ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಆಸ್ಪತ್ರೆಗೆ ದಾಖಲು
ಬೆಂಗಳೂರು, ಜ.3: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಅನಾರೋಗ್ಯದಿಂದ ಇಲ್ಲಿನ ಆಸ್ಟರ್ ಆಸ್ಪತ್ರೆಗೆ ರವಿವಾರ ದಾಖಲಾಗಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಬೆಂಗಳೂರಿಗೆ ಹಿಂದಿರುಗುವಾಗ ಮಾರ್ಗಮಧ್ಯೆ ಚಿತ್ರದುರ್ಗದ ಹೋಟೆಲ್ ನವೀನ್ ರೇಜೆನ್ಸಿಗೆ ಮಧ್ಯಾಹ್ನ ಊಟಕ್ಕೆ ಬಂದಿದ್ದರು. ಈ ವೇಳೆ ಕಾರಿನಿಂದ ಇಳಿಯುವಾಗ ಅಸ್ವಸ್ಥರಾಗಿ, ಆರೋಗ್ಯ ಏರುಪೇರಾಗಿತ್ತು.
ತದನಂತರ, ಆಂಬ್ಯುಲೆನ್ಸ್ ಮೂಲಕ ಝೀರೋ ಟ್ರಾಫಿಕ್ನಲ್ಲಿ ಬೆಂಗಳೂರಿಗೆ ಕರೆತರಲಾಗಿದ್ದು, ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಆಸ್ಟರ್ ಆಸ್ಪತ್ರೆಯ ತುರ್ತು ವಿಭಾಗ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಸದಾನಂದಗೌಡ ಅವರ ಆರೋಗ್ಯಸ್ಥಿರವಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
"ಅಪ್ಪ ಕ್ಷೇಮವಾಗಿದ್ದಾರೆ'
ಆಸ್ಟರ್ ಆಸ್ಪತ್ರೆಗೆ ಚೆಕಪ್ಗೆ ಅಪ್ಪ ಬರುತ್ತಿದ್ದರು. ಹಾಗಾಗಿ ಈ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಮೊದಲ ಬಾರಿ ಅವರಿಗೆ ಹೀಗೆ ಆಗಿದ್ದು, ಅಪ್ಪ ಕ್ಷೇಮವಾಗಿದ್ದಾರೆ.
-ಕಾರ್ತಿಕ್ ಗೌಡ, ಸದಾನಂದಗೌಡ ಪುತ್ರ