ಧಾರವಾಡದ ಅಂದಿನ ಆ ದಿನಗಳು

Update: 2021-01-05 09:40 GMT


ಅಶೋಕ ಶೆಟ್ಟರ್

ಸೃಜನ ಮತ್ತು ಸೃಜನೇತರ ಪ್ರಕಾರಗಳೆರಡರಲ್ಲೂ ಆಸಕ್ತಿ ಹೊಂದಿರುವ ಅಶೋಕ ಶೆಟ್ಟರ್ ಕನ್ನಡದ ಗಮನಾರ್ಹ ಬರಹಗಾರರಲ್ಲೊಬ್ಬರು. ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ರಿಸರ್ಚ್ ಫೆಲೊ ಆಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದವರು. ‘ವಿಶ್ವವಿದ್ಯಾನಿಲಯದ ವಾಚನಾಲಯದೊಳಗೆ’, ‘ಕ್ಷಮಿಸು ತಂದೆ’ ಕವನ ಸಂಕಲನಗಳು. ‘ಸ್ಟಡೀಸ್ ಇನ್ ಕರ್ನಾಟಕ ಹಿಸ್ಟರಿ ಆ್ಯಂಡ್ ಕಲ್ಚರ್’ ಸಂಪುಟ 4 ಮತ್ತು ಸಂಪುಟ 5 ಹಾಗೂ ‘ಮಲೆಕರ್ನಾಟಕದ ಅರಸು ಮನೆತನಗಳು’ ಸಂಪಾದಿತ ಕೃತಿಗಳು. ‘ಚರಿತ್ರೆ, ಸಮಾಜ, ಸಾಹಿತ್ಯ’ -ಅಂತರ್ಶಿಸ್ತೀಯ ಆಯಾಮಗಳನ್ನು ಶೋಧಿಸುವ ಅವರ ಆಯ್ದ ಲೇಖನಗಳ ಸಂಗ್ರಹ. ಇತ್ತೀಚೆಗೆ ಪ್ರಕಟವಾದ ‘ಗದ್ಯಂ ಹೃದ್ಯಂ’ ಅಂಕಣ ಬರಹಗಳ ಸಂಕಲನ. ಸಾಹಿತ್ಯ ಮತ್ತು ಇತಿಹಾಸ ಕುರಿತು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಬರೆದ ಇವರ ಹಲವಾರು ಲೇಖನ/ಸಂಶೋಧನ ಬರಹಗಳು ಪ್ರಕಟವಾಗಿವೆ.

ಕರ್ನಾಟಕ ಕಾಲೇಜಿಗೆ ಪ್ರವೇಶ ಪಡೆದಾದ ಮೇಲೆ ಸಾಧನಕೇರಿಯ ಮೊದಲನೇ ಕ್ರಾಸಿನಲ್ಲಿ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಇದ್ದ ನನ್ನ ಒಬ್ಬ ಅಕ್ಕನ ಮನೆಯಲ್ಲಿ ವಾಸಿಸತೊಡಗಿದೆ. ಪಿಯುಸಿಯ ನಮ್ಮ ಪಠ್ಯಪುಸ್ತಕದಲ್ಲಿದ್ದ ‘ಕರಡಿ ಕುಣಿತ’ ಎಂಬ ಸರಳ ಕವಿತೆ ಮತ್ತು ಚಲನಚಿತ್ರಗೀತೆಗಳಾಗಿ ನನ್ನ ಕಿವಿಯ ಮೇಲೆ ಬೀಳುತ್ತಿದ್ದ ‘ಮೂಡಣ ಮನೆಯಾ ಮುತ್ತಿನ ನೀರಿನ ಎರಕವಾ ಹೊಯ್ದಿ’ ಎಂದು ನಿಸರ್ಗದ ಚಿತ್ರ ಕಟ್ಟಿಕೊಡುವ ಅಪೂರ್ವ ಚೆಲುವಿನ ಕವಿತೆ ಮತ್ತು ‘ಉತ್ತರದ್ರುವದಿಂ ದಕ್ಷಿಣದ್ರುವಕೂ ಚುಂಬಕ ಗಾಳಿಯು ಬೀಸುತಿದೆ’ ಎಂಬ ಸಂಕೀರ್ಣ ಕವಿತೆಗಳ ಕರ್ತೃ ದ.ರಾ.ಬೇಂದ್ರೆಯವರು ಬದುಕಿದ್ದ ಪರಿಸರವದು.

ಬೈಲಹೊಂಗಲದಲ್ಲಿ ನಾನು ಮುನಿಸಿಪಲ್ ಜಾಕ್ಸನ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ಸಮಯದಲ್ಲಿ, 1970ರ ದಶಕದ ಆದಿಭಾಗದಲ್ಲಿ ಅಲ್ಲಿಗೆ ಕಾಲೇಜು ಬಂತು. ಈಗ ನೂರು ವರ್ಷಗಳಷ್ಟು ಪುರಾತನವಾಗಿರುವ ನಮ್ಮ ಹೈಸ್ಕೂಲಿನ ಆವರಣದಲ್ಲೇ ಕಿತ್ತೂರು ರಾಣಿ ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಆ ಕಾಲೇಜು ರೂಪುಗೊಂಡಿತು. ಎಸೆಸೆಲ್ಸಿ ಮುಗಿಸಿ ಕುಂತವರು, ಟಿಸಿಎಚ್ ಮಾಡಿಕೊಂಡು ಇನ್ನೂ ಮಾಸ್ತರುಗಳೆಂದು ನೇಮಕ ಆಗದೇ ಇದ್ದವರು ಹೊಸ ಕಾಲೇಜಿನ ಸ್ಥಾಪನೆಯಿಂದ ರೋಮಾಂಚಿತರಾಗಿ ಪ್ರವೇಶ ಪಡೆದರು. ಒಳ್ಳೆಯ ಗುಣಮಟ್ಟದ ಉಪನ್ಯಾಸಕರು ಬಂದು ಸೇರಿಕೊಂಡರು. ಶಿವರಾಮ ಕಾರಂತರು ಮುಖ್ಯ ಅತಿಥಿಯಾಗಿ ಬಂದು ವಾರ್ಷಿಕ ಗ್ಯಾದರಿಂಗ್ ದೊಡ್ಡ ಪ್ರಮಾಣದಲ್ಲೇ ನಡೆದು ಯುವ ಹೃದಯಗಳಿಗೆ ಮುದನೀಡಿತು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಅಧ್ಯಾಪಕರು ಜಂಟಿಯಾಗಿ ನಟಿಸಿದ್ದ ನಾಟಕವೊಂದು ವಿಶಿಷ್ಟ ಬೆಳವಣಿಗೆಯಾಗಿತ್ತು. ನಾನು ಎಸೆಸೆಲ್ಸಿಯಲ್ಲಿ ಫೇಲಾಗಿ ಅಕ್ಟೋಬರ್ ಪೂರಕ ಪರೀಕ್ಷೆಯಲ್ಲಿ ಬಲು ಪ್ರಯಾಸದಿಂದ ಪಾಸಾಗಿ ಪಿಯುಸಿ ಆರ್ಟ್ಸ್ ವಿದ್ಯಾರ್ಥಿಯಾಗಿ ಆ ಕಾಲೇಜಿಗೆ ಪ್ರವೇಶ ಪಡೆದೆ. ಆ ನಮ್ಮ ನವೋದಿತ ಕಾಲೇಜಿನ ಒಂದೊಂದು ಕ್ಲಾಸ್ ರೂಮ್‌ಗಳು ಒಂದೊಂದು ಥರ ಇದ್ದವು. ಕಾಲೇಜಿನ ಪ್ರವೇಶದಲ್ಲೇ ಎಡಪಾರ್ಶ್ವದಲ್ಲಿ ಬಗ್ಗಿ ನೋಡಿದರೆ ಗಾಬರಿ ಆಗುವಷ್ಟು ಆಳದ ಒಂದು ಬಾವಿಯಿತ್ತು. ಅಷ್ಟು ಉದ್ದದ ಹಗ್ಗ ಎಲ್ಲಿ ಸಿಗುತ್ತದೆ? ಹಾಗಾಗಿ ಆ ಬಾವಿಯಲ್ಲಿ ಯಾರಾದರೂ ನೀರು ಸೇದಿದ್ದು ನಾನೆಂದೂ ನೋಡಲಿಲ್ಲ. ಅದರ ಪಕ್ಕ ಒಂದು ಕ್ಯಾಂಟಿನ್. ಅದಕ್ಕೆ ಹೊಂದಿಕೊಂಡಂತೆ ಒಂದು ಕ್ಲಾಸ್ ರೂಮ್ ಇತ್ತು. ಅದಕ್ಕೆ ಫ್ಲೋರಿಂಗ್ ಎಂಬುದೇನೂ ಇರಲಿಲ್ಲ. ಹಾಗೇ ನೆಲ. ತಾತ್ಕಾಲಿಕ ರಚನೆಯಾಗಿದ್ದ ಮತ್ತು ತಗಡಿನ ಶೀಟ್ಸ್ ಹೊದ್ದಿದ್ದ ಆ ಕ್ಲಾಸ್ ರೂಮ್‌ಗೆ ಏಕಮೇವ ಕಿಟಕಿ ಇತ್ತು. ಅದಕ್ಕೆ ಸರಳುಗಳು, ಕಟ್ಟಿಗೆಯ ಚೌಕಟ್ಟು ಇಂಥ ಸೌಭಾಗ್ಯಗಳೇನೂ ಇಲ್ಲದೆ ಸುಮ್ಮನೆ ಮೂರಡಿ ಉದ್ದ ನಾಲ್ಕಡಿ ಅಗಲ ಎಂಬ ಲೆಕ್ಕದಲ್ಲಿ ಆ ಕ್ಲಾಸ್ ರೂಮ್ ಎಂಬ ಶೆಡ್‌ನಲ್ಲಿ ಬೆಳಕು ಬರಲಿ ಎಂಬ ಕಾರಣಕ್ಕೆ ಗೋಡೆಯೋಪಾದಿಯಲ್ಲಿ ಇದ್ದ ತಗಡನ್ನು ಕೊರೆದು ಅದನ್ನು ರೂಪಿಸಲಾಗಿತ್ತು. ಒಮ್ಮೆ ಸಿದ್ದಣ್ಣವರ್ ಎಂಬ ಗಡಸು ಮುಖದ ಕನ್ನಡ ಪ್ರೊಫೆಸರು ಚೆನ್ನವೀರ ಕಣವಿಯವರ ಕವಿತೆಯೊಂದರ ‘ಬಡಿವಾರ ಮಾಡುತ್ತ ಬಸನಿಂಗಿ ಬಂದಾಗ ಓಡಿ ಹೋಗುವರೇನೋ ಬಡೇಮಿಯಾ, ಲಾಗ ಹೊಡೆಯಲೋ ಮಂಗ, ಲಾಗ ಹೊಡೆಯಲೋ ಮಂಗ, ಬಗ್ಗಿ ಧಣಿಯರ ಮುಂದೆ ಲಾಗ ಹೊಡಿಯೋ’ ಎಂಬ ಸಾಲುಗಳನ್ನು ವಾಚಿಸುತ್ತಿದ್ದಾಗ ಆ ಕಿಟಕಿಯ ಪಕ್ಕ ಕುಳಿತ ವಿದ್ಯಾರ್ಥಿಯೊಬ್ಬ ವಾಹ್ ವಾಹ್ ಎನ್ನತೊಡಗಿದ್ದು, ಅವರ ಕಿವಿಗೆ ಬಿದ್ದು ಯಾಂವಲೇ ಅಂವಾ? ವಾ ವಾ ಅನ್ನಾಕ್ ನಾ ಏನ್ ಶಾಯರಿ ಹೇಳಾಕತ್ತೇನೀ ಮಗನ, ಒದ್ನೆಂದರ ಆ ಕಿಡಕಿ ಆಚಿ ಕಡೆ ಬೀಳತಿ ಎಂದು ಬೈದಾಗಿನಿಂದ ಆ ಕಿಟಕಿಯ ಪಕ್ಕದ ಡೆಸ್ಕುಗಳಿಗೆ ಒಂದು ಗಾಂಭೀರ್ಯ ಪ್ರಾಪ್ತವಾಯಿತು! ಅಲ್ಲಿ ನಮ್ಮ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಪಾಠಗಳು ನಡೆಯುತ್ತಿದ್ದವು. ಅದರ ಪಕ್ಕಕ್ಕೆ ಒಂದು ಪಕ್ಕಾ ಕಟ್ಟಡ. ಅಲ್ಲಿ ಸಾಲಾಗಿ ಸಣ್ಣ ರೂಮುಗಳ ಒಂದು ವಿಂಗ್. ಅಲ್ಲಿ ಫಿಸಿಕ್ಸ್, ಮೆಥಮೆಟಿಕ್ಸ್ ಇವುಗಳನ್ನು ಮೇಜರ್ ವಿಷಯಗಳಾಗಿ ಆಯ್ದುಕೊಂಡವರ ಪದವಿ ಕ್ಲಾಸುಗಳು ನಡೆಯುತ್ತಿದ್ದವು. ಆಮೇಲೆ ಪ್ರಿನ್ಸಿಪಾಲ್ ಚೇಂಬರ್ ಮತ್ತು ಅದಕ್ಕೆ ಅಂಟಿಕೊಂಡಂತಿದ್ದ ಮತ್ತೊಂದು ವಿಂಗ್‌ನಲ್ಲಿ ಆಫೀಸು, ಸ್ಟಾಫ್ ರೂಮ್ಸ್ ಇತ್ಯಾದಿ. ಕೆಮಿಸ್ಟ್ರಿ ಬೇಕಾ.. ಅದು ಅದೋ ಅಲ್ಲಿ, ಕಿತ್ತೂರು ರಾಣಿ ಚೆನ್ನಮ್ಮ ಗರ್ಲ್ಸ್ ಹೈಸ್ಕೂಲ್‌ನ ಸೆರಗಿನಲ್ಲಿ ಹಸಿರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುವಲ್ಲಿ, ಅಂದರೆ ಉಳುಮೆ ಮಾಡಿದ ಎರೆಮಣ್ಣಿನ ಮಗ್ಗುಲಲ್ಲೇ ತನ್ನ ಲ್ಯಾಬ್‌ಗಳ ಸಮೇತ ಇತ್ತು. ನಿರ್ಮಾಣ ಹಂತದ ಇನ್ನೊಂದು ಎರಡಂತಸ್ತಿನ ಕಾಂಕ್ರಿಟ್ ಕಟ್ಟಡದ ವಿಶಾಲವಾದ ಕ್ಲಾಸ್ ರೂಮ್‌ಗಳಲ್ಲಿ ಪಿಯುಸಿ ಕಲೆ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗಾಗಿ, ಹಿಸ್ಟರಿ, ಪೊಲಿಟಿಕಲ್ ಸೈನ್ಸ್, ಇಕನಾಮಿಕ್ಸ್ ಕ್ಲಾಸುಗಳು ನಡೆದರೆ ಸೋಶಿಯಾಲಜಿ ಕ್ಲಾಸ್‌ಗೆ ನಾವು ಈ ಸಂಕೀರ್ಣದಿಂದ ಹೊರಗಿದ್ದ, ವಿಜಯ ಸೋಶಿಯಲ್ ಕ್ಲಬ್‌ನ ದೊಡ್ಡದಾದ ಬ್ಯಾಡ್ಮಿಂಟನ್ ಹಾಲ್‌ಗೆ ಶಿಫ್ಟ್ ಆಗುತ್ತಿದ್ದೆವು.


ನಾವು ಸಾಧನಕೇರಿಯ ಬಸ್ ಸ್ಟಾಪ್‌ನಲ್ಲಿ ನಿಂತಾಗ ಅಥವಾ ಕಾಲೇಜಿನಿಂದ ಮರಳಿ ಬರುವಾಗ ಮಗನ ಸ್ಕೂಟರ್‌ನ ಪಿಲಿಯನ್ ಮೇಲೆ ಧೋತರ ಉಟ್ಟು ಕೋಟು ತೊಟ್ಟು ಮುದುರಿ ಕುಳಿತು ಮರಾಠಿಯಲ್ಲಿ ಮಾತನಾಡುತ್ತ ಹೋಗುತ್ತಿದ್ದ ವಯೋವೃದ್ಧ ಬೇಂದ್ರೆ ನಮಗೆ ದಿನನಿತ್ಯದ ನೋಟ. ಒಮ್ಮೆಮ್ಮೆ ಸಂಜೆ ನೇರ ನಿಲುವಿನ ಗಂಭೀರವದನದ ಶಂಬಾ ಜೋಶಿಯವರು ನಿಧಾನಕ್ಕೆ ನಡೆದು ಹೋಗುತ್ತಿದ್ದುದೂ ಕಾಣುತ್ತಿತ್ತು. ಹಾಗೇ ಜರ್ಮನ್ ದವಾಖಾನೆ ಎಂದು ಪ್ರಸಿದ್ಧವಾಗಿರುವ ಹಾಸ್ಪಿಟಲ್ ದಿಕ್ಕಿನಲ್ಲಿ ಹೊರಟರೆ ಬೆಂಗಳೂರ್ ಹೊಟೇಲ್ ಎಂಬ ಬೋರ್ಡ್ ತಗಲಿಸಿಕೊಂಡಿದ್ದ ಒಂದು ಚಹದಂಗಡಿಯಾಚೆ ಕಾದಂಬರಿಕಾರ ಬಸವರಾಜ ಕಟ್ಟಿಮನಿಯವರು ಕೆಲಕಾಲ ನಡೆಸಿ, ಅವರ ಲೌಕಿಕ ವೈಫಲ್ಯದ ಪಳೆಯುಳಿಕೆಯಾಗಿ ನಿಂತಿದ್ದ ಒಂದು ಮುದ್ರಣಾಲಯವಿತ್ತು ಮತ್ತೂ ಮೇಲೇರಿ ಹೋಗಿ ಸಬರ್ಬನ್ ಪೊಲೀಸ್ ಸ್ಟೇಶನ್‌ನಿಂದ ಎಡಕ್ಕೆ ತಿರುಗಿದರೆ ಹುಚ್ಚರಾಸ್ಪತ್ರೆಯ ಕಾಂಪೌಂಡ್ ಗೋಡೆಯ ಎದುರು ಕವಿ-ನಾಟಕಕಾರ ಚಂದ್ರಶೇಖರ ಪಾಟೀಲರು (ಚಂಪಾ) ವಾಸವಾಗಿದ್ದ ಮನೆ ಇತ್ತು. ಇಡೀ ಸಾಧನಕೇರಿಯ ಪರಿಸರ ಹಸಿರುಟ್ಟ ಹೆಣ್ಣಿನಂತೆ ಕಂಗೊಳಿಸುತ್ತಿತ್ತು.

ಚಿನ್ನಿ ದಾಂಡು ಆಡುತ್ತಿದ್ದ ಒಂದು ಗುಂಪು ಮತ್ತು ಹಲವಾರು ಇತರ ಆಟ-ಹುಡುಗಾಟಗಳಲ್ಲಿ ನಿರತರಾಗಿರುತ್ತಿದ್ದ ಗುಂಪುಗಳು ದೂರದಲ್ಲಿ ಲೆಕ್ಚರರ್ ಬರುತ್ತಿರುವುದು ಕಣ್ಣಿಗೆ ಬೀಳುತ್ತಲೇ ಆಟ ಬರಖಾಸ್ತುಗೊಳಿಸಿ ಮೆಟಗುಡ್ ಸರ್ ಬಂದ್ರ್ ನಡೀರಲೇ ಎನ್ನುತ್ತ ಸಮಸ್ತ ಕ್ರೀಡಾ ಸಾಮಗ್ರಿಗಳ ಸಮೇತ ಕ್ಲಾಸಿನೊಳಗೆ ಸೇರುತ್ತಿದ್ದವು. ಆ ದಿನಗಳಲ್ಲಿ ನನಗೆ ಏಣಗಿ ನಟರಾಜನ ಜೊತೆ ಸ್ವಲ್ಪ ಹೆಚ್ಚಿನ ಒಡನಾಟವಿತ್ತು. ಅವನು ಕಾಮರ್ಸ್ ತೆಗೆದುಕೊಂಡಿದ್ದರೂ ಕೆಲವು ಐಚ್ಛಿಕ ವಿಷಯಗಳ ಕ್ಲಾಸುಗಳಲ್ಲಿ ನನಗೆ ಸಹಪಾಠಿಯಾಗಿದ್ದ. ಅವನನ್ನು ಬಿಟ್ಟರೆ ರಂಗನಟಿ ಮತ್ತು ಕಿರುತೆರೆ ಕಲಾವಿದೆ ರೇಣುಕಾ ಮುರಗೋಡ್ ಅವರ ಮಗ ಅಶೋಕ ನನ್ನ ಇನ್ನೊಬ್ಬ ಗೆಳೆಯನಾಗಿದ್ದ. 1975ರಲ್ಲ್ಲಿ ನನ್ನ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದು, ನಾನು ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗಿದ್ದೆ. ಸಮಾಜಶಾಸ್ತ್ರ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಈ ಮೂರರಲ್ಲಿ ಒಂದನ್ನು ಪ್ರಧಾನ ವಿಷಯವಾಗಿ ಆಯ್ದುಕೊಂಡು ನಾನು ನನ್ನ ಪದವಿ ವಿದ್ಯಾಭ್ಯಾಸವನ್ನು ಅಲ್ಲೇ ಮುಂದುವರಿಸಬಹುದಾಗಿತ್ತು. ಆದರೆ ನನಗೆ ಇತಿಹಾಸವನ್ನು ಪ್ರಧಾನ ವಿಷಯವನ್ನಾಗಿ ಓದಬೇಕೆಂಬ ಆಸೆ ಗಟ್ಟಿಯಾಗತೊಡಗಿತು. ಹಲವು ತೊಂದರೆ ತಾಪತ್ರಯಗಳ ನಡುವೆ ನಾನು ಧಾರವಾಡದ ಕರ್ನಾಟಕ ಕಾಲೇಜಿಗೆ ಪ್ರವೇಶ ಪಡೆದು ಬೈಲಹೊಂಗಲದಿಂದ ಹೊರಬಿದ್ದೆ. ಧಾರವಾಡ ನನಗೆ ಸಂಪೂರ್ಣ ಅಪರಿಚಿತ ಸ್ಥಳವೇನೂ ಆಗಿರಲಿಲ್ಲ. ಅಲ್ಲಿಯ ಕೃಷಿ ಕಾಲೇಜಿನಲ್ಲಿ ನನ್ನಣ್ಣ ಎಂಎಸ್ಸಿವರೆಗೆ ಓದುತ್ತಿದ್ದಾಗ ನಾನು ಅಲ್ಲಿಗೆ ಒಮ್ಮೆ ಹೋಗಿದ್ದೆ. ನನ್ನ ಸೋದರಮಾವ ನನ್ನ ತಾಯಿಯ ತವರೂರಾದ ಸತ್ತಿಗೇರಿಯಲ್ಲಿದ್ದ ಆಸ್ತಿ-ಪಾಸ್ತಿ ಮಾರಿಕೊಂಡು ಧಾರವಾಡಕ್ಕೆ ಸ್ಥಳಾಂತರಗೊಂಡಾಗ ಹಾವೇರಿಪ್ಯಾಟಿ ಎಂದು ಕರೆಯಲ್ಪಡುವ ಈಗ ಮುರುಘಾಮಠ ಇರುವ ಪ್ರದೇಶಕ್ಕೆ ಆಗಾಗ ಹೋಗಿ ಬಂದು ಮಾಡಿದ್ದೆ. ಕರ್ನಾಟಕ ಕಾಲೇಜಿಗೆ ಪ್ರವೇಶ ಪಡೆದಾದ ಮೇಲೆ ಸಾಧನಕೇರಿಯ ಮೊದಲನೇ ಕ್ರಾಸಿನಲ್ಲಿ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಇದ್ದ ನನ್ನ ಒಬ್ಬ ಅಕ್ಕನ ಮನೆಯಲ್ಲಿ ವಾಸಿಸತೊಡಗಿದೆ. ಪಿಯುಸಿಯ ನಮ್ಮ ಪಠ್ಯಪುಸ್ತಕದಲ್ಲಿದ್ದ ‘ಕರಡಿ ಕುಣಿತ’ ಎಂಬ ಸರಳ ಕವಿತೆ ಮತ್ತು ಚಲನಚಿತ್ರಗೀತೆಗಳಾಗಿ ನನ್ನ ಕಿವಿಯ ಮೇಲೆ ಬೀಳುತ್ತಿದ್ದ ‘ಮೂಡಣ ಮನೆಯಾ ಮುತ್ತಿನ ನೀರಿನ ಎರಕವಾ ಹೊಯ್ದಿ’ ಎಂದು ನಿಸರ್ಗದ ಚಿತ್ರ ಕಟ್ಟಿಕೊಡುವ ಅಪೂರ್ವ ಚೆಲುವಿನ ಕವಿತೆ ಮತ್ತು ‘ಉತ್ತರದ್ರುವದಿಂ ದಕ್ಷಿಣದ್ರುವಕೂ ಚುಂಬಕ ಗಾಳಿಯು ಬೀಸುತಿದೆ’ ಎಂಬ ಸಂಕೀರ್ಣ ಕವಿತೆಗಳ ಕರ್ತೃ ದ.ರಾ.ಬೇಂದ್ರೆಯವರು ಬದುಕಿದ್ದ ಪರಿಸರವದು. ನಾವು ಸಾಧನಕೇರಿಯ ಬಸ್ ಸ್ಟಾಪ್‌ನಲ್ಲಿ ನಿಂತಾಗ ಅಥವಾ ಕಾಲೇಜಿನಿಂದ ಮರಳಿ ಬರುವಾಗ ಮಗನ ಸ್ಕೂಟರ್‌ನ ಪಿಲಿಯನ್ ಮೇಲೆ ಧೋತರ ಉಟ್ಟು ಕೋಟು ತೊಟ್ಟು ಮುದುರಿ ಕುಳಿತು ಮರಾಠಿಯಲ್ಲಿ ಮಾತನಾಡುತ್ತ ಹೋಗುತ್ತಿದ್ದ ವಯೋವೃದ್ಧ ಬೇಂದ್ರೆ ನಮಗೆ ದಿನನಿತ್ಯದ ನೋಟ. ಒಮ್ಮೆಮ್ಮೆ ಸಂಜೆ ನೇರ ನಿಲುವಿನ ಗಂಭೀರವದನದ ಶಂಬಾ ಜೋಶಿಯವರು ನಿಧಾನಕ್ಕೆ ನಡೆದು ಹೋಗುತ್ತಿದ್ದುದೂ ಕಾಣುತ್ತಿತ್ತು. ಹಾಗೇ ಜರ್ಮನ್ ದವಾಖಾನೆ ಎಂದು ಪ್ರಸಿದ್ಧವಾಗಿರುವ ಹಾಸ್ಪಿಟಲ್ ದಿಕ್ಕಿನಲ್ಲಿ ಹೊರಟರೆ ಬೆಂಗಳೂರ್ ಹೊಟೇಲ್ ಎಂಬ ಬೋರ್ಡ್ ತಗಲಿಸಿಕೊಂಡಿದ್ದ ಒಂದು ಚಹದಂಗಡಿಯಾಚೆ ಕಾದಂಬರಿಕಾರ ಬಸವರಾಜ ಕಟ್ಟಿಮನಿಯವರು ಕೆಲಕಾಲ ನಡೆಸಿ, ಅವರ ಲೌಕಿಕ ವೈಫಲ್ಯದ ಪಳೆಯುಳಿಕೆಯಾಗಿ ನಿಂತಿದ್ದ ಒಂದು ಮುದ್ರಣಾಲಯವಿತ್ತು ಮತ್ತೂ ಮೇಲೇರಿ ಹೋಗಿ ಸಬರ್ಬನ್ ಪೊಲೀಸ್ ಸ್ಟೇಶನ್‌ನಿಂದ ಎಡಕ್ಕೆ ತಿರುಗಿದರೆ ಹುಚ್ಚರಾಸ್ಪತ್ರೆಯ ಕಾಂಪೌಂಡ್ ಗೋಡೆಯ ಎದುರು ಕವಿ-ನಾಟಕಕಾರ ಚಂದ್ರಶೇಖರ ಪಾಟೀಲರು (ಚಂಪಾ) ವಾಸವಾಗಿದ್ದ ಮನೆ ಇತ್ತು. ಇಡೀ ಸಾಧನಕೇರಿಯ ಪರಿಸರ ಹಸಿರುಟ್ಟ ಹೆಣ್ಣಿನಂತೆ ಕಂಗೊಳಿಸುತ್ತಿತ್ತು.

ಈಗ ಧಾರವಾಡ ಸಿಬಿಟಿ ಇರುವಲ್ಲಿ ರಸ್ತೆಯ ಪಕ್ಕಕ್ಕಿದ್ದ, ಸ್ವತಃ ಸೋಷಲಿಸ್ಟ್ ಚಳವಳಿಯ ಕುರಿತು ಅಭಿಮಾನ ಹೊಂದಿದ್ದ ಹಡಪದ ರಾಚಪ್ಪನ ಸಮತಾ ಹೇರ್ ಕಟಿಂಗ್ ಸಲೂನ್‌ನಲ್ಲಿ ಮತ್ತು ಸಿಟಿ ಪೊಲೀಸ್ ಠಾಣೆಯ ಸಮೀಪವಿದ್ದ ಹೊಟೇಲ್‌ವೊಂದರ ಅಟ್ಟದ ಮೇಲೆ ಇವರಲ್ಲಿ ಕೆಲವರೆಲ್ಲ ಸೇರಿ ಸಾಹಿತ್ಯ, ಸಿದ್ಧಾಂತ, ಹೋರಾಟ ಅಂತ ಚರ್ಚಿಸುತ್ತಿದ್ದುದಿತ್ತು. ಒಮ್ಮಿಮ್ಮೆ ಜಂಟಿ ಹೋರಾಟಗಳ ಸಂದರ್ಭಗಳಲ್ಲಿ ಕಮ್ಯುನಿಸ್ಟರು ಸೋಷಲಿಸ್ಟರೊಂದಿಗೆ ಕೈ ಜೋಡಿಸುತ್ತಿದ್ದರು. ಆದರೆ ಕಮ್ಯುನಿಸ್ಟರು ಅಂದರೆ ಸಿಪಿಐ ಮತ್ತು ಸಿಪಿಐ(ಎಂ)ನ ಸಂಗಾತಿಗಳು ತಮ್ಮಿಳಗೇ ಪರಸ್ಪರ ಗುದ್ದಾಡಿಕೊಳ್ಳುತ್ತ ದಾಯಾದಿಗಳ ಹಾಗೆ ಇರುತ್ತಿದ್ದರು. ಎಮರ್ಜೆನ್ಸಿಯಲ್ಲಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದ ಚಂಪಾ ಮತ್ತಿತರ ಲೋಹಿಯಾವಾದಿಗಳು ಕ್ರಿಯಾಶೀಲರಾಗಿದ್ದ ಲೇಖಕರ ಮತ್ತು ಕಲಾವಿದರ ಒಕ್ಕೂಟದ ಚಟುವಟಿಕೆಗಳು ನಡೆಯುತ್ತಿದ್ದವು, ಸ್ಥಗಿತವಾಗಿದ್ದ ಸಂಕ್ರಮಣ ಸಾಹಿತ್ಯ ಪತ್ರಿಕೆ ಪುನಃ ಪ್ರಕಟವಾಗತೊಡಗಿತು.

ಕಾಲೇಜಿನಲ್ಲಿ ನಮಗೆ ಐಚ್ಛಿಕ ಅಥವಾ ಬೇಸಿಕ್ ಕನ್ನಡ ಹಾಗೂ ಇಂಗ್ಲಿಷ್ ಭಾಷೆ ಕಲಿಸುವವರಲ್ಲೂ ಬುದ್ದಣ್ಣ ಹಿಂಗಮಿರೆ, ವೀಣಾ ಶಾಂತೇಶ್ವರ್ ಹೀಗೆ ಕೆಲವರು ಕವಿ-ಸಾಹಿತಿಗಳಿದ್ದರು. ಹಾಗೆ ಹಿಂದಿ ಭಾಷೆಯ ಅಧ್ಯಾಪಕರಾಗಿ ಸಿದ್ದಲಿಂಗ ಪಟ್ಟಣಶೆಟ್ಟಿ ಇದ್ದರು. ಪ್ರಾರಂಭಿಕವಾಗಿ ನಮ್ಮಲ್ಲಿ ಸುಪ್ತವಾಗಿದ್ದ ಸಾಹಿತ್ಯಾಸಕ್ತಿಗೆ ನೀರೆರೆದವರು ಬುದ್ದಣ್ಣ ಹಿಂಗಮಿರೆಯವರು ಮತ್ತು ಗುರುಲಿಂಗ ಕಾಪಸೆಯವರು. ವಿ.ಕೆ. ಗೋಕಾಕರು ಪ್ರಿನ್ಸಿಪಾಲರಾಗಿದ್ದಾಗ ಸಕ್ರಿಯವಾಗಿದ್ದು, ಆಮೇಲೆ ಸ್ಥಗಿತಗೊಂಡಿದ್ದ ಕಮಲ ಮಂಡಲ ಎಂಬ ವೇದಿಕೆಯೊಂದನ್ನು ಹಿಂಗಮಿರೆಯವರು ಸಜೀವಗೊಳಿಸಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕವನ ಸಂಕಲನವೊಂದನ್ನು ಪ್ರಕಟಿಸಿದರು. ಆಮೇಲೆ ರಂಜಾನ್ ದರ್ಗಾ, ರುದ್ರಪ್ಪ ಕಾಯಿ, ಸನತ್ ಕುಮಾರ ಬೆಳಗಲಿ, ಮಹಾಬಲೇಶ್ವರ ಕಾಟ್ರಹಳ್ಳಿ ಮೊದಲಾದ ಗೆಳೆಯರ ಒಡನಾಟದಲ್ಲಿ ಸಾಹಿತ್ಯಾಭಿರುಚಿ ನನ್ನಲ್ಲಿ ವೃದ್ಧಿಸುತ್ತ ಹೋಯಿತು. ಸಾಧನಕೇರಿಯ ಒಂದು ಪಾರ್ಶ್ವದಲ್ಲಿ ಒಂದನೇ ಕ್ರಾಸಿನಲ್ಲಿ ಇದ್ದ ನಾವು ಅನತಿ ದೂರದಲ್ಲಿದ್ದ ಇನ್ನೊಂದು ಮನೆಗೆ ಶಿಫ್ಟ್ ಆದೆವು. ನಾನು ಕಾಲೇಜಿನಿಂದ ಬರುವ ಹೋಗುವ ಮಾರ್ಗ ಬದಲಾಗಿ ಈ ಬೇರೆ ಮಾರ್ಗದ ಮಧ್ಯೆ ಇದ್ದ ಚಂದ್ರಶೇಖರ ಪಾಟೀಲರ ಮನೆಗೆ ಹೋಗುವುದು, ಚರ್ಚಿಸುವುದು, ಪುಸ್ತಕ ಇತ್ಯಾದಿ ಎರವಲು ಪಡೆಯುವುದು ಪ್ರಾರಂಭವಾಯಿತು. ಅವರ ಸಂಪಾದಕತ್ವದ ಸಂಕ್ರಮಣದ ಪುಟಗಳಲ್ಲಿ ನನ್ನ ಬರಹಗಳು ಪ್ರಕಟಗೊಳ್ಳತೊಡಗಿದವು.

1970ರ ದಶಕದ ಮಧ್ಯಭಾಗದಲ್ಲಿ ಅಂತರಂಗ ನಾಟಕ ಕೂಟ ಅಸ್ತಿತ್ವಕ್ಕೆ ಬಂದು ಬಿ.ವಿ.ಕಾರಂತರು ಬಂದು ಒಂದು ಶಿಬಿರ ನಡೆಸಿಕೊಟ್ಟು ಅದರಲ್ಲಿ ಸಂಪಿಗೆ ತೋಂಟದಾರ್ಯ, ಎ. ಮುರಿಗೆಪ್ಪ, ವೀರಣ್ಣ ರಾಜೂರು, ಪುಂಡಲೀಕ್ ಶೇಟ್, ಸಿದ್ದಲಿಂಗ ದೇಸಾಯಿ ಮುಂತಾದವರು ನಟಿಸಿದ ಚಂಪಾ ವಿರಚಿತ ‘ಗೋಕರ್ಣದ ಗೌಡಶಾನಿ’ ನಾಟಕ ರಂಗಪ್ರಯೋಗ ಕಂಡು ವಿವಾದ ಸೃಷ್ಟಿಸಿತ್ತು. ಭಾರತದ ರಾಜಕಾರಣದಲ್ಲಿ ಜನಪರ ಚಳವಳಿಗಳು ವ್ಯಾಪಕವಾಗಿ ಹಬ್ಬುತ್ತಿದ್ದ ದಿನಗಳವು. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ವಿವಿಧ ನೆಲೆಯಲ್ಲಿ ಹೋರಾಟಗಳು ನಡೆಯುತ್ತಿದ್ದವು. ಕರ್ನಾಟಕದಲ್ಲಿ ವಿದ್ಯಾರ್ಥಿ ಯುವಜನರ ಮಧ್ಯೆ ಮತ್ತು ಸಾಂಸ್ಕೃತಿಕ ವಲಯದಲ್ಲಿ ಕಮ್ಯುನಿಸ್ಟ್ ಮತ್ತು ಸೋಷಲಿಸ್ಟ್ ಚಳವಳಿ ಹರಹು ಪಡೆಯುತ್ತಿದ್ದವು. ಗಾಂಧಿಯನ್ನು ನೆಪವಾಗಿಟ್ಟುಕೊಂಡು ಒಂದು ಕವಿಗೋಷ್ಠಿ ಆಯೋಜಿತವಾಗಿ ಅದರಲ್ಲಿ ಇಂದಿರಾ ಗಾಂಧಿ, ಸಂಜಯ ಗಾಂಧಿಯನ್ನು ವಿಡಂಬಿಸುವ ಮತ್ತು ತುರ್ತು ಪರಿಸ್ಥಿತಿಯನ್ನು ವಿರೋಧಿಸುವ ಕವಿತೆಗಳದ್ದೇ ಸಿಂಹಪಾಲಿತ್ತು. 1977ರಲ್ಲಿ ವಿಜಯ ಪಾಟೀಲ್ ಕಪ್ಪುಜನರ ಕೆಂಪು ಕಾವ್ಯವೆಂಬ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯ ಧ್ವನಿಯ ಕವಿತೆಗಳಿದ್ದ ಪ್ರಾತಿನಿಧಿಕ ಸಂಕಲನವೊಂದನ್ನು ಪ್ರಕಟಿಸಿದ. ಅದನ್ನು ರಾತ್ರಿ ಗೊಲ್ಲರ ಕಾಲನಿಯ ಒಂದು ಕ್ರಾಸ್‌ನಲ್ಲಿ ರಸ್ತೆ ಮೇಲೆ ಒಂದು ಟೇಬಲ್ ನಾಲ್ಕಾರು ಖುರ್ಚಿ ಹಾಕಿ ನಾವು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾದಂಬರಿಕಾರ್ತಿ ಗೀತಾ ಕುಲಕರ್ಣಿಯವರ ಮಗಳು ರಂಜನಾ ಬಿಡುಗಡೆಗೊಳಿಸಿದ್ದರು. ಸಿದ್ದಲಿಂಗಯ್ಯ ಬರೆದ ‘ಹೊಲೆಮಾದಿಗರ ಹಾಡು’ ಸಂಕಲನದ ಪದ್ಯಗಳನ್ನು ಅದೇ ಆಗ ತಲೆಯೆತ್ತಿದ್ದ ದಲಿತ ಸಂಘರ್ಷ ಸಮಿತಿಯ ಹುಡುಗರು ಹಾಡತೊಡಗಿದ್ದರು. ಜೆಪಿ ಚಳವಳಿಯ ಪ್ರಭಾವದಿಂದ ಇಲ್ಲೂ ಕರ್ನಾಟಕ ನವನಿರ್ಮಾಣ ಚಳವಳಿ ಕ್ರಿಯಾಶೀಲವಾಗಿತ್ತು. ವಿಚಾರವಾದಿಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದು ಪುಟ್ಟಪರ್ತಿ ಸಾಯಿಬಾಬಾರ ಭಕ್ತರಾಗಿದ್ದ ಧಾರವಾಡದ ಖ್ಯಾತನಾಮರನ್ನು ಕುಟುಕತೊಡಗಿತು. ಶ್ರೀಲಂಕಾದ ವಿಚಾರವಾದಿ ಕೊವೂರ್ ಬಂದಾಗ ಟ್ಯಾಗೋರ್ ಹಾಲ್‌ನಲ್ಲಿ ದೊಡ್ಡದೊಂದು ಕಾರ್ಯಕ್ರಮ ನಡೆಯಿತು. 1980ರ ಹೊತ್ತಿಗೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಚಳವಳಿ ಪ್ರಾರಂಭವಾಗಿ ನರಗುಂದದಿಂದ ಬೆಂಗಳೂರಿನವರೆಗೆ ನಡೆದ ಪಾದಯಾತ್ರೆಗೆ ಅಪೂರ್ವ ಜನಬೆಂಬಲ ವ್ಯಕ್ತವಾಗಿತ್ತು. ಕ್ಯಾಪಿಟೇಶನ್ ಕುಳಗಳ ಲಾಭದಾಸೆಯಿಂದ ಹೊಸಹೊಸದಾಗಿ ತಲೆ ಎತ್ತುತ್ತಿದ್ದ ಮೆಡಿಕಲ್ ಕಾಲೇಜುಗಳ ವಿರುದ್ಧ ವೈದ್ಯ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದರು. ಇಡೀ ವಾತಾವರಣದಲ್ಲಿ ಇದ್ದ ಆ ಹೋರಾಟದ ಕಾವಿನ ದಿನಗಳಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಸಮುದಾಯ ತಲೆ ಎತ್ತಿದವು. ಧಾರವಾಡ ಈ ಎಲ್ಲ ಬೆಳವಣಿಗೆಗಳ ಮುಖ್ಯ ಕೇಂದ್ರಗಳಲ್ಲೊಂದಾಗಿತ್ತು. 1975-80ರ ನಡುವೆ ಮಾರ್ಕ್ಸ್ ವಾದ, ಲೋಹಿಯಾವಾದ, ಗಾಂಧಿ, ನೆಹರೂ, ಅಂಬೇಡ್ಕರ್ ವಿಚಾರಗಳ ಕುರಿತು ಇನ್ನಿಲ್ಲದಂತೆ ವಾದಿಸುತ್ತಿದ್ದ ಶ್ರೀಧರ್ ಕಲಿವೀರ, ವಿಜಯ ಪಾಟೀಲ್, ಗುಡಿಹಳ್ಳಿ ನಾಗರಾಜ, ವಿ.ಎನ್.ಹಳಕಟ್ಟಿ, ಮೋಹನಕುಮಾರ ಕೊಂಡಜ್ಜಿ, ಮೋಹನ ಹಿಪ್ಪರಗಿ, ವಿಠ್ಠಲ ಕಮ್ಮಾರ, ಶಿವಯೋಗಿ ಪ್ಯಾಟಿಶೆಟ್ಟರ, ಮಹಾದೇವ ಹೊರಟ್ಟಿ, ಅಪ್ಪಾಸಾಹೇಬ್ ಯರನಾಳ್, ಮೋಹನ್ ಉತ್ತಂಗಿ, ದಿವಾಕರ್ ಕುಲಕರ್ಣಿ, ಯಡೂರ್ ಮಹಾಬಲ, ವೀರಣ್ಣ ದೇಸಾಯಿ, ಜಿ.ಸಿ.ಜೋಗೂರ್, ಸನತ್ ಕುಮಾರ ಬೆಳಗಲಿ, ರುದ್ರಪ್ಪಾ ಕಾಯಿ, ಶರಣ್ ಮಾಲೀಪಾಟೀಲ್, ಸಿದ್ದಲಿಂಗ ದೇಸಾಯಿ, ಸರಜೂ ಕಾಟ್ಕರ್, ಸತೀಶ್ ಕುಲಕರ್ಣಿ, ಮಹಾಬಲೇಶ್ವರ ಕಾಟ್ರಹಳ್ಳಿ, ಜಗದೀಶ್ ಮಂಗಳೂರಮಠ್, ಅಲ್ಲಮಪ್ರಭು ಬೆಟ್ಟದೂರ್, ಹೇಮಾ ಹೊನ್ನಾಪೂರಮಠ್, ಜಯಲಕ್ಷ್ಮೀ ಆದ್ಯ, ಮೀರಾ ದೇಶಪಾಂಡೆ, ತಾರಾ ಹೆಗಡೆ ಹೀಗೆ ಹೊಸ ಬಗೆಯ ಚಿಂತನೆಗಳತ್ತ ಒಲವು ಹೊಂದಿದ್ದ ಯುವಕ-ಯುವತಿಯರ ದೊಡ್ಡ ದಂಡೆ ಧಾರವಾಡ-ಹುಬ್ಬಳ್ಳಿ ಅವಳಿ ನಗರಗಳಲ್ಲಿತ್ತು. ಈಗ ಧಾರವಾಡ ಸಿಬಿಟಿ ಇರುವಲ್ಲಿ ರಸ್ತೆಯ ಪಕ್ಕಕ್ಕಿದ್ದ, ಸ್ವತಃ ಸೋಷಲಿಸ್ಟ್ ಚಳವಳಿಯ ಕುರಿತು ಅಭಿಮಾನ ಹೊಂದಿದ್ದ ಹಡಪದ ರಾಚಪ್ಪನ ಸಮತಾ ಹೇರ್ ಕಟಿಂಗ್ ಸಲೂನ್‌ನಲ್ಲಿ ಮತ್ತು ಸಿಟಿ ಪೊಲೀಸ್ ಠಾಣೆಯ ಸಮೀಪವಿದ್ದ ಹೊಟೇಲ್‌ವೊಂದರ ಅಟ್ಟದ ಮೇಲೆ ಇವರಲ್ಲಿ ಕೆಲವರೆಲ್ಲ ಸೇರಿ ಸಾಹಿತ್ಯ, ಸಿದ್ಧಾಂತ, ಹೋರಾಟ ಅಂತ ಚರ್ಚಿಸುತ್ತಿದ್ದುದಿತ್ತು. ಒಮ್ಮಿಮ್ಮೆ ಜಂಟಿ ಹೋರಾಟಗಳ ಸಂದರ್ಭಗಳಲ್ಲಿ ಕಮ್ಯುನಿಸ್ಟರು ಸೋಷಲಿಸ್ಟರೊಂದಿಗೆ ಕೈ ಜೋಡಿಸುತ್ತಿದ್ದರು. ಆದರೆ ಕಮ್ಯುನಿಸ್ಟರು ಅಂದರೆ ಸಿಪಿಐ ಮತ್ತು ಸಿಪಿಐ(ಎಂ)ನ ಸಂಗಾತಿಗಳು ತಮ್ಮಿಳಗೇ ಪರಸ್ಪರ ಗುದ್ದಾಡಿಕೊಳ್ಳುತ್ತ ದಾಯಾದಿಗಳ ಹಾಗೆ ಇರುತ್ತಿದ್ದರು. ಎಮರ್ಜೆನ್ಸಿಯಲ್ಲಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದ ಚಂಪಾ ಮತ್ತಿತರ ಲೋಹಿಯಾವಾದಿಗಳು ಕ್ರಿಯಾಶೀಲರಾಗಿದ್ದ ಲೇಖಕರ ಮತ್ತು ಕಲಾವಿದರ ಒಕ್ಕೂಟದ ಚಟುವಟಿಕೆಗಳು ನಡೆಯುತ್ತಿದ್ದವು, ಸ್ಥಗಿತವಾಗಿದ್ದ ಸಂಕ್ರಮಣ ಸಾಹಿತ್ಯ ಪತ್ರಿಕೆ ಪುನಃ �

Writer - ಅಶೋಕ ಶೆಟ್ಟರ್

contributor

Editor - ಅಶೋಕ ಶೆಟ್ಟರ್

contributor

Similar News