ಚಿಕ್ಕಬಳ್ಳಾಪುರ-ಹುಬ್ಬಳ್ಳಿಯಲ್ಲಿ ಲೀಥಿಯಂ ಬ್ಯಾಟರಿ ಘಟಕಗಳ ಸ್ಥಾಪನೆ: ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ
ಬೆಂಗಳೂರು, ಜ. 30: ವಾಯುಮಾಲಿನ್ಯ ನಿವಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳಿಗೆ ಹೆಚ್ಚು ಉತ್ತೇಜನ ನೀಡಲಾಗುವುದು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಎರಡು ಲೀಥಿಯಂ ಬ್ಯಾಟರಿ ಘಟಕಗಳು ಸ್ಥಾಪನೆಯಾಗುತ್ತಿವೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದ ಪೂರ್ವದ್ವಾರದಲ್ಲಿ ರೋಟರಿ ಕ್ಲಬ್ ಹಮ್ಮಿಕೊಂಡಿದ್ದ ಎಲೆಕ್ಟ್ರಿಕ್ ವಾಹನಗಳ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಲೀಥಿಯಂ ಬ್ಯಾಟರಿಗಳನ್ನು ತಯಾರಿಸುವ ಬೃಹತ್ತಾದ ಎರಡು ಕೈಗಾರಿಕೆಗಳ ಪೈಕಿ ಒಂದು ಹುಬ್ಬಳ್ಳಿ ಭಾಗದಲ್ಲಿ, ಇನ್ನೊಂದು ಚಿಕ್ಕಬಳ್ಳಾಪುರ ಕಡೆ ಸ್ಥಾಪನೆಯಾಗುತ್ತಿವೆ. ಇದರ ಜತೆಗೆ, ಅತ್ಯುತ್ತಮವಾದ ಇಂಧನ ನೀತಿಯನ್ನು ರಾಜ್ಯ ಸರಕಾರ ರೂಪಿಸುತ್ತಿದೆ ಎಂದು ಹೇಳಿದರು.
2018ರಲ್ಲಿಯೇ ರಾಜ್ಯವೂ ದೇಶದಲ್ಲೇ ಮೊದಲಿಗೆ ಎಲೆಕ್ಟ್ರಿಕ್ ವಾಹನಗಳ ನೀತಿಯನ್ನು ರೂಪಿಸಿ ಜಾರಿಗೆ ತಂದಿದೆ. ಚಾಚಿರ್ಂಗ್ ಸ್ಟೇಷನ್ಗಳಲ್ಲಿ ಗ್ರಾಹಕರಿಗೆ ರಿಯಾಯಿತಿ ನೀಡಲಾಗುತ್ತಿದ್ದು; ವಾಣಿಜ್ಯ ಬಳಕೆಯ ವಿದ್ಯುತ್ನ ಪ್ರತಿ ಯೂನಿಟ್ಗೆ 9 ರೂ. ಇದ್ದರೆ, ಎಲೆಕ್ಟ್ರಿಕ್ ವಾಹನಗಳಿಗೆ 5 ರೂ.ದರದಲ್ಲಿಯೇ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ತಯಾರಕರು ವಾಹನವನ್ನು ಮಾತ್ರ ನೀಡಲಿದ್ದಾರೆ. ಗ್ರಾಹಕರು ಬ್ಯಾಟರಿಯನ್ನು ಬಾಡಿಗೆಗೆ ಪಡೆದುಕೊಂಡು ವಾಹನ ಚಾಲನೆ ಮಾಡುವ ದಿನಗಳು ದೂರವಿಲ್ಲ. ರಸ್ತೆಗಳ ಉದ್ದಗಲಕ್ಕೂ ‘ಬ್ಯಾಟರಿ ಬ್ಯಾಂಕ್'ಗಳು ಸ್ಥಾಪನೆಯಾಗಲಿದ್ದು, ಅವು ಪೆಟ್ರೋಲ್ ಬಂಕ್ಗಳಂತೆ ಕೆಲಸ ಮಾಡಲಿವೆ. ಮೊದಲೇ ಅವುಗಳನ್ನು ಚಾರ್ಚ್ಮಾಡಿ ಇಟ್ಟಿರಲಾಗುತ್ತದೆ. ಬ್ಯಾಟರಿಯನ್ನು ವಾಹನಕ್ಕೆ ಅಳವಡಿಸಿಕೊಂಡು ಹೋಗುವ ವ್ಯವಸ್ಥೆ ಅತಿಬೇಗನೇ ರಾಜ್ಯದಲ್ಲಿ ಕಾಣಬಹುದು. ಇದರಿಂದ ಎಲೆಕ್ಟ್ರಿಕ್ ವಾಹನಗಳ ದರವೂ ಕಡಿಮೆ ಇರುತ್ತದೆ ಎಂದು ತಿಳಿಸಿದರು.
ಎಲೆಕ್ಟ್ರಿಕ್ ವಾಹನಗಳ ಉದ್ಯಮ ಬೆಳೆಯುತ್ತಿರುವ ವೇಗವನ್ನು ನೋಡಿದರೆ, ಇನ್ನು ಕೇವಲ ಹತ್ತು ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳು ಕಣ್ಮರೆಯಾಗಬಹುದು. ರಾಜ್ಯದಲ್ಲಿ ಈ ಕ್ಷೇತ್ರಕ್ಕೆ ಸರಕಾರ ಹೆಚ್ಚು ಉತ್ತೇಜನ ನೀಡುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಚಾರ್ಜಿಂಗ್ ಸ್ಟೇಷನ್ಗಳನ್ನು ಮಾಡಲು ಬೆಸ್ಕಾಂ ನೋಡೆಲ್ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ಬೆಸ್ಕಾಂ ವತಿಯಿಂದ 150 ಚಾರ್ಜಿಂಗ್ ಸ್ಟೇಷನ್ಗಳನ್ನು ಮಾಡಲಾಗಿದೆ. ಇನ್ನೂ 150 ಚಾಚಿರ್ಂಗ್ ಸ್ಟೇಷನ್ಗಳನ್ನು ಸ್ಥಾಪಿಸಲು ಎನ್ಟಿಪಿಸಿ ಜತೆ ಕೈಜೋಡಿಸಲಾಗಿದೆ ಎಂದು ಅವರು ತಿಳಿಸಿದರು.