವಲಯವನ್ನು ರೊಚ್ಚಿಗೇಳುವಂತೆ ಮಾಡಿವೆ. ಕೋಲಾರದ ಈ ಕಂಪೆನಿಯ ಸುಮಾರು 7 ಸಾವಿರ ಕಾರ್ಮಿಕರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಇವರಲ್ಲಿ ಬಹುಪಾಲು ಮಂದಿ ವಿದ್ಯಾರ್ಥಿಗಳು ಸೇರಿದ್ದಾರೆ ಎಂಬುದು ಆತಂಕದ ವಿಚಾರ.
ಅರವಿಂದ್ ಫ್ಯಾಷನ್ಸ್: ರಾಮನಗರ ಜಿಲ್ಲೆಯಲ್ಲಿರುವ ಅರವಿಂದ್ ಫ್ಯಾಷನ್ಸ್ ಎಂಬ ಸಿದ್ದ ಉಡುಪು ಕಾರ್ಖಾನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕುಸಿದಿದೆ ಎನ್ನುವ ನೆಪ ಹೇಳಿ ಏಕಾಏಕಿ ಬಂದ್ ಮಾಡಿದೆ. 12 ವರ್ಷದಿಂದ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರು ಬೆಳಗಾಗುವುದರೊಳಗೆ ಬೀದಿಗೆ ಬಿದ್ದಿದ್ದಾರೆ. ಕಾರ್ಮಿಕರಿಗೆ ಕಾರ್ಮಿಕ ನಿಯಮಗಳ ಪ್ರಕಾರ ಕೊಡಬೇಕಾದ ಹಣವನ್ನೂ ನೀಡದೇ ಏಕಾಏಕಿ ಬಂದ್ ಮಾಡಿರುವುದು ಅಮಾನವೀಯ ಸಂಗತಿಯಾಗಿದೆ. ಇದನ್ನು ವಿರೋಧಿಸಿ ಕಾರ್ಮಿಕರು ನಡೆಸುತ್ತಿರುವ ಹೋರಾಟ 20ನೇ ದಿನಕ್ಕೆ ತಲುಪಿದೆ. ಸರಕಾರ, ಮಂತ್ರಿಗಳು, ಕಾರ್ಮಿಕ ಇಲಾಖೆ ಯಾರೊಬ್ಬರೂ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.
ವಾರಗಟ್ಟಲೆ, ತಿಂಗಳುಗಟ್ಟಲೆ ಕಾರ್ಮಿಕರು ಶಾಂತ ರೀತಿಯಿಂದ ಪ್ರತಿಭಟಿಸುತ್ತಿದ್ದರೂ ಕ್ಯಾರೇ ಅನ್ನದ ಸರಕಾರ, ಮಂತ್ರಿಗಳು ಕಾರ್ಮಿಕರ ಹೋರಾಟ ತೀವ್ರ ಸ್ವರೂಪಕ್ಕೆ ತಿರುಗಿದ ತಕ್ಷಣ ರೈತರನ್ನು, ಕಾರ್ಮಿಕರನ್ನು ಕಳ್ಳರು, ದರೋಡೆಕೋರರು, ದಾಂಧಲೆಕೋರರು, ರಾಷ್ಟ್ರದ್ರೋಹಿಗಳು ಎಂದು ಬಿಂಬಿಸಿ ಪೊಲೀಸರ ಮೂಲಕ ಇಲ್ಲ ಸಲ್ಲದ ಪ್ರಕರಣಗಳನ್ನು ದಾಖಲಿಸಿ ಗೂಂಡಾಗಿರಿ ನಡೆಸುತ್ತಿವೆ ಎಂಬ ಅಸಮಾಧಾನ ವ್ಯಾಪಕವಾಗುತ್ತಿದೆ.
ವಿಸ್ಟ್ರಾನ್ ಕಂಪೆನಿ ಕಾರ್ಮಿಕರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ ಬಳಿಕ, “ಪ್ರಧಾನಿ ಮೋದಿ ತನಗೆ ಕರೆ ಮಾಡಿ ಕಂಪೆನಿ ಬಗ್ಗೆ ಕಳವಳ ವ್ಯಕ್ತಪಡಿಸಿದರು”ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಪ್ರಧಾನ ಮಂತ್ರಿಗಳಾಗಲಿ, ಮುಖ್ಯಮಂತ್ರಿಗಳಾಗಲಿ ಕಾರ್ಮಿಕರಿಗೆ ಸಂಬಳ ಕೊಡದೆ, ಅವರ ಹಕ್ಕುಗಳನ್ನು ಗೌರವಿಸದೆ ಶ್ರಮ ದೋಚಿರುವ ಬಗ್ಗೆ ಕಳಕಳಿ ವ್ಯಕ್ತಪಡಿಸಿಲ್ಲ. ಕೇಂದ್ರ, ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ಕಾನೂನುಗಳೇ ಈ ಅಶಾಂತಿಗೆ ಮೂಲ ಕಾರಣ ಎಂದು ಮೊದಲು ಅರಿತುಕೊಳ್ಳಬೇಕು.
ರಾಜ್ಯದ ಕಾರ್ಮಿಕ ಸಚಿವರಾದ ಶಿವರಾಂ ಹೆಬ್ಬಾರ್ ಕಂಪೆನಿಯಲ್ಲಿ ಮಹಿಳಾ ಕಾರ್ಮಿಕರನ್ನು ಅಸುರಕ್ಷಿತ ವಾತಾವರಣದಲ್ಲಿ ಹೆಚ್ಚು ಕಾಲ ದುಡಿಸಿಕೊಳ್ಳುತ್ತಿದ್ದುದನ್ನು, ಗುತ್ತಿಗೆ ಕಾರ್ಮಿಕರಿಗೆ ಸಂಬಳ ನೀಡದ ವಿಚಾರವನ್ನು ಅಲ್ಲಗಳೆದಿಲ್ಲ. ಕಂಪೆನಿಯು ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿರುವುದನ್ನು ಒಪ್ಪಿಕೊಂಡೂ ಅವರ ವಿರುದ್ಧ ಕ್ರಮ ಕೈಗೊಳ್ಳದೆ ಕಾರ್ಮಿಕರು ಕಾನೂನು ಕೈಗೆತ್ತಿಕೊಂಡಿದ್ದು ತಪ್ಪು ಎಂದಿದ್ದಾರೆ. ರಾಜ್ಯದ ಉಪಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಡಾ.ಅಶ್ವಥ್ ನಾರಾಯಣ್, “ಬೇಕಿದ್ದರೆ ಕಾರ್ಮಿಕರು ಕಾರ್ಮಿಕ ನ್ಯಾಯಾಲಯಕ್ಕೆ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳಿ”ಎಂದಿದ್ದಾರೆ. ಇದು ಸರಕಾರ ಆಡಳಿತ ನಡೆಸುವ ಕ್ರಮವೇ?
ಆಡಳಿತದ ಸಮಸ್ಯೆಗಳನ್ನು ನಿಭಾಯಿಸುವುದಕ್ಕೋಸ್ಕರವೇ ಸಂವಿಧಾನದಡಿ ಕಾರ್ಮಿಕ ಕಾಯ್ದೆಗಳನ್ನು ರೂಪಿಸಲಾಗಿದೆ. ದುಡಿಯುವ ವರ್ಗಗಳ ಸಮಸ್ಯೆಗಳನ್ನು ಬಗೆಹರಿಸಲು ಬೇಕಾದ ಮುತ್ಸದ್ದಿತನ ಮತ್ತು ಪ್ರಬುದ್ಧತೆ, ಮಾನವೀಯತೆ, ಅಂತಃಕರಣಗಳ ಅಗತ್ಯವಿದೆ.
ಬಿಕ್ಕಟ್ಟಿನ ಸಂದರ್ಭದಲ್ಲಿ ಸರಕಾರ ನಿಷ್ಕ್ರಿಯವಾಗದೆ, ನಿರ್ಲಕ್ಷ್ಯ ಮನೋಭಾವವನ್ನು ತೊರೆದು ಕಂಪೆನಿಗಳ ಆಡಳಿತ ಮಂಡಳಿಗಳನ್ನು ಮತ್ತು ಕಾರ್ಮಿಕರನ್ನು ಮಾತುಕತೆಗೆ ಕರೆದು ಸೌಹಾರ್ದಯುತವಾಗಿ ಸಮಸ್ಯೆಯನ್ನು ಇತ್ಯಾರ್ಥಪಡಿಸಿ ವ್ಯವಸ್ಥೆಯನ್ನು ಸುಗಮಗೊಳಿಸಬೇಕು ಹಾಗೂ ಜಾರಿಗೆ ತಂದಿರುವ ಎಲ್ಲ ಜನವಿರೋಧಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.